

ಬೆಳಗಾವಿ, 06 ಜುಲೈ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಇಂದು ಬೆಳಗಾವಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಯ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ. ಜುಲೈ 10ರಿಂದ 12ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ದೇಶದಾದ್ಯಂತದ ಸಂಘದ ಹಿರಿಯ ಪ್ರಚಾರಕರು ಹಾಗೂ ಸಂಘಪ್ರೇರಿತ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಸಂಘದ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ ನೀಡಿರುವ ಮಾಹಿತಿ ಪ್ರಕಾರ, ಯುಗಾಬ್ದ 5128, ವಿಕ್ರಮ ಸಂವತ್ 2083ರ ಜ್ಯೇಷ್ಠ (ಉತ್ತರ ಭಾರತದಲ್ಲಿ ಆಷಾಢ) ಕೃಷ್ಣ ದಶಮಿ, ಏಕಾದಶಿ, ದ್ವಾದಶಿ ಹಾಗೂ ತ್ರಯೋದಶಿ ತಿಥಿಗಳಾದ ಜುಲೈ 10, 11 ಮತ್ತು 12ರಂದು ಸಭೆ ನಡೆಯಲಿದೆ.
ಸಭೆಯಲ್ಲಿ ಸಂಘದ ಒಟ್ಟು 11 ಕ್ಷೇತ್ರಗಳು ಹಾಗೂ 46 ಪ್ರಾಂತಗಳಿಂದ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಮತ್ತು ಸಹ ಕ್ಷೇತ್ರ ಪ್ರಚಾರಕರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಸಂಘದಿಂದ ಪ್ರೇರಿತ 32 ವಿವಿಧ ರಾಷ್ಟ್ರೀಯ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಸಚಿವರೂ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಮಾರ್ಚ್ನಲ್ಲಿ ನಡೆದ ಪ್ರತಿನಿಧಿ ಸಭೆಯ ನಂತರ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ದೇಶದಾದ್ಯಂತ ನಡೆದ ಸಂಘದ ವಿವಿಧ ತರಬೇತಿ ವರ್ಗಗಳ ಪರಿಶೀಲನೆ, ಶಾಖಾ ವಿಸ್ತರಣೆಯ ಪ್ರಗತಿ, ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
ಸಂಘದ ಶತಮಾನೋತ್ಸವ ವರ್ಷವನ್ನು ಅಂಗೀಕರಿಸಿ ದೇಶದಾದ್ಯಂತ ಆರಂಭಿಸಿರುವ ಶಾಖಾ ವಿಸ್ತರಣಾ ಅಭಿಯಾನದ ಪರಿಶೀಲನೆ, ಮುಂದಿನ ದಿನಗಳಲ್ಲಿ ಗರಿಷ್ಠ ಶಾಖೆಗಳ ಸ್ಥಾಪನೆಗೆ ರೂಪಿಸಬೇಕಾದ ಕಾರ್ಯಯೋಜನೆ, 2026ರ ತರಬೇತಿ ವರ್ಗಗಳ ವರದಿ ಹಾಗೂ ವಿಮರ್ಶೆ, ವಿಜಯದಶಮಿ (ಅಕ್ಟೋಬರ್ 20, 2026)ರವರೆಗೆ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಇದರೊಂದಿಗೆ, ಪ್ರಸಕ್ತ ರಾಷ್ಟ್ರೀಯ ಪರಿಸ್ಥಿತಿ, ಜನಗಣತಿ ಸೇರಿದಂತೆ ಸಮಕಾಲೀನ ಮಹತ್ವದ ವಿಷಯಗಳ ಬಗ್ಗೆಯೂ ಹಿರಿಯ ಪ್ರಚಾರಕರು ತಮ್ಮ ಅನುಭವಗಳನ್ನು ಹಂಚಿಕೊಂಡು ಚರ್ಚೆ ನಡೆಸಲಿದ್ದಾರೆ.
ಸಭೆಯಲ್ಲಿ ಸರಸಂಘಚಾಲಕ ಮೋಹನ್ ಭಾಗವತ್, ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರ್ಕಾರ್ಯವಾಹರಾದ ಕೃಷ್ಣಗೋಪಾಲ್, ಸಿ.ಆರ್. ಮುಕುಂದ್, ಅರುಣ್ ಕುಮಾರ್, ರಾಮದತ್ತ ಚಕ್ರಧರ್, ಆಲೋಕ್ ಕುಮಾರ್ ಹಾಗೂ ಅತುಲ್ ಲಿಮಯೆ ಸೇರಿದಂತೆ ಅಖಿಲ ಭಾರತೀಯ ಕಾರ್ಯವಿಭಾಗದ ಪ್ರಮುಖರು ಹಾಗೂ ಕಾರ್ಯಕಾರಿಣಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.