
ಕೋಲಾರ, ೦೨ ಮೇ (ಹಿ.ಸ) :
ಆ್ಯಂಕರ್ : ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಸುರೇಶ್ ಬಾಬು, ಶಿಕ್ಷಕರ ಗೆಳೆಯರ ಬಳಗದ ಅಧ್ಯಕ್ಷ ಕೋರಗಂಡಹಳ್ಳಿ ನಾರಾಯಣಸ್ವಾಮಿ, ಅನಿಲ್ ಕುಮಾರ್ ನೇತೃತ್ವದ ತಂಡ ಎಲ್ಲಾ ೨೦ ಸ್ಥಾನಗಳಲ್ಲೂ ಜಯಭೇರಿ ಬಾರಿಸುವ ಮೂಲಕ ಹಾಲಿ ನೌಕರರ ಸಂಘದ ಅಧ್ಯಕ್ಷ ಅಜಯ್ಕುಮಾರ್ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.
ಚುನಾವಣೆ ನಡೆದ ಎಲ್ಲಾ ೨೦ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿರುವ ಅನಿಲ್ಕುಮಾರ್ ಹಾಗೂ ಶಿಕ್ಷಕ ಗೆಳೆಯರ ಬಳಗದ ತಂಡ ಗೆಲುವಿನ ನಗೆ ಬೀರಿದ್ದು, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದವರೆಂದರೆ ನೌಕರರ ಸಂಘದ ಹಾಲಿ ನಿರ್ದೇಶಕರೂ ಆಗಿರುವ ಎಸ್.ಬಿ ವೆಂಕಟಾಚಲಪತಿ ಗೌಡ - ೫೯೪ ಮತ ಹಾಗೂ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷರೂ ಆಗಿರುವ ಅನಿಲ್ ಕುಮಾರ್ - ೬೯೭ ಮತ ಪಡೆದು ಗೆಲುವು ದಾಖಲಿಸಿದ್ದಾರೆ. ಉಳಿದಂತೆ ಅಶ್ವಥಪ್ಪ - ೬೦೬ ಮತ, ಅಯಾಜ್ ಅಹಮದ್ - ೫೩೧ ಮತ , ಕೃಷ್ಣಪ್ಪ ಎನ್ - ೬೨೦ ಮತ, ಮುನಿರಾಜು .ಸಿ -೬೨೮ ಮತ , ನಾರಾಯಣಸ್ವಾಮಿ .ಸಿ - ೬೫೮ ಮತ, ನಾರಾಯಣಸ್ವಾಮಿ .ಎಸ್ - ೫೯೬ ಮತ, ಸತೀಶ .ಬಿ - ೬೧೬ ಮತ, ಶಿವರಾಜ .ಕೆ - ೫೬೮ ಮತ, ಸೋಮಶೇಖರ ವಿ - ೫೯೦ ಮತ, ಸೊಣ್ಣೇಗೌಡ .ಕೆ.ಆರ್ - ೬೨೧ ಮತ ಹಾಗೂ ಸುಬ್ರಮಣ್ಯಂ .ಎಂ.ವಿ. - ೫೮೬ ಮತ ಪಡೆದು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಮಹಿಳಾ ಕ್ಷೇತ್ರದಿಮದ ವಿಜೇತ ಪದಾಧಿಕಾರಿಗಳೆಂದರೆ ಶಿಕ್ಷಕರಾದ ವಿ.ಭಾಗ್ಯಲಕ್ಷö್ಮಮ್ಮ, ಕೆ.ಭಾಗ್ಯಮ್ಮ, ಕೆ.ಭಾರತಿ, ಎಸ್.ಜಯಲಕ್ಷಿö್ಮ, ರೇಷ್ಮತಲಾಖ್ ಖಾನಂ, ಆರ್.ಸವಿತಾ, ವಿ.ಮಂಜುಳಾ ಆಯ್ಕೆಯಾಗಿದ್ದಾರೆ.
ಎಲ್ಲಾ ೨೦ ಸ್ಥಾನಗಳು ಶಿಕ್ಷಕ ಗೆಳೆಯರ ಬಳಗ, ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಸುರೇಶ್ಬಾಬು ಹಾಗೂ ಅನಿಲ್ ಕುಮಾರ್ ಬಣದ ಪಾಲಾಗಿದೆ. ಕಳೆದ ಚುನಾವಣೆಯಲ್ಲೂ ಜಿ.ಸುರೇಶ್ಬಾಬು ನೇತೃತ್ವದ ಬಣ ೨೦ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಕೆಲವು ಮುಖಂಡರು ನಿಷ್ಟೆ ಬದಲಿಸಿದ್ದು, ಬೇರೆ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿಯೂ ಶಿಕ್ಷಕ ಗೆಳೆಯರ ಬಳಗ,ಅನಿಲ್ ಕುಮಾರ್,ಜಿ.ಸುರೇಶ್ಬಾಬು ಅವರ ಪ್ರಯತ್ನದಿಂದಾಗಿ ಮತ್ತೆ ಎಲ್ಲಾ ೨೦ ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ವಿರೋಧಿ ತಂಡಕ್ಕೆ ತಿರುಗೇಟು ನೀಡಿದ್ದಾರೆ.
ನೌಕರರ ಸಂಘದ ಚುನಾವಣೆಯಲ್ಲಿ ಸುರೇಶ್ಬಾಬು ತಂಡದಲ್ಲಿ ಗುರುತಿಸಿಕೊಂಡಿದ್ದ ನೌಕರರ ಸಂಘದ ಹಾಲಿ ನಿರ್ದೇಶಕ ವೆಂಕಟಾಚಲಪತಿಗೌಡ ಗೆಲುವು ದಾಖಲಿಸಿದ್ದರು. ಇದೀಗ ಮತ್ತೆ ಗೆಲ್ಲುವ ಮೂಲಕ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಈ ಅಭೂತಪೂರ್ವ ಗೆಲುವಿಗೆ ಶಿಕ್ಷಕ ಗೆಳೆಯರ ಬಳಗದ ನಿರಂತರ ಶೈಕ್ಷಣಿಕ ಸೇವೆಯೂ ಕಾರಣವಾಗಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳನ್ನು ಉಳಿಸುವ ನಮ್ಮ ಕಾಯಕ ಮುಂದುವರೆಯಲಿದ್ದು, ವಿವಿಧ ಕಂಪನಿಗಳ ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಮತ್ತಷ್ಟು ಕೊಡುಗೆ ಹರಿಸುವ ಪ್ರಯತ್ನ ಮುಂದುವರೆಯಲಿದೆ ಎಂದು ತಿಳಿಸಿದರು.
ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನೂರಾರು ಮಂದಿ ಶಿಕ್ಷಕರು ಹಾಜರಿದ್ದು ವಿಜಯೋತ್ಸವ ಆಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್