ಎಸ್ಎಸ್ ನಾರಾಯಣ ಆಸ್ಪತ್ರೆಯಿಂದ ಐತಿಹಾಸಿಕ ಹೃದಯ ಶಸ್ತ್ರಚಿಕಿತ್ಸೆ
ದಾವಣಗೆರೆ, 02 ಮೇ (ಹಿ.ಸ.) : ಆ್ಯಂಕರ್ : ಮಧ್ಯ ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ, ದಾವಣಗೆರೆ ಎಸ್ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಕೇಂದ್ರದಲ್ಲಿ ಮೊದಲ ಬಾರಿಗೆ ಅತ್ಯಂತ ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. “ಸಂಶೋಧಿತ ಬೆಂಟಾಲ್ ವಿಧಾನ” ಎಂಬ
PC


ದಾವಣಗೆರೆ, 02 ಮೇ (ಹಿ.ಸ.) :

ಆ್ಯಂಕರ್ : ಮಧ್ಯ ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ, ದಾವಣಗೆರೆ ಎಸ್ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಕೇಂದ್ರದಲ್ಲಿ ಮೊದಲ ಬಾರಿಗೆ ಅತ್ಯಂತ ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. “ಸಂಶೋಧಿತ ಬೆಂಟಾಲ್ ವಿಧಾನ” ಎಂಬ ಈ ಶಸ್ತ್ರಚಿಕಿತ್ಸೆ ಪ್ರದೇಶದಲ್ಲಿ ಮೊದಲ ಬಾರಿಗೆ ನಡೆದಿದ್ದು, ವೈದ್ಯಕೀಯ ಲೋಕದಲ್ಲಿ ಮಹತ್ವದ ಮೈಲುಗಲ್ಲಾಗಿದೆ.

43 ವರ್ಷದ ರೋಗಿಯೊಬ್ಬರು ತೀವ್ರ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಪರಿಶೀಲನೆ ವೇಳೆ ಅವರ ಹೃದಯದ ಮಹಾಧಮನಿಯ ಮೂಲ ಭಾಗವು ಅಪಾಯಕರವಾಗಿ ವಿಸ್ತರಿಸಿಕೊಂಡಿದ್ದು, ಯಾವ ಕ್ಷಣದಲ್ಲಾದರೂ ಸ್ಫೋಟಿಸುವ ಸಾಧ್ಯತೆ ಇರುವ ಸ್ಥಿತಿ ಕಂಡುಬಂದಿತು. ಜೊತೆಗೆ ಆ ವಿಸ್ತರಣೆ ಹೃದಯದ ಬಲ ಮೇಲ್ಭಾಗದ ಮೇಲೆ ಒತ್ತಡ ಹೇರುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಗೌತಮ್ ಎ ಅವರ ನೇತೃತ್ವದಲ್ಲಿ ವೈದ್ಯರ ತಂಡವು ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಈ ವೇಳೆ ಹಾನಿಗೊಳಗಾದ ಹೃದಯ ಕವಾಟ, ಮಹಾಧಮನಿಯ ಮೂಲ ಭಾಗ ಹಾಗೂ ವಿಸ್ತರಿಸಿದ ಭಾಗವನ್ನು ತೆಗೆದುಹಾಕಿ ಕೃತಕ ನಳಿಕೆಯಿಂದ ಬದಲಾಯಿಸಲಾಯಿತು. ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು ಹೊಸ ನಳಿಕೆಗೆ ಯಶಸ್ವಿಯಾಗಿ ಮರುಸಂಯೋಜಿಸಲಾಯಿತು.

ಅಪಾಯಕರ ಶಸ್ತ್ರಚಿಕಿತ್ಸೆಯಾದರೂ, ರೋಗಿಯ ಚೇತರಿಕೆ ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ನಡೆದಿದೆ. ನಂತರದ ಪರೀಕ್ಷೆಗಳಲ್ಲಿ ಹೃದಯದ ಕಾರ್ಯ ಸಾಮಾನ್ಯವಾಗಿದೆ ಎಂದು ದೃಢಪಟ್ಟಿದ್ದು, ರೋಗಿಯನ್ನು ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಈ ಸಾಧನೆಯನ್ನು ಮಧ್ಯ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಈ ಹಿಂದೆ ಇಂತಹ ಸಂಕೀರ್ಣ ಚಿಕಿತ್ಸೆಗಾಗಿ ರೋಗಿಗಳನ್ನು ಬೆಂಗಳೂರು ಅಥವಾ ಹೈದರಾಬಾದ್ ನಗರಗಳಿಗೆ ಕರೆದೊಯ್ಯಬೇಕಾಗುತ್ತಿತ್ತು. ಆದರೆ ಈಗ ದಾವಣಗೆರೆಯಲ್ಲೇ ಈ ಮಟ್ಟದ ಚಿಕಿತ್ಸೆ ಸಾಧ್ಯವಾಗಿದೆ.

ಆಸ್ಪತ್ರೆಯ ನಿರ್ದೇಶಕ ಸುನೀಲ್ ಭಂಡಾರಿಗಲ್ ಅವರು ಮಾತನಾಡಿ, ಮಧ್ಯ ಕರ್ನಾಟಕದಲ್ಲಿ ವಿಶ್ವಮಟ್ಟದ ಹೃದಯ ಚಿಕಿತ್ಸೆಯನ್ನು ಲಭ್ಯವಾಗಿಸುವುದು ತಮ್ಮ ಗುರಿಯಾಗಿದ್ದು, ಈ ಯಶಸ್ಸು ಅದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande