
ಕೋಲಾರ, ೦೫ ಮಾರ್ಚ್ (ಹಿ.ಸ)
ಆಂಕರ್ : ಹೂಡಿ ವಿಜಯ ಕುಮಾರ್ ಅವರ ಸೇರ್ಪಡೆಯೊಂದಿಗೆ ಜೆಡಿಎಸ್ ಪಕ್ಷಕ್ಕೆ ಮಾಲೂರು ಕ್ಷೇತ್ರದಲ್ಲಿ ಮಾತ್ರವಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಶಕ್ತಿ ಬರಲಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಮಾಲೂರು ಕ್ಷೇತ್ರದ ಹೂಡಿ ವಿಜಯ್ ಕುಮಾರ್ ಮತ್ತವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಅವರು; ಪಕ್ಷವನ್ನು ನಾವು ಬಲಿಷ್ಠವಾಗಿ ಕಟ್ಟುತ್ತಿದ್ದೇವೆ. ಅದರ ಭಾಗವೇ ಪಕ್ಷ ಸೇರ್ಪಡೆ ಎಂದರು.
ಕೋಲಾರ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಮಲ್ಲೇಶ್ ಬಾಬು ಅವರು ಆಯ್ಕೆ ಆಗಿದ್ದಾರೆ. ಆದರೆ, ಮಾಲೂರು ಕ್ಷೇತ್ರದಲ್ಲಿ ಅವರಿಗೆ ಸಿಕ್ಕಿರುವ ಲೀಡ್ ಬಗ್ಗೆ ನನಗೆ ತೃಪ್ತಿ ಇಲ್ಲ. ನನ್ನ ಪ್ರಕಾರ ಅವರು ಆ ಒಂದು ಕ್ಷೇತ್ರದಲ್ಲಿಯೇ ೭೦ ಸಾವಿರಕ್ಕೂ ಹೆಚ್ಚು ಲೀಡ್ ಪಡೆಯಬೇಕಾಗಿತ್ತು. ಹಾಗೆ ಆಗಲಿಲ್ಲ. ಯಾಕೆ ಆಗಲಿಲ್ಲ ಎಂಬ ಬಗ್ಗೆ ನಾವು ಅವಲೋಕನ ಮಾಡಿಕೊಳ್ಳಬೇಕಿದೆ. ಲೀಡ್ ಯಾಕೆ ಕಡಿಮೆ ಆಯಿತು ಎಂಬ ಬಗ್ಗೆ ಕೆಲ ವ್ಯಕ್ತಿಗಳ ಅವರ ಆತ್ಮಸಾಕ್ಷಿಗೆ ಬಿಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ರಾಜಕೀಯವಾಗಿ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಅನೇಕ ಸಮುದಾಯಗಳನ್ನು ದೇವೇಗೌಡರು ಮೇಲೆತ್ತಿದರು. ಈಗಲೂ ಅವರು ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯ ಎಂಬುದು ದೇವೇಗೌಡರ ಬದ್ಧತೆ. ಹೀಗಾಗಿಯೇ ಹೂಡಿ ವಿಜಯ್ ಕುಮಾರ್ ಅವರಂಥ ನಾಯಕರು ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ. ಮುಂದೆಯೂ ನಾವು ಈ ತಳಹದಿಯ ಮೇಲೆಯೇ ಪಕ್ಷವನ್ನು ಕಟ್ಟುತ್ತೇವೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್