
ನವದೆಹಲಿ, 12 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13ರಂದು (ಶುಕ್ರವಾರ) ಹೊಸದಾಗಿ ನಿರ್ಮಿಸಲಾದ ‘ಸೇವಾತೀರ್ಥ’ ಸಂಕೀರ್ಣ ಮತ್ತು ‘ಕರ್ತವ್ಯ ಭವನ–1 ಹಾಗೂ 2’ ಅನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಗುರುವಾರ ತಿಳಿಸಿದೆ.
ಹೊಸ ‘ಸೇವಾತೀರ್ಥ’ ಸಂಕೀರ್ಣದಲ್ಲಿ ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಕ್ಯಾಬಿನೆಟ್ ಸಚಿವಾಲಯ ಕಾರ್ಯನಿರ್ವಹಿಸಲಿವೆ. ‘ಕರ್ತವ್ಯ ಭವನ–1 ಮತ್ತು 2’ಗಳಲ್ಲಿ ಹಣಕಾಸು, ರಕ್ಷಣಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಕೃಷಿ ಮತ್ತು ರೈತರ ಕಲ್ಯಾಣ, ಸಂಸ್ಕೃತಿ, ಕಾನೂನು ಮತ್ತು ನ್ಯಾಯ, ಮಾಹಿತಿ ಮತ್ತು ಪ್ರಸಾರ, ರಾಸಾಯನಿಕಗಳು ಮತ್ತು ರಸಗೊಬ್ಬರ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವಾಲಯಗಳು ಸೇರಿದಂತೆ ಹಲವು ಪ್ರಮುಖ ಇಲಾಖೆಗಳು ಒಂದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿವೆ.
ಪಿಎಂಒ ಮಾಹಿತಿಯಂತೆ, ಮಧ್ಯಾಹ್ನ 1:30ಕ್ಕೆ ಪ್ರಧಾನಮಂತ್ರಿ ಹೊಸ ಪ್ರಧಾನ ಮಂತ್ರಿ ಕಚೇರಿ ಸಂಕೀರ್ಣಕ್ಕೆ ‘ಸೇವಾತೀರ್ಥ’ ಎಂದು ಔಪಚಾರಿಕ ನಾಮಕರಣ ಮಾಡಲಿದ್ದಾರೆ. ಬಳಿಕ ‘ಸೇವಾತೀರ್ಥ’ ಮತ್ತು ‘ಕರ್ತವ್ಯ ಭವನ–1, 2’ಗಳನ್ನು ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ‘ಸೇವಾತೀರ್ಥ’ ಆವರಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.
ದಶಕಗಳಿಂದ ಸೆಂಟ್ರಲ್ ವಿಸ್ಟಾ ಪ್ರದೇಶದ ವಿವಿಧ ಕಟ್ಟಡಗಳಲ್ಲಿ ಚದುರಿಕೊಂಡಿದ್ದ ಕೇಂದ್ರ ಸಚಿವಾಲಯಗಳ ಕಾರ್ಯನಿರ್ವಹಣೆಯಿಂದ ದಕ್ಷತೆಯ ಕೊರತೆ, ಸಮನ್ವಯದ ಸವಾಲು, ಹೆಚ್ಚಿದ ನಿರ್ವಹಣಾ ವೆಚ್ಚ ಹಾಗೂ ಸೂಕ್ತ ಕಾರ್ಯಪರಿಸರದ ಅಭಾವದಂತಹ ಸಮಸ್ಯೆಗಳು ಎದುರಾಗುತ್ತಿದ್ದವು. ಹೊಸ ಸಂಕೀರ್ಣಗಳ ನಿರ್ಮಾಣವು ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಿ, ಆಡಳಿತಾತ್ಮಕ ಕಾರ್ಯಗಳನ್ನು ಆಧುನಿಕ, ದಕ್ಷ ಮತ್ತು ನಾಗರಿಕ ಕೇಂದ್ರಿತ ಚೌಕಟ್ಟಿನಲ್ಲಿ ನಡೆಸಲು ನೆರವಾಗಲಿದೆ ಎಂದು ಪಿಎಂಒ ತಿಳಿಸಿದೆ.
ಎರಡೂ ಕ್ಯಾಂಪಸ್ಗಳು ಡಿಜಿಟಲ್ ಸಂಯೋಜಿತ ಕಚೇರಿಗಳು, ರಚನಾತ್ಮಕ ಸಾರ್ವಜನಿಕ ಇಂಟರ್ಫೇಸ್ ವಲಯಗಳು ಹಾಗೂ ಕೇಂದ್ರೀಕೃತ ಸ್ವಾಗತ ಸೌಲಭ್ಯಗಳನ್ನು ಹೊಂದಿವೆ. ಸಹಯೋಗ, ಪಾರದರ್ಶಕ ಆಡಳಿತ, ನಾಗರಿಕರ ತೊಡಗಿಸಿಕೊಳ್ಳುವಿಕೆ ಮತ್ತು ಉದ್ಯೋಗಿಗಳ ಕಲ್ಯಾಣಕ್ಕೆ ಉತ್ತೇಜನ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಮತ್ತು ಉನ್ನತ ಕಾರ್ಯಕ್ಷಮತಾ ರಚನೆಗಳನ್ನು ಒಳಗೊಂಡು 4-ಸ್ಟಾರ್ ಗೃಹ ಮಾನದಂಡಗಳನ್ನು ಪೂರೈಸುವಂತೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸ್ಮಾರ್ಟ್ ಪ್ರವೇಶ ನಿಯಂತ್ರಣ, ಕಣ್ಗಾವಲು ಜಾಲ ಮತ್ತು ಸುಧಾರಿತ ತುರ್ತು ಪ್ರತಿಕ್ರಿಯಾ ವ್ಯವಸ್ಥೆಗಳಂತಹ ಭದ್ರತಾ ವ್ಯವಸ್ಥೆಗಳನ್ನೂ ಜಾರಿಗೊಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa