
ಕೋಲಾರ, ೧೭ ಜನವರಿ (ಹಿ.ಸ) :
ಆ್ಯಂಕರ್ : ಜಿಲ್ಲೆಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಅಭಿವೃದ್ಧಿ ಹೊಂದಿದರೆ ಮಾತ್ರ ರಾಜ್ಯದ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಪ್ರವೀಣ್ ಪಿ. ಬಾಗೇವಾಡಿ ತಿಳಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ‘ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೨೫ ಹಾಗೂ ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-೨೦೩೧ ವರದಿಗಳ ತಯಾರಿಕೆ’ ಕುರಿತು ಅಧಿಕಾರಿಗಳಿಗೆ, ಸಹಾಯಕ ಸಂಯೋಜಕರಿಗೆ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದ ೧೯೩ ಜಿಲ್ಲೆಗಳ ಪೈಕಿ ನಮ್ಮ ದೇಶವು ಅಭಿವೃದ್ಧಿ ದೃಷ್ಟಿಯಿಂದ ೧೩೦ನೇ ಸ್ಥಾನದಲ್ಲಿದೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಇಲ್ಲಿ ಬೆಳವಣಿಗೆಗೆ ವಿಫುಲ ಅವಕಾಶವಿದೆ. ನಮ್ಮಲ್ಲಿನ ಪ್ರತಿಭಾನ್ವಿತರು ಇತರ ದೇಶದಲ್ಲಿ ನೌಕರಿ, ಉದ್ಯಮ ಮಾಡಿ ಹೆಸರು ಗಳಿಸಿದ್ದಾರೆ. ನಾವು ಇನಷ್ಟು ದಾಪುಗಾಲು ಹಾಕಿ ಅಭಿವೃದ್ಧಿಯತ್ತ ಸಾಗಬೇಕು ಎಂದರು.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹಿರಿಯ ನಿರ್ದೇಶಕರು ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರಾದ ಬಸವರಾಜು ಎಸ್ ಅವರು ಮಾತನಾಡಿ, ಜಿಲ್ಲೆಗಳ ಮಾನವ ಅಭಿವೃದ್ಧಿ ೨೦೨೫ ಸಿದ್ಧಪಡಿಸಲು ಎಲ್ಲಾ ೩೧ ಜಿಲ್ಲೆಗಳಲ್ಲಿಯೂ ಈ ಕುರಿತು ತರಬೇತಿ ನಡೆಸಲಾಗುವುದು. ಆರೋಗ್ಯ, ಶಿಕ್ಷಣ ಹಾಗೂ ಜನಗಳ ಜೀವನ ಮಟ್ಟದ ಮೇಲೆ ಅಭಿವೃದ್ಧಿಯ ಅಂಶಗಳು ಒಳಪಟ್ಟಿದೆ. ೨೦೧೫ರ ನಂತರ ಈ ಕುರಿತು ವರದಿ ಮಂಡನೆಯಾಗಿಲ್ಲ. ವಿವಿಧ ಮುಖ್ಯ ಇಲಾಖೆಗಳ ಜೊತೆಗೂಡಿ ಈ ವರದಿಯನ್ನು ತಯಾರಿಸಲು ಸಹಕರಿಸಬೇಕು ಎಂದರು.
ಗ್ಯಾರೆಂಟಿ ಯೋಜನೆಗಳು ಜನಸಾಮಾನ್ಯರ ಮೇಲೆ ಬೀರಿರುವ ಪ್ರಭಾವ, ಜಿಲ್ಲೆ ಅಳವಡಿಸಿಕೊಂಡಿರುವ ಉತ್ತಮ ಅಭ್ಯಾಸಗಳು, ಇತರ ಜಿಲ್ಲೆಗಳಿಂದ ತೆಗೆದುಕೊಳ್ಳಬಹುದಾದ ಒಳ್ಳೆಯ ಮಾದರಿಗಳು ಸಹ ಅಭಿವೃದ್ಧಿ ದೃಷ್ಠಿಯಿಂದ ಮುಖ್ಯವನಿಸಿವೆ. ಆದಾಗಿಯೂ ಲಿಂಗತಾರತಮ್ಯ, ನಿರುದ್ಯೋಗ, ಬಡತನ ಜನರನ್ನು ಕಾಡುತ್ತಿದೆ. ಈ ವರದಿ ಸಲ್ಲಿಸುವ ಕುರಿತು ಜಿಲ್ಲಾ ಮಟ್ಟದಲ್ಲಿಯೂ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಸಹ ರಚಿಸಲಾಗಿದೆ. ಇದರಿಂದ ಅಭಿವೃದ್ಧಿ ಪೂರಕವಾದ ಅಂಶಗಳು ಬೆಳಕಿಗೆ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿವೃತ್ತ ಅಪರ ನಿರ್ದೇಶಕರು ಹಾಗೂ ಸಮಾಲೋಚಕರಾದ ಸಿ.ಕೆಂಪಯ್ಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ತಾಂತ್ರಿಕ ಸಂಯೋಜಕರಾದ ಡಾ. ಡಿ.ಕುಮುದಾ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಚಿತ್ರ : ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್ ಬಾಗೇವಾಡಿ ‘ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೨೫ ಹಾಗೂ ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-೨೦೩೧ ವರದಿಗಳ ತಯಾರಿಕೆ’ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್