ಕಲಬುರಗಿ, 29 ಮಾರ್ಚ್ (ಹಿ.ಸ.) :
ಆ್ಯಂಕರ್ : ಜಿಲ್ಲಾಧಿಕಾರಿಗಳ ಕಚೇರಿಯ ಪರಿಚಾರಕ ಹುದ್ದೆಗಳ ನಕಲಿ ನೇಮಕಾತಿ ಆದೇಶ ಪ್ರತಿಗಳನ್ನು ಸೃಷ್ಟಿಸಿ, ಸಾರ್ವಜನಿಕರನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಲಬುರಗಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಶನಿವಾರ ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಲು ಅಡೂರು, ಈ ಪ್ರಕರಣದಲ್ಲಿ ಕಲಬುರಗಿ ಜಿಲ್ಲೆಯ ಮೇಳಕುಂದಾ (ಬಿ) ಗ್ರಾಮದ ನಾಗೇಶ ತಂದೆ ಲಕ್ಷ್ಮಣ ಸುಂಕನ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲ ಹೊಸೂರಿನ ರಾಮಪುರ ಸೈಟ್ ಪ್ರದೇಶದ ನಿವಾಸಿ ಅಭಿಷೇಕ ತಂದೆ ಸುಭಾಶ್ ಮಾತಾಡೆ ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಆರೋಪಿತ ನಾಗೇಶನು 7 ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಒಂಬತ್ತು ಜನರಿಗೆ ಪರಿಚಾರಕ ಹುದ್ದೆಯಿಂದ ತಹಸೀಲ್ದಾರ ಗ್ರೇಡ್-2 ವರೆಗೆ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ, ಅವರಿಂದ ಒಟ್ಟು 8.55 ಲಕ್ಷ ರೂ. ಪಡೆದುಕೊಂಡಿದ್ದಾನೆ. ತನಿಖೆಯಲ್ಲಿ ಈತನಿಂದ ಎರಡು ಮೊಬೈಲ್ಗಳು, ಎರಡು ಸಿಮ್ ಕಾರ್ಡ್ಗಳು, ಹತ್ತು ಬಯೋಡಾಟಾ ದಾಖಲೆಗಳು, ಕಂದಾಯ ಇಲಾಖೆ, ಆದಾಯ ತೆರಿಗೆ ಇಲಾಖೆ, ರೈಲ್ವೆ ಇಲಾಖೆ, ಅಬಕಾರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್, ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಒಟ್ಟು 43 ನಕಲಿ ನೇಮಕಾತಿ ಆದೇಶ ಪ್ರತಿಗಳು ಮತ್ತು 25,000 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ನಕಲಿ ನೇಮಕಾತಿ ಆದೇಶ ಪ್ರತಿಗಳನ್ನು ಸೃಷ್ಟಿಸಲು ನಾಗೇಶನ ಸಹಚರ ಅಭಿಷೇಕನು WPS Office ಮತ್ತು Stamp Maker App ಗಳನ್ನು ಬಳಸಿ, ಪ್ರತಿಯೊಂದು ನಕಲಿ ಆದೇಶ ಪತ್ರಕ್ಕಾಗಿ 5,000 ರೂ. ಪಡೆಯುತ್ತಿದ್ದ. ಇವರಿಬ್ಬರು ಸೇರಿ ಸುಮಾರು 90-100 ಜನರನ್ನು ಸಂಪರ್ಕಿಸಿ, ವಿವಿಧ ಇಲಾಖೆಗಳ ಹುದ್ದೆಗಳ ನಕಲಿ ಆದೇಶ ಪ್ರತಿಗಳನ್ನು ತಯಾರಿಸಿ ವಂಚನೆ ಮಾಡುತ್ತಿದ್ದರೆಂದು ಪತ್ತೆಯಾಗಿದೆ. ಆರೋಪಿತರಿಂದ ಒಟ್ಟು 6 ಲಕ್ಷ ರೂ. ವಂಚನೆ ಮಾಡಲಾಗಿದೆ. ಅಭಿಷೇಕನಿಂದ 11 ನಕಲಿ ಆದೇಶ ಪ್ರತಿಗಳು, ಎರಡು ಮೊಬೈಲ್ಗಳು ಮತ್ತು 22,000 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ,CEN ಠಾಣೆಯ ಡಿ.ಎಸ್.ಪಿ ಬಸವೇಶ್ವರ, ಪಿ. ಐ. ವನಂಜಕರ, ಮಹಿಳಾ ಪೊಲೀಸ್ ಠಾಣೆ ಪಿ.ಐ ಜಗದೀಶ್ ಅವರ ನೇತೃತ್ವದಲ್ಲಿ ಎರಡು ತಂಡಗಳು ರಚಿಸಲಾಗಿತ್ತು. ತಾಂತ್ರಿಕ ಜ್ಞಾನ ಬಳಸಿ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ, ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯನ್ನು ಜಿಲ್ಲಾಡಳಿತ, ಹಿರಿಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಪ್ರಶಂಸಿಸಿದ್ದು, ಸದರಿ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Samarth biral