ಕೋಲಾರ, ೩೧ ಮಾರ್ಚ್ (ಹಿ.ಸ): ಆಂಕರ್ : ಪವಿತ್ರ ರಂಜಾನ್ ಹಬ್ಬವನ್ನು ಕೋಲಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಸೋಮವಾರ ಆಚರಣೆ ಮಾಡಲಾಯಿತು.
ನಗರದ ಈದ್ಗಾ ಮೈದಾನ ಹಾಗೂ ಚಿಕ್ಕಬಳ್ಳಾಪುರ ರಸ್ತೆಯ ಸಂಗೊಂಡಹಳ್ಳಿ ಬಳಿಯ ದರ್ಗಾ ಸಮೀಪ ಆಯೋಜಿಸಿದ್ದ ವಿಶೇಷ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.
ಹಬ್ಬದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದಲೂ ಸಿದ್ಧತೆಗಳು ಜೋರಾಗಿ ನಡೆದಿದ್ದವು. ದರ್ಗಾಗಳಿಗೆ ವಿಶೇಷವಾಗಿ ದೀಪಾಲಂಕಾರಗಳನ್ನು ಮಾಡಲಾಗಿತ್ತು. ಹೊಸ ಬಟ್ಟೆಗಳನ್ನು ತೊಟ್ಟು ಕುಟುಂಬ ಸಮೇತರಾಗಿ ಪ್ರಾರ್ಥನೆಗಳಿಗೆ ಆಗಮಿಸಿದ ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಣೆಯಲ್ಲಿ ತೊಡಗಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪ್ರಾರ್ಥನೆಯಲ್ಲಿ ಉತ್ತಮ ಮಳೆ, ಬೆಳೆಗಾಗಿ ಅಲ್ಲಾಹುವಿನಲ್ಲಿ ಬೇಡಿಕೊಳ್ಳಲಾಯಿತು ಪ್ರಾರ್ಥನೆ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು, ಬಡವರಿಗೆ ಹಣ ಸೇರಿದಂತೆ ಇನ್ನಿತರೆ ವಸ್ತುಗಳನ್ನು ದಾನವಾಗಿ ನೀಡಲಾಯಿತು.
ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆಗೆ ವ್ಯವಸ್ಥೆ ಕಲ್ಪಿಸಿದ್ದು, ಪ್ರತಿ ವರ್ಷದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದಾಗಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಕ್ಲಾಕ್ ಟವರ್ನಿಂದ ಬೈಪಾಸ್ವರೆಗಿನ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ, ಟೇಕಲ್ ಮಾರ್ಗದಲ್ಲಿ ಸಾಗಲು ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಶಾಂತಿಯುತವಾಗಿ ಹಬ್ಬ ಆಚರಣೆಗೊಂಡಿತು
ಶಾಸಕ ಕೊತ್ತೂರು ಮಂಜುನಾಥ್ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ ಜನತೆಗೆ ಒಳ್ಳೆಯ ಮಳೆ, ಬೆಳೆಯಾಗಲಿ ಎಂದು ಎಲ್ಲೆಡೆ ಇಂದು ಅಲ್ಲಾಹುವಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ನಾವೆಲ್ಲರೂ ಭೇದ ಭಾವ ಮರೆತು ಭ್ರಾತೃತ್ವ್ವದಿಂದ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಅದೇ ರೀತಿ ಈದ್ಗಾ ಮೈದಾನದ ಕಾಂಪೌಂಡ್, ಬೋರ್ ವೆಲ್, ಹೈಮಾಸ್ಟ್ ಲೈಟ್ ಹಾಕಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿ ಹಬ್ಬದ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಅಂಜುಮಾನ್ ಅಧ್ಯಕ್ಷ ಜಮೀರ್ ಅಹಮದ್, ಉಪಾಧ್ಯಕ್ಷ ಮುಸ್ತಫಾ, ಕಾರ್ಯದರ್ಶಿ ಸೈಫುಲ್ಲಾ, ಮುಖಂಡರಾದ ಅಕ್ರಂ ಪಾಷ, ಅಬ್ದುಲ್ ಖಯ್ಯಾಮ್, ಷಂಷೀರ್, ಕೆ.ವಿ.ಗೌತಮ್, ಮೈಲಾಂಡಹಳ್ಳಿ ಮುರಳಿ, ನಗರಸಭೆ ಸದಸ್ಯ ಅಂಬರೀಷ್, ಜನಪನಹಳ್ಳಿ ನವೀನ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್