
ಕೋಲಾರ, ೩೦ ಡಿಸೆಂಬರ್ (ಹಿ.ಸ) :
ಆ್ಯಂಕರ್ : ವೈಕುಂಠ ಏಕಾದಶಿ ಅಂಗವಾಗಿ ನಗರ ಹಾಗೂ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಿದ್ದು, ನಗರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ, ವೆಂಕಟಾಪುರದ ಪುರಾಣಪ್ರಸಿದ್ದ ಶ್ರೀನಿವಾಸನ ದೇಗುಲ, ವೈಕುಂಠಪುರ ಎಂದೇ ಖ್ಯಾತಿಯಾದ ರೋಣೂರಿನ ತಿಮ್ಮೊಪ್ಪ ದೇವಾಲಯ ಸೇರಿದಂತೆ ವಿವಿಧೆಡೆ ಮಂಗಳವಾರ ಮುಂಜಾನೆಯಿ0ದಲೇ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದುದು ಕಂಡು ಬಂತು.
ವೈಕು0ಠ ಏಕಾದಶಿಯಂದು ದೇವರ ದರ್ಶನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿ0ದ ನಗರ, ಹಳ್ಳಿಗಳಿಂದ ಜನತೆ ಸಾವಿರ ಸಾವಿರ ಸಂಖ್ಯೆಯಲ್ಲಿ ದೇವಾಲಯಗಳತ್ತ ಧಾವಿಸಿದ್ದರು.
ವೈಕುಂಠ ಏಕಾದಶಿ ಅಂಗವಾಗಿ ನಗರದ ಎಲ್ಲಾ ದೇವಾಲಯಗಳನ್ನು ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಸುಗಮ ದರ್ಶನಕ್ಕಾಗಿ ಪೊಲೀಸ್ ಇಲಾಖೆಯ ಸಹಕಾರವನ್ನೂ ಪಡೆಯಲಾಗಿತ್ತು.
ದೊಡ್ಡಪೇಟೆಯ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಹಿಂದೆ,0ದೂ ಕಂಡರಿಯದ ರೀತಿಯಲ್ಲಿ ಭಕ್ತರ ಸಾಲು ಕಂಡು ಬಂದಿದ್ದು, ಭಕ್ತರ ಸಾಲು ಸುಣ್ಣಕಲ್ಲು ಬೀದಿಯ ಮೂಲಕ ಕಠಾರಿಪಾಳ್ಯದ ಬಿಂದಿಮಾಳ್ಯ ಛತ್ರ ದಾಟಿ ಧರ್ಮರಾಯಸ್ವಾಮಿ ದೇವಾಲಯದವರೆಗೂ ಕಂಡು ಬಂತು. ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು, ದೇವಾಲಯದಲ್ಲಿ ಪೂಜಾ ಕೈಂಕರ್ಯಗಳ ಉಸ್ತುವಾರಿಯನ್ನು ಅರ್ಚಕರಾದ ಅನಂತು ಮತ್ತು ಸಹೋದರರು ಮತ್ತಿತರರು ವಹಿಸಿದ್ದರು.
ನಗರದ ಇತಿಹಾಸ ಪ್ರಸಿದ್ದ ಅಮ್ಮವಾರಿಪೇಟೆಯ ವರದರಾಜಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ, ವೈಕುಂಠದ್ವಾರ ದರ್ಶನ ಜತೆಗೆ ಇಡೀ ದೇವಾಲಯವನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ಪ್ರಧಾನ ಅರ್ಚಕರಾದ ಮುರಳಿ ರಾಮಾನುಜಂ ಮತ್ತಿತರರು ಪೂಜೆಯ ನೇತೃತ್ವ ವಹಿಸಿದ್ದು, ಇಡೀ ದಿನ ದೇವಾಲಯಕ್ಕೆ ಹರಿದು ಬಂದ ಭಕ್ತರಿಗೆ ಪೂಜೆಯೊಂದಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ನಗರದ ಕಿಲಾರಿಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು, ಸಹಸ್ರಾರು ಮಂದಿ ದೇವರ ದರ್ಶನ ಪಡೆದರು, ಇಡೀ ದಿನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಗರ ಮಾತ್ರವಲ್ಲದೇ ಜಿಲ್ಲೆಯ ವಿವಿಧದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪೂಜೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ನಡೆದಿದ್ದು, ನಗರದ ಪಂಚಮುಖಿ ಹನುಮ ದೇವಾಲಯ, ಕೀಲುಕೋಟೆಯ ಸತ್ಯನಾರಾಯಣಸ್ವಾಮಿ ದೇವಾಲಯ, ಜನ್ನಘಟ್ಟದ ನರಸಿಂಹಸ್ವಾಮಿ ದೇವಾಲಯ ಸೇರಿದಂತೆ ವಿವಿಧೆಡೆ ಪೂಜಾಕಾರ್ಯಗಳು ನಡೆದಿದ್ದು, ಸಹಸ್ರಾರು ಮಂದಿ ದೇವರ ದರ್ಶನ ಪಡೆದರು.
ವೈಕುಂಠ ಏಕಾದಶಿ ನಂತರ ಬುಧವಾರದ ವೈಕುಂಠ ದ್ವಾದಶಿಗೆ ದೇವಾಲಯಗಳು ಸಿದ್ದಗೊಳ್ಳುತ್ತಿದ್ದು, ವಿಶೇಷ ಪೂಜೆ, ಹೂವಿನ ಅಲಂಕಾರ,ಪ್ರಸಾದ ವಿನಿಯೋಗ ನಡೆಯಲಿದೆ.
ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬರುವ ಸಾವಿರಾರು ಭಕ್ತರಿಗೆ ದಿನವಿಡೀ ಪ್ರಸಾದದ ವ್ಯವಸ್ಥೆಯನ್ನು ಅಚ್ಚಯ್ಯಶೆಟ್ಟಿ, ಬೇಕರಿ ಲೋಕೇಶ್, ಮಿಕ್ಚರ್ ಕುಮಾರ್, ಕೋವಾ ಮಂಜುನಾಥ್,ಕುಮಾರ್,ಶರತ್, ಬಾಬು ಮುರಳಿ, ದೇವರಾಜ್ ಮತ್ತಿತರರು ವ್ಯವಸ್ಥೆ ಮಾಡಿದ್ದರು.ಬಜರಂಗದಳದ ಬಾಲಾಜಿ, ಅಪ್ಪಿ ಮತ್ತಿತರರಿದ್ದರು.
ಚಿತ್ರ : ವೈಕುಂಠ ಏಕಾದಶಿ ಅಂಗವಾಗಿ ಕೋಲಾರದ ದೊಡ್ಡಪೇಟೆಯ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಬಳಿ ನೂರಾರು ಭಕ್ತರು ಮುಂಜಾನೆಯಿ0ದಲೇ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್