ಕೋಲಾರ, 07 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಾಲ್ಮೀಕಿ ಸಮುದಾಯದ ಮಕ್ಕಳಿಗೆ ಹಾಸ್ಟೆಲ್ ಪ್ರಾರಂಭಿಸಲು ಸರ್ಕಾರದ ಜಾಗವಿರಬೇಕು ಅಂತಹ ಸಂದರ್ಭದಲ್ಲಿ ಮಾತ್ರವೇ ಸರ್ಕಾರದಿಂದ ಅನುದಾನ ಕೊಡಿಸಲು ಸಾಧ್ಯ ಪ್ರಸ್ತುತ ಸಮುದಾಯದ ಜಾಗದಲ್ಲಿ ಸಮುದಾಯದ ಹಾಸ್ಟೆಲ್ ಗಾಗಿ ೧೦ ಲಕ್ಷ ಅನುದಾನ ನೀಡಲಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರ ಹೊರವಲಯದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮಾಜ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜ ಉದ್ದಾರ ಒಬ್ಬರಿಂದ ಸಾಧ್ಯವಿಲ್ಲ ದೇಶದ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯವಾಗಿದೆ ಸಮುದಾಯಗಳು ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ ಎಂದರು.
ಸಮಾಜದಲ್ಲಿ ಸಣ್ಣಪುಟ್ಟ ಸಮುದಾಯಗಳು ಕಳೆದ ಐದಾರು ವರ್ಷಗಳಿಂದ ಕಣ್ಣು ತೊರೆಯುವಂತಾ ವಾತಾವರಣ ಸೃಷ್ಟಿಯಾಗಿದೆ ಇಂತಹ ಸಮುದಾಯಗಳೊಂದಿಗೆ ಬಲಿಷ್ಠ ಸಮುದಾಯಗಳು ಕೈಜೋಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು
ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ರಾಜಕೀಯದಲ್ಲಿ ಸಮುದಾಯಕ್ಕಾಗಿ ತಪ್ಪಿ ಹೋಗಿರುವ ಎರಡು ಸಚಿವ ಸ್ಥಾನಗಳನ್ನು ಪುನಃ ನೀಡಲು ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ. ಕೋಲಾರದಲ್ಲಿ ಎಲ್ಲಾ ಸಮಾಜಕ್ಕೆ ಸೇರಿದ ಹಾಸ್ಟೆಲ್ ಗಳೂ ಇದ್ದು, ನಿಮ್ಮ ಸಮುದಾಯಕ್ಕೂ ನ್ಯಾಯ ಒದಗಿಸಲಾಗುವುದು ಎಂದರು.
ಎ0ಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ವಾಲ್ಮೀಕಿ ಎಂದೊಡನೆ ನಮಗೆ ನೆನಪಾಗುವುದೇ ರಾಮಾಯಣ. ಅವರ ಇತಿಹಾಸದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಬೇಡರ ಕಣ್ಣಪ್ಪ, ಏಕಲವ್ಯ, ಚಿತ್ರದುರ್ಗದ ಕೊನೆಯ ಪಾಳೆಯಗಾರ ಮದಕರಿ ನಾಯಕ ಸೇರಿದಂತೆ ಅನೇಕ ಮಹನೀಯರು ಸಮುದಾಯದಲ್ಲಿದ್ದು ಇತಿಹಾಸವಿರುವ ದೊಡ್ಡ ಸಮಾಜವಾಗಿದೆ.ಹಾಸ್ಟೆಲ್ ನಿರ್ಮಾಣ ನಮ್ಮ ಅನುದಾನದಿಂದ ಸಾಲುವುದಿಲ್ಲ. ಅದರ ಜತೆಗೆ ಎಸ್ಸಿಪಿ, ಟಿಎಸ್ಪಿ ಹಣ ಕೊಡಿಸಿ ಸೌಲಭ್ಯ ಕಲ್ಪಿಸಲಾಗುವುದು ಎಂದ ಅವರು, ಉನ್ನತ ಶಿಕ್ಷಣ ಪಡೆದು ಹೆಚ್ಚು ಹೆಚ್ಚು ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆ ಸದಸ್ಯ, ಸಮುದಾಯದ ಮುಖಂಡ ಅಂಬರೀಷ್, ನಾವು ಸಾಕಷ್ಟು ಹಿಂದೆ ಉಳಿದಿದ್ದು, ಕುರುಬ ಸಮುದಾಯವನ್ನು ನಮ್ಮ ಜತೆಗೆ ಬೇಡ. ನಮ್ಮ ಮರಣ ಶಾಸನ ಬರೆದಂತಾಗುತ್ತದೆ.ಕೋಟೆ ವಾಲ್ಮೀಕಿ ಭವನದ ಮೇಲೆ ಹಾಸ್ಟೆಲ್ ಕಟ್ಟಡ ಅನುಕೂಲ ಮಾಡಿಕೊಟ್ಟರೆ ನಾವೇ ಊಟದ ವ್ಯವಸ್ಥೆ ಮಾಡುತ್ತೇವೆ ರಾಮನಿಗೆ ಜೆಂಡಾ ನೀಡಿದ್ದೇ ವಾಲ್ಮೀಕಿ ಆದರೆ ಇಂದು
ವಾಲ್ಮೀಕಿ ಅವರ ಪುತ್ಥಳಿಗೆ ಬಜರಂಗದಳ, ಆರ್ಎಸ್ ಎಸ್ ನವರು ಹಾರ ಹಾಕಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿ ಅನಿಲ್ ಕುಮಾರ್ ಪಲ್ಲಕ್ಕಿಗಳ ಮೆರವಣಿಗೆಯನ್ನು ಡೊಳ್ಳು ಹೊಡೆಯುವ ಮೂಲಕ ಚಾಲನೆ ನೀಡಿದರು. ಇಲಾಖೆಗಳು ಹಾಗೂ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದ ೫೦ಕ್ಕೂ ಹೆಚ್ಚು ಪಲ್ಲಕ್ಕಿಗಳು ಹಾಗೂ ಜಾನಪದ ಕಲಾ ತಂಡಗಳು ನೋಡುಗರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ಎಂ.ಆರ್ ರವಿ, ಜಿಪಂ ಸಿಇಒ ಪ್ರವೀಣ್ ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ವಾಲ್ಮೀಕಿ ಸಮಾಜದ ಮುಖಂಡರಾದ, ಬಾಲಗೋವಿಂದ್, ಮಾಲೂರು ವೆಂಕಟರಾಮ್, ಕುಡುವನಹಳ್ಳಿ ಆನಂದ್, ಕೋಟೆ ಶ್ರೀನಿವಾಸ್, ಬೈರಂಡಹಳ್ಳಿ ನಾಗೇಶ್, ಮಂಜುಳಾ ಶ್ರೀನಿವಾಸ್, ಡಿಪಿಎಸ್ ಮುನಿರಾಜು, ಪಂಡಿತ್ ಮುನಿವೆಂಕಟಪ್ಪ, ಮೈಲಾಂಡಹಳ್ಳಿ ಮುರಳಿ, ಅಪ್ಸರ್, ಗಂಗಣ್ಣ, ಅಮರನಾಥ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಏಜಾಜ್, ರಾಮಯ್ಯ, ವ್ಯಾಪಲಪಲ್ಲಿ ನರೇಶ್, ವಾಸು, ಸಿಂಗಹಳ್ಳಿ ಮುರಳಿ, ಮುಂತಾದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್