
ನವದೆಹಲಿ, 05 ಜುಲೈ (ಹಿ.ಸ.):
ಆ್ಯಂಕರ್:ಹರಿಯಾಣದ ಬಹದ್ದೂರ್ಗಢದಲ್ಲಿ ಶನಿವಾರ ನಡೆದ ದೆಹಲಿ ಪೊಲೀಸ್ ವಿಶೇಷ ಘಟಕ ಹಾಗೂ ಹರಿಯಾಣ ವಿಶೇಷ ಕಾರ್ಯಪಡೆ (ಎಸ್ಟಿಎಫ್) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಾರೆನ್ಸ್ ಬಿಷ್ಣೋಯ್–ಹರಿರಾಮ್ ಅಲಿಯಾಸ್ ಹ್ಯಾರಿ ಬಾಕ್ಸರ್–ಅನಿಲ್ ಪಂಡಿತ್ ಗ್ಯಾಂಗ್ಗೆ ಸೇರಿದ ಇಬ್ಬರು ಕುಖ್ಯಾತ ಶೂಟರ್ಗಳು ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾರೆ.
ಮೃತರನ್ನು ಪ್ರವೇಶ್ ಮತ್ತು ಹಿಮಾಂಶು ಎಂದು ಗುರುತಿಸಲಾಗಿದೆ. ಇಬ್ಬರೂ ಹಿಸಾರ್ ಜಿಲ್ಲೆಯ ಹಾಂಸಿಯಲ್ಲಿ ಜಿಮ್ ಮಾಲೀಕ ಕಪಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಅವರ ಬಂಧನಕ್ಕೆ ಹರಿಯಾಣ ಪೊಲೀಸರು ತಲಾ ₹1 ಲಕ್ಷ ಬಹುಮಾನ ಘೋಷಿಸಿದ್ದರು.
ಹರಿಯಾಣ ಎಸ್ಟಿಎಫ್ ಪೊಲೀಸ್ ಅಧೀಕ್ಷಕ ವಿಕ್ರಾಂತ್ ಭೂಷಣ್ ಮಾಹಿತಿ ನೀಡಿದಂತೆ, ಇಬ್ಬರು ಆರೋಪಿಗಳು ಹರಿಯಾಣದಲ್ಲಿರುವ ಬಗ್ಗೆ ದೆಹಲಿ ಪೊಲೀಸ್ ವಿಶೇಷ ಘಟಕದ ಕೌಂಟರ್ ಇಂಟೆಲಿಜೆನ್ಸ್ ತಂಡಕ್ಕೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ದೆಹಲಿ ಪೊಲೀಸ್ ಹಾಗೂ ಹರಿಯಾಣ ಎಸ್ಟಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿತು.
ಪೊಲೀಸರು ಆರೋಪಿಗಳನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದಾಗ, ಪ್ರವೇಶ್ ಮತ್ತು ಹಿಮಾಂಶು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಇಬ್ಬರೂ ಆರೋಪಿಗಳು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಎನ್ಕೌಂಟರ್ ವೇಳೆ ದೆಹಲಿ ಪೊಲೀಸ್ ವಿಶೇಷ ಘಟಕದ ಕಾನ್ಸ್ಟೇಬಲ್ ಅಂಕಿತ್ ಅವರ ಕಾಲಿಗೆ ಗುಂಡು ತಗುಲಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ನಾಲ್ವರು ಪೊಲೀಸ್ ಅಧಿಕಾರಿಗಳ ಬುಲೆಟ್ಪ್ರೂಫ್ ಜಾಕೆಟ್ಗಳಿಗೆ ಗುಂಡು ತಗುಲಿದರೂ ಅವರು ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಹರಿಯಾಣ ಪೊಲೀಸ್ ಹಿರಿಯ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಜ್ಞರು ಹಾಗೂ ಅಪರಾಧ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೊಲೀಸರ ಮೇಲೆ ದಾಳಿ, ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಬಹದ್ದೂರ್ಗಢ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.