


ಕೊಪ್ಪಳ, 09 ಜೂನ್ (ಹಿ.ಸ.) :
ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ, ಕಾರ್ಖಾನೆ ಮಾಲಿನ್ಯ ತೊಲಗಿಸಿ ಬಾಧಿತ ಹಳ್ಳಿಗಳ ಜನರ ಜೀವ, ಆರೋಗ್ಯ ಉಳಿಸಿ 222ನೇ ದಿನದ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು. ಕನಕಗಿರಿ ತಾ. ರಾಂಪುರ ಗ್ರಾಮದ ಪೂಜಾರ ಕುಟುಂಬದ ಶೋಭಾ, ಇವರ ಮಕ್ಕಳಾದ ಬಾಲಕಿ ಬ್ರಾಹ್ಮೀ, ಭಾವೈಕ್ಯ, ಜಾಂಬವಿ ಇಡೀ ದಿನ ಧರಣಿ ಸತ್ಯಾಗ್ರಹ ನಡೆಸಿದರು.
2ನೇ ತರಗತಿಯ ಕಿರಿಯ ಬಾಲಕಿ ಜಾಂಬವಿ ಪೂಜಾರ ಸಂವಿಧಾನದ ಪೀಠಿಕೆಯನ್ನು ಓದಿ ಧರಣಿ ನಿರತರಿಗೆ ಭೋದಿಸಿದರು. ಸತ್ಯಾಗ್ರಹಿಗಳು ಎದ್ದುನಿಂತು ಪ್ರತಿಜ್ಞೆ ಸ್ವೀಕರಿಸಿದರು. ಎರಡನೇ ಪುತ್ರಿ ಬ್ರಾಹ್ಮೀ ಸ್ವಾತಂತ್ರ್ಯ ಹೋರಾಟದ ವೀರರಾಣಿ ಕಿತ್ತೂರು ಚೆನ್ನಮ್ಮನ ನಾಟಕದ ಮಾತುಗಳನ್ನು ಹೇಳಿದಳು.
ಧರಣಿ ಬೆಂಬಲಿಸಿ ಮಾತನಾಡಿದ ಶೋಭಾ ಪೂಜಾರ ಅವರು, ನಾವು ಕೊಪ್ಪಳ ಕಾರ್ಖಾನೆ ಸುದ್ದಿಯನ್ನು ಮಾಧ್ಯಮಗಳ ಮೂಲಕ ಗಮನಿಸುತ್ತಿದ್ದೇವೆ. ಹಿರೇಬಗನಾಳ ಸುತ್ತಲಿನ ಗ್ರಾಮಗಳಿಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ಬಲ್ಡೋಟ ಬಂದು ಇಷ್ಟು ಜನರಿಗೆ ಜೀವ, ಆರೋಗ್ಯ ಸಮಸ್ಯೆ ಮಾಡುತ್ತದೆಂದರೆ ಯಾರ ಒಳಿತಿಗಾಗಿ ಇದನ್ನು ಸಹಿಸಿಕೊಳ್ಳಬೇಕು.
ಇಲ್ಲಿ 222 ದಿನಗಳಿಂದ ಹೋರಾಟ ನಡೆಯುತ್ತದೆ ಎಂದು ಗೊತ್ತಿದ್ದೂ ಭವಿಷ್ಯದ ಕಾಳಜಿ ಉಳ್ಳವರು ಸುಮ್ಮನೆ ಕೂರಬಾರದು. ದೊಡ್ಡಮಟ್ಟದ ಚಳವಳಿಗೆ ಮುಂದಾದರೆ ಜಿಲ್ಲಾಂದ್ಯಂತ ನಮ್ಮಂತ ಮನಸ್ಸು ಇರುವವರು ಬಂದು ಸೇರುತ್ತಾರೆ. ಯಾವುದೇ ಕಾರಣಕ್ಕೂ ಈ ಜಿಲ್ಲೆಗೆ ಇಂಥ ಕಾರ್ಖಾನೆಗಳು ಬೇಡ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ,ಮಹಿಳಾ ಚಿಂತಕಿ ಸಾವಿತ್ರಿ ಮುಜುಮದಾರ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಡಾ. ಬಸವರಾಜ ಪೂಜಾರ, ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಡು, ಚಾರಣಬಳಗದ ಸಿ.ಬಿ. ಪಾಟೀಲ, ಮೂಕಪ್ಪ ಮೇಸ್ತ್ರಿ ಬಸಾಪುರ, ವೆಂಕಣ್ಣ ಬಿ. ಕಟ್ಟಿ, ಮಂಜುನಾಥ ಕವಲೂರು, ಮಂಗಳೇಶ ರಾಠೋಡ್, ಮಖ್ಬೂಲ್ ರಾಯಚೂರು, ಶಿವಪ್ಪ ಜಲ್ಲಿ, ರಾಮಲಿಂಗಯ್ಯ ಶಾಸ್ತ್ರಿ ಇತರರು ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್