

ಕೊಪ್ಪಳ, 08 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯಿಂದ 221ನೇ ಧರಣಿ ಸತ್ಯಾಗ್ರಹ ನಡೆಸಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬಲ್ಡೋಟ ತೊಲಗಿಸಿ ಕೊಪ್ಪಳ, ಭಾಗ್ಯನಗರ ಉಳಿಸಬೇಕೆಂದು ಪತ್ರ ಬರೆಯಲಾಯಿತು.
ಮುಖ್ಯಮಂತ್ರಿಗಳು ಶೀಘ್ರವಾಗಿ ತಮ್ಮೊಂದಿಗೆ ಕೈಗಾರಿಕಾ ಮಂತ್ರಿ, ಕೃಷಿ, ಪರಿಸರ-ಅರಣ್ಣ ಮಂತ್ರಿ. ಹಾಗೂ ಆರೋಗ್ಯ ಮಂತ್ರಿಗಳನ್ನು ತಡಮಾಡದೆ ಮಾಲಿನ್ಯ ಬಾಧಿತ 22 ಹಳ್ಳಿಗಳಿಗೆ ಭೇಟಿ ಕೊಟ್ಟು ಕೇಂದ್ರ ಪರಿಸರ ಇಲಾಖೆಯ ವರದಿಯಂತೆ ಕಾರ್ಖಾನೆಗಳನ್ನು ಸ್ಥಳಾoತರಿಸಬೇಕು ಮತ್ತು ಬಾಧಿತ ಹಳ್ಳಿಯ ಜನರ ಆರೋಗ್ಯ ತಪಾಸಣೆ ಮಾಡಿಸಬೇಕು, ಪರಿಸರ ಅಧ್ಯಯನ ಮಾಡಿಸಬೇಕು.
ಗ್ರಾಮ ಸಮುದಾಯಕ್ಕೆ ಸೇರಿದ ಬಸಾಪುರ ಕೆರೆಯನ್ನು ಹೈಕೋರ್ಟ್ ಆದೇಶದ ಪ್ರಕಾರ ಜನ ಜಾನುವಾರಗಳಿಗೆ ನೀರು ಕುಡಿಯಲು ಮುಕ್ತಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಬಿ.ಎಸ್.ಪಿ.ಎಲ್ ಬಲ್ಡೋಟ ವಿಸ್ತರಣೆಯನ್ನು ತಡೆಹಿಡಿಯಬೇಕು. ತುಂಗಭದ್ರಾ ನದಿಗೆ ಮಾಲಿನ್ಯ ನೀರನ್ನು ಸಂಸ್ಕರಿಸದೆ ಕಾರ್ಖಾನೆಗಳು ಬಿಡುತ್ತಿರುವುದರಿಂದ ಲಕ್ಷಾಂತರ ಜನ, ಜಾನುವಾರು ಈ ನೀರು ಕುಡಿಯುತ್ತಿರುವುದರಿಂದ ಆರೋಗ್ಯ ಹದಗೆಡುತ್ತಿದೆ. ಸರಕಾರ ತೀವ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಲಾಗಿದೆ.
ಧರಣಿ ಸತ್ಯಾಗ್ರಹದಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ನಿವೃತ್ತ ಪ್ರಾಚಾರ್ಯ ಎಲ್. ಎಫ್. ಪಾಟೀಲ, ಬಸವರಾಜ ಹೊಕ್ರಾಣಿ, ಶಂಭುಲಿಂಗಪ್ಪ ಹರಗೇರಿ, ಶಿವಪ್ಪ ಜಲ್ಲಿ, ಭೀಮಪ್ಪ, ಕಾಶಪ್ಪ ಛಲವಾದಿ, ಚಾಂದಪಾಷಾ, ರವಿ ಕಾಂತನವರ, ಎಸ್. ಮಹಾದೇವಪ್ಪ, ವಿ. ಬಿ. ಕಟ್ಟಿ, ರಾಜಶೇಖರ ಏಳುಬಾವಿ, ಶರಣು ಶೆಟ್ಟರ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್