
ಗದಗ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : “ನೀರಿದ್ದರೆ ಜೀವ, ಜೀವನ” ಎಂಬ ಸಂದೇಶವನ್ನು ಅರಿತು ಪ್ರತಿಯೊಬ್ಬರೂ ನೀರಿನ ಸಂರಕ್ಷಣೆಗೆ ಬದ್ಧರಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ ಅವರು ಹೇಳಿದರು.
ಗದಗ ನಗರದ ಜಿಲ್ಲಾ ನ್ಯಾಯಾಲಯದ ಎರಡನೇ ಮಹಡಿಯ ವಿ.ಸಿ. ಸಭಾಂಗಣದಲ್ಲಿಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮನೆಯ ಮುಂಭಾಗದಲ್ಲಿ ಪ್ರಾಣಿ–ಪಕ್ಷಿಗಳಿಗಾಗಿ ತೆಂಗಿನ ಚಿಪ್ಪು ಅಥವಾ ಪಾತ್ರೆಗಳಲ್ಲಿ ನೀರು ಇಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನೀರು ಮಾನವರಿಗೆ ಮಾತ್ರವಲ್ಲ, ಪ್ರಾಣಿ–ಪಕ್ಷಿಗಳ ಬದುಕಿಗೂ ಅತಿ ಮುಖ್ಯವಾಗಿದ್ದು, ಅವುಗಳ ಸಂರಕ್ಷಣೆಯೂ ನಮ್ಮ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.
ನೀರಿನ ಕೊರತೆಯ ಬಗ್ಗೆ ಅರಿವು ಮೂಡಿಸಿ ಅದರ ಅಪವ್ಯಯವನ್ನು ತಡೆಯಬೇಕು. ಮಳೆನೀರು ಸಂಗ್ರಹಣೆ, ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ನೀರು ಸಂರಕ್ಷಿಸುವ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಬೆಳೆಗಳಿಗೂ ಹಾಗೂ ಪ್ರಾಣಿಗಳಿಗೂ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ಕಲ್ಲೂರ ಅವರು ಮಾತನಾಡಿ, ನೀರಿನ ಮಹತ್ವವನ್ನು ವರ್ಷದಿಂದ ವರ್ಷಕ್ಕೆ ಜಾಗೃತಿಯ ಮೂಲಕ ಸಾರಬೇಕಿದೆ. ಇಂದಿನ ಪರಿಸ್ಥಿತಿಯಲ್ಲಿ ನೀರನ್ನು ಖರೀದಿಸುವ ಮಟ್ಟಕ್ಕೆ ತಲುಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆಯ ಸಂಸ್ಥಾಪಕರಾದ ಜೈನ್ ಸನ್ನಿ ಹಸ್ತಿಮಲ್ ಅವರು ಪಿಪಿಟಿ ಪ್ರಸ್ತುತಿಯ ಮೂಲಕ ನೀರಿನ ಕೊರತೆ, ಅದರ ಪರಿಣಾಮಗಳು ಮತ್ತು ಪರಿಹಾರ ಕ್ರಮಗಳ ಕುರಿತು ವಿವರಿಸಿದರು.
ಪ್ರಾಣಿ–ಪಕ್ಷಿಗಳಿಗೆ ಶುದ್ಧ ನೀರು ಸಿಗದಿದ್ದರೆ ಅವುಗಳು ವಲಸೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ನೀರಿನ ಕೊರತೆ ಕಾಡುಪ್ರಾಣಿಗಳನ್ನು ಗ್ರಾಮಗಳತ್ತ ಸೆಳೆಯುತ್ತಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ಒಂದು ಆಕಳಿಗೆ ದಿನಕ್ಕೆ ಸುಮಾರು 40 ಲೀಟರ್ ನೀರು ಅಗತ್ಯವಿದ್ದು, ನೀರಿನ ಕೊರತೆಯಿಂದ ಅನೇಕ ರೋಗಗಳಿಗೆ ತುತ್ತಾಗುತ್ತವೆ. ಗರ್ಭಿಣಿ ಪ್ರಾಣಿಗಳು ನೀರಿಗಾಗಿ ಹೆಚ್ಚು ಸಂಕಷ್ಟ ಅನುಭವಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಗಂಗಾಧರ ಸಿ.ಎಂ., ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕು. ಗೀತಾ ಶಿಂಧೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂರಾದ ಗಿರಿಮಲ್ಲಪ್ಪ ಆರ್. ಶೆಟ್ಟರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಪದ್ಮಶ್ರೀ ಆರ್. ಪಾಟೀಲ, ದ್ವಿತೀಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲಕ ಸಂಘದ ಉಪಾಧ್ಯಕ್ಷ ಎಂ ಎ ಸಂಗನಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ವಸಂತ ಮಡ್ಲೂರ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಶ್ರೀಮತಿ ಖಿಮಿ ಸನ್ನಿ ಜೈನ್, ಅರಿಹಂತ ಸುರೇಶ ಕುಮಾರ್ ಜೈನ್ ಸೇರಿದಂತೆ ಕಾನೂನು ನೆರವು ಅಭಿರಕ್ಷಕರು, ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲರು ಹಾಜರಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಪ್ರಾಣಿ–ಪಕ್ಷಿಗಳಿಗಾಗಿ ನೀರು ಇಡುವ ಮಣ್ಣಿನ ಪಾತ್ರೆಗಳನ್ನು ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆಯಿಂದ ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / lalita MP