
ಕೊಪ್ಪಳ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ನಗರಸಭೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯನ್ನು ರಚನೆ ಮಾಡಲಾಗಿದೆ.
ಸರ್ಕಾರದ ಆದೇಶದಂತೆ, ನಗರ ಮಟ್ಟದ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯನ್ನು ರಚಿಸಿ, ಈ ಸಭೆಯನ್ನು ಕೊಪ್ಪಳ ನಗರ ಸಭೆಯ ಪೌರಾಯುಕ್ತರಾದ ವೆಂಕಟೇಶ ಎಂ. ನಾನಗೂರು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ನಗರ ಮಟ್ಟದಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ಮತ್ತು ಅಪಹರಣ ಪ್ರಕರಣಗಳನ್ನು ತಡೆಗಟ್ಟಲು ಇಲಾಖಾವಾರು ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಪ್ರಸ್ತುತ ಬೇಸಿಗೆ ಅವಧಿ ಮತ್ತು ಅಕ್ಷಯ ತೃತೀಯ ದಿನದಂದು ಹಾಗೂ ಇತರೆ ದಿನಗಳಂದು ಸಾಮೂಹಿಕ ವಿವಾಹಗಳು ಮತ್ತು ವೈಯಕ್ತಿಕ ವಿವಾಹಗಳು ಹೆಚ್ಚು ಆಯೋಜನೆಯಾಗಬಹುದಾಗಿದ್ದು, ಈ ಸಂದರ್ಭದಲ್ಲಿ ಬಾಲ್ಯವಿವಾಹಗಳು ನಡೆಯಬಹುದಾದ ಸಾಧ್ಯತೆ ಇರುವುದರಿಂದ ಬಾಲ್ಯ ವಿವಾಹ ನಿಷೇದಾಧಿಕಾರಿಗಳು ಕಡ್ಡಾಯವಾಗಿ ನಿಮ್ಮ ವ್ಯಾಪ್ತಿಯಲ್ಲಿ ನಡೆಯುವ ಸಾಮೂಹಿಕ ಹಾಗೂ ವೈಯಕ್ತಿಕ ವಿವಾಹಗಳಲ್ಲಿ ಯಾವುದೇ ಬಾಲ್ಯವಿವಾಹಗಳು ಜರುಗದಂತೆ ನಿಗಾವಹಿಸಿ ನಿಯಮಾನುಸಾರ ಕಾರ್ಯಪ್ರವೃತ್ತರಾಗಿ, ಸಾಮೂಹಿಕ ವಿವಾಹ ಆಯೋಜಕರಿಗೆ ಹಾಗೂ ಸಾರ್ವಜನಿಕರಿಗೆ ಬಾಲ್ಯವಿವಾಹ ನಿಷೇದ ಕಾಯ್ದೆಯ ಕುರಿತು ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ, ಶಾಲಾ ಹಾಗೂ ನಗರದ ಎಲ್ಲಾ ಸರ್ಕರಿ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ-1098 ಶಾಶ್ವತ ಗೋಡೆಬರಹ ಮತ್ತು ನಗರದ ಎಲ್ಲ ಮದುವೆ ಹಾಗೂ ಫಂಕ್ಷನ್ ಹಾಲ್ಗಳ ಮೇಲೆ ಬಾಲ್ಯವಿವಾಹ ನಿಷೇಧದ ಕುರಿತು ಗೋಡೆಬರಹವನ್ನು ಬರೆಸಲು ಮತ್ತು ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ಕ್ರಮವಹಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಸೈಯ್ಯದ್ ಮಹಬೂಬ್ ಹುಸೇನ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಪ್ರಮೋದ, ಡಾ. ದಿನೇಶ, ಡಾ. ಮಹೇಶ, ಡಾ. ಮಹೇಶ ಉಮಚಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಶಾಂತ ರೆಡ್ಡಿ, ಪ್ರತಿಭಾ ಕಾಶಿಮಠ, ರವಿ ಬಡಿಗೇರ ಸೇರಿದಂತೆ ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ ಪೊಲೀಸ್, ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್