ಜಗತ್ತನ್ನು ಮೂರು ಜನರು ನಿಯಂತ್ರಣ ಮಾಡುತ್ತಾರೆ : ಯಾಪಲಪರವಿ
ಗದಗ, 18 ಜೂನ್ (ಹಿ.ಸ.) : ಆ್ಯಂಕರ್ : ಜಗತ್ತನ್ನು ವಿಜ್ಞಾನಿಗಳು, ವ್ಯಾಪಾರಸ್ಥರು ಹಾಗೂ ಬರಹಗಾರರು ಈ ಮೂವರೇ ನಿಯಂತ್ರಣ ಮಾಡುತ್ತಾರೆ. ಜಗತ್ತು ನಡೆಯುವದು ವಿಜ್ಞಾನಿಗಳಿಂದ, ಅವರು ಕಂಡುಹಿಡಿಯುವದನ್ನು ಜಗತ್ತಿಗೆ ತೋರಿಸುವವರು ವ್ಯಾಪಾರಿ. ವಿಜ್ಞಾನಿ ಕಂಡು ಹಿಡಿದಿರುವದು ಮತ್ತು ಇಂತಹದನ್ನು ವ್ಯಾಪಾರ ಮಾಡು
ಪೋಟೋ


ಗದಗ, 18 ಜೂನ್ (ಹಿ.ಸ.) :

ಆ್ಯಂಕರ್ : ಜಗತ್ತನ್ನು ವಿಜ್ಞಾನಿಗಳು, ವ್ಯಾಪಾರಸ್ಥರು ಹಾಗೂ ಬರಹಗಾರರು ಈ ಮೂವರೇ ನಿಯಂತ್ರಣ ಮಾಡುತ್ತಾರೆ. ಜಗತ್ತು ನಡೆಯುವದು ವಿಜ್ಞಾನಿಗಳಿಂದ, ಅವರು ಕಂಡುಹಿಡಿಯುವದನ್ನು ಜಗತ್ತಿಗೆ ತೋರಿಸುವವರು ವ್ಯಾಪಾರಿ. ವಿಜ್ಞಾನಿ ಕಂಡು ಹಿಡಿದಿರುವದು ಮತ್ತು ಇಂತಹದನ್ನು ವ್ಯಾಪಾರ ಮಾಡುವ ಬಗ್ಗೆ ಜಗತ್ತಿಗೆ ಪರಿಚಯಿಸುವವರು ಬರಹಗಾರರು ಎಂದು ಚಿಂತಕ ಪ್ರೊ. ಸಿದ್ದು ಯಾಪಲಪರವಿ ಅಭಿಪ್ರಾಯಪಟ್ಟರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜು ಸಭಾಭವನದಲ್ಲಿಂದು ಬಣಜಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಇಂದು ಜಗತ್ತು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ. ಆದರೆ ದೊಡ್ಡ ಪ್ರಮಾಣದಲ್ಲಿರುವ ಸಮಾಜದವರು ಇಂದು ಯಾವ ನಿಟ್ಟಿನಲ್ಲಿ ಬೆಳದಿದ್ದೇವೆ ಎನ್ನುವದನ್ನು ಚಿಂತನೆ ಮಾಡಿಕೊಳ್ಳಬೇಕು.

ವಿದೇಶಗಳಲ್ಲಿ ನಮ್ಮ ದೇಶದವರೇ ಇಂದು ಕೋಟ್ಯಾಧೀಪತಿಗಳಾಗಿದ್ದಾರೆ. ಆದರೆ ನಮ್ಮ ಮಕ್ಕಳು ಅಲ್ಪಸ್ವಲ್ಪ ಸಂಬಳಕ್ಕಾಗಿ ಬೇರೊಬ್ಬರನ್ನು ಅವಲಂಬಿಸುವಂತಾಗಿದೆ. ಇದು ಪ್ರತಿಯೊಬ್ಬರೂ ಚಿಂತನೆ ಮಾಡಬೇಕಾದ ಗಂಭೀರ ವಿಷಯವಾಗಿದೆ. ನಾವು ಬೆಳೆಯುವದರ ಜೊತೆಗೆ ಸಮಾಜದಲ್ಲಿ ಮತ್ತೊಬ್ಬರಿಗೆ ಉದ್ಯೋಗ ಸೃಷ್ಟಿ ಮಾಡುವಂತಹ ಕಾರ್ಯ ಮಾಡಬೇಕು. ಸಮಾಜದ ವತಿಯಿಂದ ಹೆಚ್ಚು ಅಂಕಗಳನ್ನು ಗಳಿಸಿದ ಮಕ್ಕಳ ಪುರಸ್ಕಾರ, ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವದು ಉತ್ತಮ ವಿಚಾರ. ಮಕ್ಕಳು ದೇಶದ ಆಸ್ತಿ. ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಆಗ ಮಾತ್ರ ಸಮಾಜ ಉದ್ಧಾರ ಆಗಲಿದೆ. ಜತೆಗೆ ಮಕ್ಕಳ ಭವಿಷ್ಯ ಕೂಡ ಉಜ್ವಲವಾಗಲಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬನ್ನಿಕೊಪ್ಪ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಎಲ್ಲ ಸಮಾಜಗಳು ಶ್ರೇಷ್ಠತೆಯನ್ನು ಹೊಂದಿವೆ. ಈ ನಿಟ್ಟಿನಲ್ಲಿ ಬಣಜಿಗ ಸಮಾಜ ವ್ಯಾಪಾರ ವೃತ್ತಿಯನ್ನು ಅಳವಡಿಸಿಕೊಂಡಿದ್ದರೂ ಸಹ ಸಾಮಾಜಿಕ, ಶೈಕ್ಷಣಿಕವಾಗಿಯೂ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದ್ದಾರೆ. ಪ್ರತಿಭಾ ಪುರಸ್ಕಾರ ಉತ್ತಮ ಕಾರ್ಯವಾಗಿದ್ದು, ಇದರಿಂದ ಮಕ್ಕಳಲ್ಲಿ ಹೆಚ್ಚು ಹೆಚ್ಚು ಆಸಕ್ತಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ನುಡಿದರು.

ಚಂದ್ರಶೇಖರ ಮಹಾಜನಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ಬಣಜಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಪ್ರಾರಂಭಿಸಿದ 4 ವರ್ಷಗಳಿಂದ ಸಾಕಷ್ಟು ಸಂಘಟನೆಯಾಗಿದ್ದು, ಸಮಾಜ ಸಂಘಟನೆಯಾದರೆ ನಾವು ಬೆಳೆಯುತ್ತೇವೆ. ಸಮಾಜವೂ ಬೆಳೆಯುತ್ತದೆ ಎಂದು ಹೇಳಿದರು.

ಟ್ರಸ್ಟ್‌ನ ಅಧ್ಯಕ್ಷ ವಿಜಯಕುಮಾರ ಹತ್ತಿಕಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಟ್ರಸ್ಟ್‌ನ ಉಪಾಧ್ಯಕ್ಷ ಲೋಹಿತ ನೆಲವಿಗಿ, ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಕರ್ಕಿ, ಹಿರಿಯರಾದ ನಿರ್ಮಲಾದೇವಿ ಹತ್ತಿಕಾಳ, ಬಸವರಾಜ ಬೆಂಡಿಗೇರಿ ಉಪಸ್ಥಿತರಿದ್ದರು. ನಂದಿನಿ ಮಾಳವಾಡ ಪ್ರಾರ್ಥಿಸಿದರು. ಅಕ್ಷತಾ ವಡಕಣ್ಣವರ ಸ್ವಾಗತಿಸಿದರು. ಬಸವರಾಜ ಶೆಟ್ಟರ, ಶೋಭಾ ಗಾಂಜಿ ನಿರೂಪಿಸಿದರು. ಜೆ.ಎಸ್. ರಾಮಶೆಟ್ಟರ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande