ಕೋಲಾರ, ಜೂನ್ ೧೮ (ಹಿ.ಸ) :
ಆ್ಯಂಕರ್ : ಸಾರ್ವಜನಿಕರ ಪ್ರಾಣ, ಆಸ್ತಿಯನ್ನು ರಕ್ಷಣೆ ಮಾಡುವಂತಹ ಕಾರ್ಯ ಜಿಲ್ಲಾ ವಿಪತ್ತು ನಿರ್ವಹಣಾ ಪಡೆಯ ಮುಖ್ಯ ಉದ್ದೇಶವಾಗಿದೆ. ವಿಪತ್ತುಗಳು ಸಂಭವಿಸಿದಾಗ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ಕ್ಷಿಪ್ರ ಕಾರ್ಯಾಚರಣೆ ತಂಡವನ್ನು ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ಇಂದು ನೆಮ್ಮದಿಯಾಗಿ ಸುಖವಾಗಿ ಜೀವಿಸುತ್ತಿದ್ದೇವೆ ಅದಕ್ಕೆ ಕಾರಣ ಗಡಿಗಳಲ್ಲಿ ಕಾಯುತ್ತಿರುವ ಯೋಧರು. ಅದೇ ರೀತಿ ಜಿಲ್ಲೆಯಲ್ಲಿ ಮಳೆ, ವಿಪತ್ತುಗಳು ಸಂಭವಿಸಿದಾಗ ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ಸನ್ನದ್ದರಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ವಿಪತ್ತು ನಿರ್ವಹಣಾ ತಂಡದಲ್ಲಿ ೩೦೦ ಜನರಿದ್ದು, ಎಲ್ಲರೂ ತರಬೇತಿ ಪಡೆದು ಪರಿಣಿತರಾಗಿದ್ದಾರೆ. ಒಬ್ಬರು ೧೦ ಜನರನ್ನು ತಯಾರಿ ಮಾಡಿದರೆ ಆ ತಂಡವು ಮತ್ತಷ್ಟು ಬಲಿಷ್ಟವಾಗುತ್ತದೆ. ವಿಪತ್ತು ನಿರ್ವಹಣೆಯಲ್ಲಿ ಎನ್.ಎಸ್.ಎಸ್., ಸ್ಕೌಟ್ಸ್ ಗೈಡ್ಸ್, ಎನ್ ಜಿ.ಒ.ಗಳ ಜವಾಬ್ದಾರಿ ಅತಿಮುಖ್ಯ ವಾಗಿದೆ. ಸಾರ್ವಜನಿಕರ ಸಹಭಾಗಿತ್ವ ಸಹ ಮುಖ್ಯವಾಗಿದ್ದು, ಎಲ್ಲರ ಜೀವನ ರಕ್ಷಣೆ ಮಾಡುವ ಸಾಮಾಜಿಕ ಹೊಣೆಗಾರಿಕೆ ಸಮುದಾಯಗಳಿಗೂ ಬರಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ಅನಾಹುತ, ವಿಪತ್ತು ಸಂಭವಿಸಿದಾಗ ಈ ಕಾರ್ಯಪಡೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲಿದೆ. ವಿಪತ್ತು ತಡೆಯಲು, ತ್ವರಿತಗತಿಯಲ್ಲಿ ಸ್ಪಂದಿಸಲು ಹಾಗೂ ವಿಪತ್ತು ನಿರ್ವಹಣೆ, ಉಪಶಮನ ಮಾಡಲು ಸದಾ ಸನ್ನದ್ಧವಾಗಿರಲಿದೆ ಅವರಿಗೆ ತರಬೇತಿ ಕೊಡಲಾಗುತ್ತದೆ ತಿಳಿಸಿದರು.
ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತವು ಕ್ಷಿಪ್ರ ಕಾರ್ಯಾಚರಣೆ ತಂಡ ಎಂಬ ವಿನೂತನ ಯೋಜನೆ ರೂಪಿಸಿದ್ದು ಇದು ನಮ್ಮ ಜಿಲ್ಲೆಯಲ್ಲಿಯೇ ಮೊದಲು ಜಾರಿಗೆ ತರಲಾಗಿದೆ. ಆದ್ದರಿಂದ ಇಂತಹ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿ ಅವರಿಗೆ ಸಿಇಓ ಅವರು ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ಜಿಲ್ಲಾ ಅರಣ್ಯ ಅಧಿಕಾರಿ ಸಾರಿನ ಸಿಕ್ಕಲಿಗಾರ್, ಅಗ್ನಿಶಾಮಕ ದಳ, ಗೃಹ ರಕ್ಷಣಾ ದಳ, ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗಹಿಸಿದ್ದರು.
ಚಿತ್ರ : ಕೋಲಾರ ಜಿಲ್ಲಾಧಿಕಾರಿ ಕ್ಷಿಪ್ರ ಕಾರ್ಯಾದರಣೆಯ ತಂಡದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್