ರಾಯಚೂರು, 12 ಜೂನ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದ ಟಿ.ಎ.ಶರವಣ ಹಾಗೂ ಸಮಿತಿಯ ಸದಸ್ಯರ ತಂಡವು ರಾಯಚೂರು ನಗರದಲ್ಲಿರುವ ಇಂಡಸ್ಟ್ರಿಯಲ್ ಗ್ರೋತ್ ಸೆಂಟರ್ಗೆ ಭೇಟಿ ನೀಡಿದ್ದಾರೆ.
ಮಧ್ಯಾಹ್ನ ಬೋಜನ ವಿರಾಮದ ನಂತರ ಕೃಷಿ ವಿಜ್ಞಾನ ವಿವಿ ಆವರಣದಿಂದ ಹೊರಟು, ದೇವಸಗೂರ ರಸ್ತೆಯ ಮಾರ್ಗವಾಗಿ ಒಡ್ಲೂರ ರಸ್ತೆ ಬಳಿಯ ಕೆಐಎಡಿಬಿ ಪ್ರದೇಶಕ್ಕೆ ಆಗಮಿಸಿದ ಶಾಸಕರು, ಅಲ್ಲಿನ ರಸ್ತೆಗಳು ಸರಿ ಇಲ್ಲದ್ದನ್ನು, ಮೂಲ ಸೌಲಭ್ಯಗಳು ಕಾಣದೇ ಇರುವುದನ್ನು ಕಂಡು ಅಸಮಧಾನ ವ್ಯಕ್ತಪಡಿಸಿದರು. 'ಇಲ್ಲಿನ ಕಾರ್ಖಾನೆಗಳ ವಾಸ್ತವ ಪರಿಸ್ಥಿತಿ ಏನಿದೆ ಎಂದು ಗೊತ್ತಿದೆಯಾ. ಇಲ್ಲಿಗೆ ಆಗಾಗ ಭೇಟಿ ಕೊಡ್ತೀರಾ' ಎಂದು ಕೆಐಎಡಿಬಿ ಎಂಜಿನಿಯರುಗಳಿಗೆ ಸಮಿತಿಯ ಅಧ್ಯಕ್ಷರು ಪ್ರಶ್ನಿಸಿದರು.
ಈ ಪ್ರದೇಶದಲ್ಲಿನ ಸೌಲಭ್ಯಗಳು, ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ಮಾಡಿದ ಸಮಿತಿಯ ಅಧ್ಯಕ್ಷರು, ಇಲ್ಲಿ ಯಾವ ಯಾವ ಸಮಸ್ಯೆಗಳಿವೆ. ಅದಕ್ಕೆ ಕೆಐಎಡಿಬಿ ಏನು ಮಾಡುತ್ತಿದೆ ಎಂಬುದರ ಕುರಿತು ಕ್ರಮ ವಹಿಸಿದ ಬಗ್ಗೆ ವರದಿ ನೀಡಬೇಕು ಎಂದು ಕೆಐಎಡಿಬಿ ಎಂಜಿನಿಯರುಗಳಿಗೆ 15 ದಿನಗಳ ಗಡುವು ವಿದಿಸಿದರು.
ಈ ಪ್ರದೇಶದಲ್ಲಿ ಅತ್ಯಂತ ಅವಶ್ಯಕವಾಗಿರುವ ನೀರಿನ ಸಂಪನ್ಮೂಲ ಕಲ್ಪಿಸಬೇಕು. ಇದಕ್ಕೆ ಏನಾದರು ಅಡೆತಡೆ ಇದ್ದರೆ ತಿಳಿಸಿರಿ ಎಂದು ಅಧ್ಯಕ್ಷರು ಎಂಜಿನಿಯರುಗಳಿಗೆ ನಿರ್ದೇಶನ ನೀಡಿದರು.
ರಾಯಚೂರ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಚೂರ ಗ್ರೋಥ್ ಸೆಂಟರ್ ಕೈಗಾರಿಕಾ ಪ್ರದೇಶಗಳಲ್ಲಿ 150ಕ್ಕು ಹೆಚ್ಚು ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಕಾರ್ಮಿಕರು, ಸಾರ್ವಜನಿಕರಿಗೆ ನೀರು ಸರಬರಾಜು ಮತ್ತು ರಸ್ತೆ, ಬೀದಿ ದೀಪ, ಚರಂಡಿಯಂತಹ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ ಹಾಗೂ ಕೆಮಿಕಲ್ ನಿರ್ವಹಣೆ ಸರಿಯಾಗಿ ಮಾಡುವ ಬಗ್ಗೆ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಅಧ್ಯಕ್ಷರೊಂದಿಗೆ ಚರ್ಚಿಸಿದರು.
ಫಾರ್ಮಾ ಮತ್ತು ಕೆಮಿಕಲ್ ಕಂಪನಿಗಳಿಗೆ ಕೆಐಎಡಿಬಿ ನಲ್ಲಿ ಪ್ಲಾಟ್ ನೀಡಲಾಗಿದೆ ವಿನಃ ಇಲ್ಲಿ ಆರಂಭದಲ್ಲಿಯೇ ಆಗಬೇಕಾದ ಮೂಲಭೂತ ಸೌಕರ್ಯಗಳು ಕಳೆದ 19 ವರ್ಷಗಳಿಂದ ಆಗಿಲ್ಲ. ಇಲ್ಲಿ ರಸ್ತೆ ಸರಿ ಇಲ್ಲ. ಬೀದಿ ದೀಪ ಇಲ್ಲ. ಈ ಲೇಔಟ್ ನಿರ್ಮಾಣಕ್ಕೆ ಈ ಹಿಂದೆ 120 ಕೋಟಿ ಖರ್ಚಾಗಿದೆ. ಏನೂ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ವಾಣಿಜ್ಯೋದಮ ಮಂಡಳಿಯ ತ್ರಿವಿಕ್ರಮ ಜೋಶಿ ಹಾಗೂ ಇತರರು ತಿಳಿಸಿ, ನಾನಾ ಬೇಡಿಕೆಗಳ ಮನವಿಯನ್ನು ಅಧ್ಯಕ್ಷರಿಗೆ ಸಲ್ಲಿಸಿದರು.
ಸಾರ್ವಜನಿಕರಿಂದ ಅಸಮಾಧಾನ: ಇಲ್ಲಿನ 15 ಕೆಮಿಕಲ್ ಫ್ಯಾಕ್ಟರಿಗಳ ನೀರನ್ನು ಕೆರೆಗೆ ಬಿಡಲಾಗಿದೆ. ಈ ನೀರು ಬಿಟ್ಟು ಸುಮಾರು 2000 ಜಮೀನಿನ ಮಣ್ಣು ಹಾಳಾಗಿದೆ. ಪ್ರತಿ ದಿನ ನಾಲ್ಕಾರು ಎಮ್ಮೆಗಳು ಸಾಯುತ್ತಿವೆ. ಈ ಇಂಡಸ್ಟ್ರಿಗಳು ಪಕ್ಕದ ಜಮೀನುಗಳಿಗೆ ಸರ್ವೀಸ್ ರಸ್ತೆ ಬಿಡದ ಹಾಗೆ ಹದ್ದು ಬಸ್ತ್ ಮಾಡಿಕೊಂಡಿವೆ. ರಾತ್ರಿ ವೇಳೆ ಕೆಮಿಕಲ್ ತಂದು ಸುರುವುದರಿಂದ ವಿಪರೀತ ಕೆಟ್ಟ ವಾಸನೆ ಬರುತ್ತಿದೆ. ಮಕ್ಕಳು ಇಲ್ಲಿ ನಿದ್ದೆ ಮಾಡದಂತಹ ದುಸ್ಥಿತಿ ಎದುರಾಗಿದೆ ಎಂದು ಅಲ್ಲಿನ ಸ್ಥಳೀಯ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಸಮಸ್ಯೆಗಳ ಬಗ್ಗೆ ಗೊತ್ತಾಗಿದ್ದರಿಂದಲೇ ಸಮಿತಿಯು ರಾಯಚೂರಿಗೆ ಬಂದಿದೆ. ಇಲ್ಲಿನ ಸಮಸ್ಯೆಗಳನ್ನು ಹಂತಹಂತವಾಗಿ ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಈ ವೇಳೆ ಸಮಿತಿಯ ಸದಸ್ಯರು ಆಗಿರುವ ವಿಧಾನ ಪರಿಷತ್ ಶಾಸಕ ನಿರಾಣಿ ಹನುಮಂತಪ್ಪ ರುದ್ರಪ್ಪ, ಪ್ರತಾಪ ಸಿಂಹ ನಾಯಕ ಕೆ., ಡಿ ಎಸ್ ಅರುಣ, ಕೆ.ಎಸ್.ನವೀಣ, ಮಂಜುನಾಥ ಭಂಡಾರಿ, ತಿಪ್ಪಣ್ಣಪ್ಪ ಕಮಕನೂರ, ರಾಯಚೂರಿನ ವಿಧಾನ ಪರಿಷತ್ ಶಾಸಕರಾದ ವಸಂತಕುಮಾರ, ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಕೆಐಎಡಿಬಿಯ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್