ಕೋಲಾರ, ೧೩ ಜೂನ್ (ಹಿ.ಸ) :
ಆ್ಯಂಕರ್ : ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯ ನಂತರ ನೆನೆಗುದಿಗೆ ಬಿದ್ದಿದ್ದ ಕೋಲಾರ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆ ಪ್ರಕ್ರಿಯೆ ಶುಕ್ರವಾರ ಆರಂಭವಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರಗಳನ್ನು ಸಲ್ಲಿಸಿದರು. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ನಾರಾಯಣಸ್ವಾಮಿರವರ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿದೆ.
ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್) ೧೩ ನಿರ್ದೇಶಕ ಸ್ಥಾನಗಳಿಗೆ ಜೂ.೨೫ರಂದು ನಡೆಯಲಿರುವ ಚುನಾವಣೆಗೆ, ಶುಕ್ರವಾರ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ೧೨ ಮಂದಿ ಉಮೇದುವಾರಿಕೆ ಸಲ್ಲಿಸಿದರು.
ಜೂ.೧೩ರಿಂದ ೧೭ರವರೆಗೆ ನಾಮಪತ್ರಗಳ ಸಲ್ಲಿಸಬಹುದು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಟಿ.ಕೆ.ರಮೇಶ್ ಅವರಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬೆಳಗ್ಗೆ ೧೦.೧೫ರ ಸುಮಾರಿಗೆ ಆಗಮಿಸಿದರಾದರೂ ೧೧ ಗಂಟೆಯವರೆಗೆ ಕಾದು, ಆನಂತರ ನಾಮಪತ್ರ ಸಲ್ಲಿಸಿದರು. ಅದುವರೆಗೂ ಚುನಾವಣಾಧಿಕಾರಿ ಬಳಿ ಚರ್ಚಿಸಿ ಹಲವು ಮಾಹಿತಿ ಪಡೆದುಕೊಂಡರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅಭ್ಯರ್ಥಿಗಳಿಗೆ ಬೆಂಬಲ ನೀಡಿದರು.
ಬಂಗಾರಪೇಟೆ ಮತಕ್ಷೇತ್ರದಿಂದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮುಳಬಾಗಿಲು ಪಶ್ಚಿಮ ಮತ ಕ್ಷೇತ್ರದಿಂದ ಎಂ.ಸಿ.ಸರ್ವಜ್ಞಗೌಡ, ಬಿ.ವಿ.ಸಾಮೇಗೌಡ, ಪೂರ್ವ ಕ್ಷೇತ್ರದಿಂದ ಆರ್.ಆರ್.ರಾಜೇಂದ್ರಗೌಡ, ಕೆ.ಎನ್.ನಾಗರಾಜ, ಕಲ್ಲುಪಲ್ಲಿ ಪ್ರಕಾಶ್.
ಮಾಲೂರು ಕಸಬಾ ಕ್ಷೇತ್ರದಿಂದ ಎನ್.ಅಮರೇಶ್, ಶ್ರೀನಿವಾಸಪುರ ಅಡ್ಡಗಲ್ ಕ್ಷೇತ್ರದಿಂದ ಎಂ.ಬೈರಾರೆಡ್ಡಿ, ಆರ್.ನಾರಾಯಣಸ್ವಾಮಿ, ಯಲ್ದೂರು ಕ್ಷೇತ್ರದಿಂದ ಎಲ್.ಶಶಿಕಳ, ವಿ.ಮಧುಸೂಧನರೆಡ್ಡಿ, ಕೋಲಾರ ಜಿಲ್ಲಾ ಮಹಿಳಾ ಉತ್ತರ ಕ್ಷೇತ್ರದಿಂದ ಲಕ್ಷಿö್ಮಪ್ರಿಯ ಉಮೇದುವಾರಿಕೆಗಳನ್ನು ಸಲ್ಲಿಸಿದರು.
ಜೂ.೧೮ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.೧೯ ಮತ್ತು ೨೦ ರಂದು ವಾಪಸ್ಸಿಗೆ ಕಾಲಾವಕಾಶವಿದೆ. ಜೂ.೨೫ರಂದು ಬೆಳಗ್ಗೆ ೯ ರಿಂದ ೪ ಗಂಟೆಯವರೆಗೆ ಕೋಲಾರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಫಲಿತಾಂಶ ಘೋಷಣೆಯಾಗಲಿದೆ.
ಹಗರಣಗಳ ಬಗ್ಗೆ ಕೆಣಕುತ್ತೇನೆ ಎಂಬ ಭಯ
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ನನ್ನನ್ನು ಕೋಮುಲ್ಗೆ ಪ್ರವೇಶಿಸಲೇಬಾರದೆಂದು ಅನೇಕರು ವಿಧಾನ ಸಭೆ ಚುನಾವಣೆಯಲ್ಲಿ ಪಟ್ಟ ಶ್ರಮಕ್ಕಿಂತ ಹೆಚ್ಚು ಪಡುತ್ತಿದ್ದಾರೆ. ಒಕ್ಕೂಟದಲ್ಲಿ ನಡೆದಿರುವ ೨೦೦ ಕೋಟಿ ರೂ. ಮೇಲ್ಪಟ್ಟ ಹಗರಣಗಳ ಬಗ್ಗೆ ತನಿಖೆಗೆ ನಾನೇ ಒತ್ತಾಯ ಮಾಡುತ್ತಿರುವುದರಿಂದ ಎಸ್.ಎನ್. ಬಂದರೆ ಅವೆಲ್ಲಾ ಕೆಣಕುತ್ತಾನೆ. ನಮಗೆ ತೊಂದರೆ ಆಗುತ್ತದೆ ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ನಾನು ಹಾಲು ಉತ್ಪಾದಕರಿಗೆ ಸಹಾಯ ಮಾಡಲು ಹೊರಟಿದ್ದು, ಭಗವಂತ, ಜನರ ಬೆಂಬಲವಿದೆ. ಯಾರು ಏನೇ ಅಡ್ಡ ಹಾಕಿದರೂ ನಾನು ಪ್ರವೇಶ ಮಾಡೇ ಮಾಡುತ್ತೇನೆ ಎಂದು ಹೇಳಿದರು.
ನನ್ನ ಕ್ಷೇತ್ರದ ಎಂಪಿಸಿಎಸ್ ಪ್ರತಿನಿಧಿಗಳು ಮತನೀಡಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಮಹಿಳಾ ಸ್ಥಾನವನ್ನು ಕಳೆದ ಬಾರಿ ಮಾಲೂರಿಗೆ ನೀಡಿದ್ದೆವು. ನಮ್ಮಲ್ಲಿಯೂ ಮತದಾರರು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಬಾರಿ ಮಹಿಳಾ ಅಭ್ಯರ್ಥಿಯನ್ನೂ ಕಣಕ್ಕೆ ಇಳಿಸುತ್ತಿದ್ದೇವೆ ಎಂದರು.
ಚಿತ್ರ : ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಲು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್