
ನವದೆಹಲಿ, 04 ಆಗಸ್ಟ್ (ಹಿ.ಸ.):
ಆ್ಯಂಕರ್:ಇರಾನ್, ಹೋರ್ಮುಜ್ ಜಲಸಂಧಿ, ಪರ್ಷಿಯನ್ ಕೊಲ್ಲಿ ಹಾಗೂ ಸುತ್ತಮುತ್ತಲಿನ ಸಮುದ್ರ ಪ್ರದೇಶಗಳಲ್ಲಿ ಭದ್ರತಾ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 'ನಾವಿಕ ಪ್ರಥಮ್' ಅಭಿಯಾನದಡಿ ಇದುವರೆಗೆ 3,972 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ. ಅಲ್ಲದೆ, 60 ಹಡಗುಗಳು ಹೋರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಭಾರತಕ್ಕೆ ಸರಕು ಸಾಗಿಸಿವೆ.
ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಬಂದರು, ಹಡಗು ಸಾರಿಗೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್, ಸಮುದ್ರ ಆಡಳಿತ ಮಹಾನಿರ್ದೇಶನಾಲಯ (ಡಿಜಿಎಂಎ) ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ 'ನಾವಿಕ ಪ್ರಥಮ್' ಅಭಿಯಾನವನ್ನು ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.
ಈ ಅಭಿಯಾನದಡಿ 24 ಗಂಟೆಗಳ ನಿಯಂತ್ರಣ ಕೊಠಡಿ, ಡಿಜಿ ಕಮ್ಯುನಿಕೇಷನ್ ಕೇಂದ್ರದ ಮೂಲಕ ನಿರಂತರ ನಿಗಾ, ಪ್ರತಿ 24 ಗಂಟೆಗಳಿಗೊಮ್ಮೆ ಪರಿಸ್ಥಿತಿ ವರದಿ ಪ್ರಕಟಣೆ ಹಾಗೂ ಹಡಗುಗಳು ಮತ್ತು ಭಾರತೀಯ ನಾವಿಕರ ನೈಜ-ಸಮಯದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.
24 ಗಂಟೆಗಳ ನಿಯಂತ್ರಣ ಕೊಠಡಿಯು ಇದುವರೆಗೆ ನಾವಿಕರು, ಅವರ ಕುಟುಂಬದವರು ಹಾಗೂ ಸಮುದ್ರ ವಲಯಕ್ಕೆ ಸಂಬಂಧಿಸಿದವರಿಂದ ಬಂದ 15,771 ದೂರವಾಣಿ ಕರೆಗಳು ಮತ್ತು 36,499 ಇ-ಮೇಲ್ಗಳಿಗೆ ಸ್ಪಂದಿಸಿದೆ. ಅಗತ್ಯವಿದ್ದಾಗ ನಾವಿಕರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳುವುದರ ಜೊತೆಗೆ ಸಮಾಲೋಚನಾ ಸೇವೆಯನ್ನೂ ಒದಗಿಸಲಾಗುತ್ತಿದೆ. ಯಾವುದೇ ನಾವಿಕ ಮೃತಪಟ್ಟರೆ ಸೀಫೇರರ್ಸ್ ವೆಲ್ಫೇರ್ ಫಂಡ್ ಸೊಸೈಟಿಯ ಮೂಲಕ ತಕ್ಷಣ ₹10 ಲಕ್ಷ ಪರಿಹಾರ ನೀಡುವ ವ್ಯವಸ್ಥೆಯೂ ಇದೆ ಎಂದು ಸಚಿವರು ತಿಳಿಸಿದ್ದಾರೆ.
ಜನವರಿಯಿಂದ ಜುಲೈವರೆಗೆ ಹಲವು ಭದ್ರತಾ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಭಾರತೀಯ ನಾವಿಕರನ್ನು ಇರಾನ್ಗೆ ಕಳುಹಿಸದಿರುವುದು, ಹೋರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಿಗೆ ಹೆಚ್ಚುವರಿ ಭದ್ರತಾ ಕ್ರಮ, ಹಡಗು-ಕರಾವಳಿ ಭದ್ರತಾ ಅಭ್ಯಾಸ, ಅಪಾಯ ಮೌಲ್ಯಮಾಪನ, ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡುವುದು ಹಾಗೂ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಭಾರತೀಯ ನಾವಿಕರನ್ನು ನಿಯೋಜಿಸದಂತೆ ಸೂಚಿಸಲಾಗಿದೆ.
ಜುಲೈ 1ರಿಂದ ಆರಂಭಗೊಂಡಿರುವ ಇ-ನಾವಿಕ ಪೋರ್ಟಲ್ ಮೂಲಕ ಸಮುದ್ರ ಅಪಘಾತಗಳು, ಭದ್ರತಾ ಘಟನೆಗಳು ಮತ್ತು ತುರ್ತು ಪರಿಸ್ಥಿತಿಗಳ ಕುರಿತು ಆನ್ಲೈನ್ ವರದಿ, ದೂರುಗಳ ನಿವಾರಣೆ ಹಾಗೂ ತುರ್ತು ನಿರ್ವಹಣೆಯ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ ಪರ್ಷಿಯನ್ ಕೊಲ್ಲಿ, ಹೋರ್ಮುಜ್ ಜಲಸಂಧಿ, ಒಮಾನ್ ಕೊಲ್ಲಿ, ಏಡನ್ ಕೊಲ್ಲಿ ಮತ್ತು ಕೆಂಪು ಸಮುದ್ರ ಮಾರ್ಗದಲ್ಲಿ ಸಂಚರಿಸುವ ಹಡಗುಗಳಿಗೆ ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಲಾಗಿದ್ದು, ಅಗತ್ಯವಿದ್ದರೆ ಭಾರತೀಯ ನೌಕಾಪಡೆಯು ತಕ್ಷಣ ನೆರವು ಒದಗಿಸಲು ಇದು ಸಹಕಾರಿಯಾಗಲಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.