
ಬಳ್ಳಾರಿ, 08 ಜುಲೈ (ಹಿ.ಸ.)
ಆ್ಯಂಕರ್:
ಆಂಧ್ರ ಪ್ರದೇಶದ ಎನ್ಟಿಆರ್ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಬಳ್ಳಾರಿ ನಗರದ ಕೌಲಬಜಾರ್ ಪ್ರದೇಶದಲ್ಲಿರುವ ಅಬ್ದುಲ್ ಸಲಾಂ ನಿವಾಸದಲ್ಲಿ ಬುಧವಾರ ಶೋಧ ಕಾರ್ಯ ನಡೆಸಿದರು.
ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಈ ಶೋಧ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಎನ್ಟಿಆರ್ ಜಿಲ್ಲೆಯ ರೆಹಮತುಲ್ಲ ಷರೀಫ್ ವಿರುದ್ಧ ಆನ್ಲೈನ್ನಲ್ಲಿ ಮೂಲಭೂತವಾದದ ಪ್ರಚಾರ, ಧಾರ್ಮಿಕ ಪ್ರಚೋದನೆ ಹಾಗೂ ನಿಷೇಧಿತ ಉಗ್ರ ಸಂಘಟನೆಗಳ ಪರ ಚಟುವಟಿಕೆ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ವೇಳೆ ಬಳ್ಳಾರಿಯ ಅಬ್ದುಲ್ ಸಲಾಂನೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿ ಎನ್ಐಎಗೆ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಅಬ್ದುಲ್ ಸಲಾಂನನ್ನು ಕಳೆದ ಮಾರ್ಚ್ 26ರಂದು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.
ಪ್ರಕರಣದ ಮುಂದುವರಿದ ತನಿಖೆಯ ಭಾಗವಾಗಿ ಡಿಜಿಟಲ್ ಸಾಕ್ಷ್ಯಗಳು, ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳು ಹಾಗೂ ಆನ್ಲೈನ್ ಸಂಪರ್ಕಗಳ ಕುರಿತು ಎನ್ಐಎ ಅಧಿಕಾರಿಗಳು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್