




ಬಳ್ಳಾರಿ, 31 ಜುಲೈ (ಹಿ.ಸ.)
ಆ್ಯಂಕರ್: ಬಳ್ಳಾರಿ ನಗರಕ್ಕೆ ಸಮೀಪದಲ್ಲಿ ಇರುವ ಅಂದ್ರಾಳ್ ಗ್ರಾಮದಲ್ಲಿ ಪತ್ನಿ ಮತ್ತು ಮಗಳನ್ನು ಗುರುವಾರ ರಾತ್ರಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯು ಪೊಲೀಸ್ ಠಾಣೆಗೆ ಶುಕ್ರವಾರ ಆಗಮಿಸಿ, ಶರಣಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ಹೊನ್ನೂರಪ್ಪ (28). ಆರೋಪಿ ಹೊನ್ನೂರಪ್ಪ ತನ್ನ ಪತ್ನಿ ಶ್ರೀಮತಿ ರಾಜೇಶ್ವರಿ (24) ಮತ್ತು ಮಗಳು ಅಶ್ವಿನಿ (07) ತಿಂಗಳು ಅವರನ್ನು ಗುರುವಾರ ರಾತ್ರಿ ಸುತ್ತಿಗೆಯಿಂದ ಹೊಡೆದು (ಚಚ್ಚಿ) ಕೊಲೆ ಮಾಡಿ, ಪರಾರಿ ಆಗಿದ್ದನು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ.ಪೆನ್ನೇಕರ್ ಅವರು, 6 ವರ್ಷಗಳ ಹಿಂದೆ ಆರೋಪಿ ಹಾಗೂ ಕೊಲೆಯಾದ ಮಹಿಳೆಯ ವಿವಾಹ ನಡೆದಿತ್ತು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹಗಳ ಜೊತೆ ಹೆಂಡತಿಯ ಶೀಲವನ್ನು ಶಂಕಿಸಿ, ಅಶ್ವಿನಿ ತನ್ನದಲ್ಲ ಎಂದು ಹೇಳಿ ಪದೇ ಪದೇ ಜಗಳವಾಡುತ್ತಿದ್ದ ಕಾರಣ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಹತ್ಯೆಯಾದ ಮಹಿಳೆಯ ಸಹೋದರ ಸುರೇಶ್ ಅವರು ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 160/2026 ಕಲಂ 103(1) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ದೂರು ದಾಖಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್