
ಬೆಂಗಳೂರು, 24 ಜುಲೈ (ಹಿ.ಸ.):
ಆ್ಯಂಕರ್:
ನೀರು ಡಂಪ್ ಮಾಡಲು ತೆರಳಿದ್ದ ವಾಟರ್ ಟ್ಯಾಂಕರ್ ಅನ್ನು ನಾಲ್ಕು ಕಿಲೋಮೀಟರ್ಗಳಿಗೂ ಅಧಿಕ ದೂರ ಬೈಕ್ಗಳಲ್ಲಿ ಬೆನ್ನಟ್ಟಿ, ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಹಾಗೂ ಬೇಗೂರು ಬಳಿ ನಡೆದಿದೆ.
ಪರಪ್ಪನ ಅಗ್ರಹಾರ ಸಮೀಪ ನೀರು ಹಾಕಲು ತೆರಳಿದ್ದ ವಾಟರ್ ಟ್ಯಾಂಕರ್ ಚಕ್ರದ ಕೆಳಗೆ ರಸ್ತೆಯಲ್ಲಿ ಹಾಕಿದ್ದ ಹಲಗೆ ಸಿಲುಕಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯರೊಂದಿಗೆ ಗಲಾಟೆ ಆರಂಭವಾಗಿದೆ. ಮಾತಿಗೆ ಮಾತು ಬೆಳೆದ ಬಳಿಕ ಆಕ್ರೋಶಗೊಂಡ ಪುಂಡರು, ಮೂರ್ನಾಲ್ಕು ಬೈಕ್ಗಳಲ್ಲಿ ಟ್ಯಾಂಕರ್ ಅನ್ನು ಬೇಗೂರು ವರೆಗೆ ಸುಮಾರು ನಾಲ್ಕು ಕಿಲೋಮೀಟರ್ಗಳಷ್ಟು ದೂರ ಅಟ್ಟಿಸಿಕೊಂಡು ಹೋಗಿದ್ದಾರೆ.
ಬಳಿಕ ಅಡ್ಡಗಟ್ಟಿದ ದುಷ್ಕರ್ಮಿಗಳು ಕಲ್ಲಿನಿಂದ ಟ್ಯಾಂಕರ್ನ ಮುಂಭಾಗದ ಗಾಜನ್ನು ಪುಡಿಗಟ್ಟಿದ್ದಾರೆ. ಅಷ್ಟೇ ಅಲ್ಲದೆ, ಡ್ರೈವರ್ ತೆಲೆಗೆ ಕಲ್ಲಿನಿಂದ ಹೊಡೆದು ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಡ್ರೈವರ್ ಅವರನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ
ಪುಂಡರ ಈ ದರ್ಪ ಮತ್ತು ದುಷ್ಕೃತ್ಯದ ಸಂಪೂರ್ಣ ದೃಶ್ಯವು ಸ್ಥಳದಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII