
ಸೂರತ್, 28 ಜೂನ್ (ಹಿ.ಸ.) :
ಆ್ಯಂಕರ್ : ಪರಿಸರ ಸಂರಕ್ಷಣೆ ಮತ್ತು ನಗರ ಹಸಿರೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಗುಜರಾತಿನ ಸೂರತ್ನಲ್ಲಿ ಭಾನುವಾರ 'ಮೆಗಾ ವೃಕ್ಷಾರೋಪಣ ಅಭಿಯಾನ'ಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅಭಿಯಾನಕ್ಕೆ ಚಾಲನೆ ನೀಡಿ, 25 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು.
ಸೂರತ್ ಮಹಾನಗರ ಪಾಲಿಕೆಯ ದಕ್ಷಿಣ–ಎ ವಲಯದ ಭೆಸ್ತಾನ್ ಪ್ರದೇಶದಲ್ಲಿರುವ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಆಕ್ಸಿಜನ್ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಸಸಿ ನೆಟ್ಟು ಸ್ಮರಣಾರ್ಥ ಫಲಕವನ್ನು ಅನಾವರಣಗೊಳಿಸಿದರು.
ಅಭಿಯಾನದಡಿ ಬೇವು, ಅಶ್ವತ್ಥ, ಶಹತೂತ್, ಸೀಬೆ, ನೆಲ್ಲಿಕಾಯಿ, ಸೀತಾಫಲ, ನುಗ್ಗೆ ಸೇರಿದಂತೆ 40ಕ್ಕೂ ಹೆಚ್ಚು ಸ್ಥಳೀಯ ಜಾತಿಯ 25,000 ಸಸಿಗಳನ್ನು ನೆಡಲಾಯಿತು. ಜೊತೆಗೆ ಸಾರ್ವಜನಿಕರಿಗೆ 5,000 ವಿವಿಧ ಜಾತಿಯ ಸಸಿಗಳನ್ನು ಉಚಿತವಾಗಿ ವಿತರಿಸಿ ಮನೆ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೆಡುವಂತೆ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವೃಕ್ಷಾರೋಪಣ ಹಾಗೂ ಸಸಿ ಸಂರಕ್ಷಣೆಯ ಪ್ರತಿಜ್ಞೆ ಬೋಧಿಸಲಾಯಿತು. ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಹಲವು ಶಾಲೆಗಳ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಮತ್ತು ಸ್ವಯಂಸೇವಾ ಸಂಘಟನೆಗಳ ಸದಸ್ಯರು ಉತ್ಸಾಹದಿಂದ ಸಸಿ ನೆಡುವ ಕಾರ್ಯದಲ್ಲಿ ಪಾಲ್ಗೊಂಡರು.
ನೇಚರ್ ಕ್ಲಬ್ ಸೂರತ್, ಗ್ರೀನ್ ಆರ್ಮಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸೂರತ್ ವನ್ ಫೌಂಡೇಶನ್ ಸೇರಿದಂತೆ ಅನೇಕ ಸಂಘಟನೆಗಳು ಅಭಿಯಾನಕ್ಕೆ ಕೈಜೋಡಿಸಿದ್ದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಾಬೆನ್ ಮವಾಣಿ ವಹಿಸಿದ್ದರು. ಈ ಸಂದರ್ಭದಲ್ಲಿ ಸೂರತ್ ನಗರ ಬಿಜೆಪಿ ಅಧ್ಯಕ್ಷ ಪರೇಶ್ ಪಟೇಲ್, ಶಾಸಕರಾದ ಸಂಗೀತಾಬೆನ್ ಪಾಟೀಲ್, ಮನುಭಾಯಿ ಪಟೇಲ್, ಪ್ರವೀಣಭಾಯಿ ಘೋಘಾರಿ, ಮಹಾನಗರ ಪಾಲಿಕೆಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಸೂರತ್ ನಗರದಲ್ಲಿ ಹಸಿರು ವಾತಾವರಣವನ್ನು ವಿಸ್ತರಿಸುವುದು, ವಾಯುಮಾಲಿನ್ಯ ನಿಯಂತ್ರಿಸುವುದು ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.