

ಬಳ್ಳಾರಿ, 24 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯ ಜಂಟಿ ಆಶ್ರಯದಲ್ಲಿ ಬಿಡಿಸಿಸಿಐನ ಸಭಾಂಗಣದಲ್ಲಿ `ವಿಶೇಷ ಔಟ್ರೀಚ್ ನ್ಯೂ ಇನ್ಕಮ್ ಟ್ಯಾಕ್ಸ್ ಆಕ್ಟ್-2025'ರ ಕಾರ್ಯಾಗಾರವು ಬುಧವಾರ ಯಶಸ್ವಿಯಾಗಿ ನೆರವೇರಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ, ಅವ್ವಾರು ಮಂಜುನಾಥ್ ಅವರು ಸಸಿಗೆ ನೀರೆರೆದು ಕಾರ್ಯಾಗಾರವನ್ನು ಉದ್ಘಾಟಿಸಿ, ಭಾರತದ ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಸೇರಿ ವಿವಿಧ ರೀತಿಯ ತೆರಿಗೆಗಳಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳ ಕುರಿತು ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ವೃತ್ತಿಪರರು ಹಾಗೂ ತೆರಿಗೆದಾರರು ಸದಾಕಾಲ ಅಪ್ಡೇಟ್ ಅಗಬೇಕು ಎಂದರು.
ಬಳ್ಳಾರಿ ವೃತ್ತ 1ರ ಸಹಾಯಕ ಆದಾಯ ತೆರಿಗೆ ಆಯುಕ್ತರಾಗಿರುವ (ಎಸಿಐಟಿ) ಎಂ. ಶಿವಶಂಕರ ನಾಯಕ್ ಅವರು ಕಾರ್ಯಾಗಾರದ ಅಧ್ಯಕ್ಷತೆವಹಿಸಿ, `ವಿಶೇಷ ಔಟ್ರೀಚ್ ನ್ಯೂ ಇನ್ಕಮ್ ಟ್ಯಾಕ್ಸ್ ಆಕ್ಟ್-2025'ರ ಕಾರ್ಯಾಗಾರವು ಪ್ರತಿಯೊಬ್ಬರಿಗೂ ನೆರವಾಗಲಿದೆ. ತೆರಿಗೆ ಪದ್ಧತಿಯಲ್ಲಿನ ಸರಳತೆ, ತಂತ್ರಜ್ಞಾನ ಮತ್ತು ಉಪಯೋಗಳ ಕುರಿತು ಇರುವ ಅನೇಕ ಸಂಶಯಗಳಿಗೆ ಈ ಕಾರ್ಯಾಗಾರದಲ್ಲಿ ಪರಿಹಾರ ಸಿಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿರುವ ಆದಾಯ ತೆರಿಗೆ ಅಧಿಕಾರಿಗಳಾದ (ಐಟಿಒ) ಬಿ. ಮಲ್ಲಿಕಾರ್ಜುನ, ಬಿ.ವಿ.ವಿ. ಸತ್ಯನಾರಾಯಣ ಅವರು, `ವಿಶೇಷ ಔಟ್ರೀಚ್ ನ್ಯೂ ಇನ್ಕಮ್ ಟ್ಯಾಕ್ಸ್ ಆಕ್ಟ್-2025'ರ ಕುರಿತು ಸಮಗ್ರವಾಗಿ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿರುವ ಆದಾಯ ತೆರಿಗೆ ಅಧಿಕಾರಿಗಳಾದ, ಬಿ.ವಿ.ವಿ. ಸತ್ಯನಾರಾಯಣ ಅವರು ಟಿಡಿಎಸ್ (tax deducted at source) ಸಂಬಂಧಿತ ಪ್ರಮುಖ ಅಂಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ವಿವಿಧ ಪಾವತಿಗಳ ಸಂದರ್ಭದಲ್ಲಿ ಮೂಲದಲ್ಲಿಯೇ ತೆರಿಗೆಯನ್ನು ಕಡಿತಗೊಳಿಸುವ ಟಿಡಿಎಸ್ ವ್ಯವಸ್ಥೆಯ ಉದ್ದೇಶ, ಅದರ ಅನ್ವಯತೆ, ಕಡಿತಗೊಳಿಸಬೇಕಾದ ದರಗಳು ಹಾಗೂ ಸರ್ಕಾರಕ್ಕೆ ನಿಗದಿತ ಅವಧಿಯಲ್ಲಿ ಜಮಾ ಮಾಡುವ ಪ್ರಕ್ರಿಯೆಯ ಬಗ್ಗೆ ಅವರು ವಿವರಿಸಿದರು. ಅನೇಕರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಟ್ಯಾಕ್ಸೇಶನ್ ಕಮಿಟಿ ಚೇರ್ಮೆನ್ ಆಗಿರುವ ಸಿಎ ಕೆ. ರಾಜಶೇಖರ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾಗಿರುವ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಹಾಗೂ ವಿ. ರಾಮಚಂದ್ರ, ಇವೆಂಟ್ಸ್ ಕಮಿಟಿ ಚೇರ್ಮೆನ್, ನೇಕಾರ ನಾಗರಾಜ್, ಐಟಿ ಕಮಿಟಿ ಚೇರ್ಮನ್ ಪಿ.ವೇಣುಗೋಪಾಲ್ ಗುಪ್ತ ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಕಮಿಟಿಗಳ ಚೇರ್ಮೆನ್ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳವರು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್