
ಬಳ್ಳಾರಿ, 19 ಜೂನ್ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆ ಹಾಗೂ ಸಹಾಯಕಿಯರ ಗೌರವ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ 4 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಒಟ್ಟು 30 ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆ ಮತ್ತು 30 ಅಂಗನವಾಡಿ ಕಂ ಕ್ರಷ್ ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆಯ ಮೇರೆಗೆ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಜುಲೈ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಹತೆಗಳು:
ಅಭ್ಯರ್ಥಿಗಳು ಕಡ್ಡಾಯವಾಗಿ ಮಹಿಳೆಯಾಗಿದ್ದು, ಸಂಬಂಧಿಸಿದ ಸ್ಥಳೀಯ ಅಂಗನವಾಡಿ ಕಂ ಕ್ರಷ್ ಕೇಂದ್ರದ ಸರ್ವೆ ವ್ಯಾಪ್ತಿಯಲ್ಲಿ/ಗ್ರಾಮದಲ್ಲಿ/ವಾರ್ಡಿನಲ್ಲಿ ವಾಸವಾಗಿರಬೇಕು. ಅಂಗನವಾಡಿ ಕಾರ್ಯಕರ್ತೆಯಿಂದ ದೃಢೀಕೃತ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು.
ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. (ರಾಷ್ಟ್ರೀಯ ಶಿಶುಪಾಲನಾ ಕೇಂದ್ರದ ಮಾಜಿ ಸಿಬ್ಬಂದಿ, ವಿಧವೆಯರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ).
ವಿದ್ಯಾರ್ಹತೆ:
*ಕಾರ್ಯಕರ್ತೆ ಹುದ್ದೆ:* ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ. (ಅರ್ಹ ಅಭ್ಯರ್ಥಿ ಲಭ್ಯವಿಲ್ಲದಿದ್ದರೆ 10ನೇ ತರಗತಿ ಪಾಸಾದವರನ್ನು ಪರಿಗಣಿಸಲಾಗುವುದು).
*ಸಹಾಯಕಿ ಹುದ್ದೆ:* 10ನೇ ತರಗತಿ ತೇರ್ಗಡೆಯಾಗಿರಬೇಕು. (ಅರ್ಹ ಅಭ್ಯರ್ಥಿ ಲಭ್ಯವಿಲ್ಲದಿದ್ದರೆ ಕನಿಷ್ಠ 7ನೇ ತರಗತಿ ಪಾಸಾದವರನ್ನು ಪರಿಗಣಿಸಲಾಗುವುದು). ಅಭ್ಯರ್ಥಿಗಳು 10ನೇ ತರಗತಿಯವರೆಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಥವಾ ಕನ್ನಡ ಮಾಧ್ಯಮದಲ್ಲಿ ಓದಿರಬೇಕು.
ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದ್ದು, ಗೌರವ ಸೇವೆಯಾಗಿರುತ್ತವೆ. ಕಾರ್ಯಕರ್ತೆ ಹುದ್ದೆಗೆ ಮಾಸಿಕ ರೂ. 5,500/- ಹಾಗೂ ಸಹಾಯಕಿ ಹುದೆಗೆ ಮಾಸಿಕ ರೂ. 3,000/-.
ಇಲಾಖಾ ಮಾರ್ಗಸೂಚಿಯ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯ ಮೂಲಕ ನೇರ ನೇಮಕಾತಿ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಮುಗಿದ ನಂತರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಆಯಾ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯಲ್ಲಿ ಇಟ್ಟಿರುವ ಅರ್ಜಿ ಪೆಟ್ಟಿಗೆಗೆ ಹಾಕತಕ್ಕದ್ದು. ಅಪೂರ್ಣ ಹಾಗೂ ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದು. ಬಳ್ಳಾರಿ ಗ್ರಾಮಾಂತರ/ಕುರುಗೋಡು-8971982008, ಬಳ್ಳಾರಿ ನಗರ-8310218874, ಸಂಡೂರು-8971982008, ಸಿರುಗುಪ್ಪ/ಕಂಪ್ಲಿ-9449575444 ಹಾಗೂ ಉಪನಿರ್ದೇಶಕರ ಕಚೇರಿ, ಬಳ್ಳಾರಿ- 08392-266219 ಗೆ ಸಂಪರ್ಕಿಸಬಹುದಾಗಿದೆ .
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್