
ಧರ್ಮಶಾಲಾ, 17 ಮೇ (ಹಿ.ಸ.) :
ಆ್ಯಂಕರ್ : ಧರ್ಮಶಾಲಾದಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್ಗಳ ಭರ್ಜರಿ ಜಯ ಸಾಧಿಸಿ ಐಪಿಎಲ್ 19ನೇ ಆವೃತ್ತಿಯ ಪ್ಲೇ ಆಫ್ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್ ಸಿ ಬಿ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಪಂಜಾಬ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 199 ರನ್ಗಳಿಗೆ ಸೀಮಿತವಾಗಿ ಸೋಲೊಪ್ಪಿಕೊಂಡಿತು.
ಬೆಂಗಳೂರು ಪರ ವಿರಾಟ್ ಕೊಹ್ಲಿ ಮತ್ತೊಮ್ಮೆ ಜವಾಬ್ದಾರಿಯುತ ಆಟ ಪ್ರದರ್ಶಿಸಿ 37 ಎಸೆತಗಳಲ್ಲಿ 58 ರನ್ ಬಾರಿಸಿದರು. ದೇವದತ್ ಪಡಿಕ್ಕಲ್ 25 ಎಸೆತಗಳಲ್ಲಿ 45 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಈ ಜೋಡಿ ಎರಡನೇ ವಿಕೆಟ್ಗೆ ವೇಗದ 76 ರನ್ಗಳ ಜೊತೆಯಾಟ ನೀಡಿತು.
ಈ ಪಂದ್ಯದಲ್ಲಿ ಮೊದಲ ಬಾರಿಗೆ ಅವಕಾಶ ಪಡೆದ ವೆಂಕಟೇಶ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದರು. ಅವರು ಕೇವಲ 40 ಎಸೆತಗಳಲ್ಲಿ ಅಜೇಯ 73 ರನ್ ಸಿಡಿಸಿ ತಂಡದ ಮೊತ್ತವನ್ನು 222ಕ್ಕೆ ಕೊಂಡೊಯ್ದರು. ಅವರ ಇನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ಗಳು ಸೇರಿದ್ದವು. ಕೊನೆಯ ಹಂತದಲ್ಲಿ ಟಿಮ್ ಡೇವಿಡ್ 12 ಎಸೆತಗಳಲ್ಲಿ 28 ರನ್ ಚಚ್ಚಿ ತಂಡಕ್ಕೆ ವೇಗ ನೀಡಿದರು.
ಪಂಜಾಬ್ ಪರ ಹರ್ಪಿತ್ ಬ್ರಾರ್ ಎರಡು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಹಾಗೂ ಯುಜುವೇಂದ್ರ ಚಹಾಲ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಬೃಹತ್ ಮೊತ್ತದ ಬೆನ್ನಟ್ಟಿದ ಪಂಜಾಬ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. 3.2 ಓವರ್ಗಳಲ್ಲಿ ಕೇವಲ 19 ರನ್ ಗಳಿಸುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು. ಬಳಿಕ ಸೂರ್ಯಾಂಶ್ ಶೆಡ್ಜ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ತಂಡಕ್ಕೆ ಚೇತರಿಕೆ ನೀಡಿದರು.
ಶಶಾಂಕ್ ಸಿಂಗ್ ಕೇವಲ 27 ಎಸೆತಗಳಲ್ಲಿ 56 ರನ್ ಸಿಡಿಸಿ ಪಂಜಾಬ್ಗೆ ಗೆಲುವಿನ ಆಸೆ ಮೂಡಿಸಿದರು. ಸ್ಟೋಯ್ನಿಸ್ ಜೊತೆಗೂಡಿ ಅವರು ವೇಗವಾಗಿ ರನ್ ಕಲೆಹಾಕಿ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು.
ಆದರೆ ಅಂತಿಮ ಹಂತದಲ್ಲಿ ವೇಗಿ ಜೋಶ್ ಹೇಜಲ್ವುಡ್ ಮಾರಕ ಬೌಲಿಂಗ್ ಪ್ರದರ್ಶನ ನೀಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. 19ನೇ ಓವರ್ನ ಮೊದಲ ಎಸೆತದಲ್ಲೇ ಸ್ಟೋಯ್ನಿಸ್ ವಿಕೆಟ್ ಕಬಳಿಸಿದ ಅವರು ಆ ಓವರ್ನಲ್ಲಿ ಕೇವಲ 7 ರನ್ ಮಾತ್ರ ಬಿಟ್ಟುಕೊಟ್ಟು ಪಂಜಾಬ್ ಮೇಲೆ ಭಾರಿ ಒತ್ತಡ ಹೇರಿದರು. ಅಂತಿಮವಾಗಿ ಆರ್ ಸಿ ಬಿ ಬೌಲರ್ಗಳ ಶಿಸ್ತಿನ ದಾಳಿಗೆ ಸಿಲುಕಿದ ಪಂಜಾಬ್ 200 ರನ್ ಗಡಿಯನ್ನೂ ದಾಟಲು ವಿಫಲವಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh.M.B.