
ನವದೆಹಲಿ, 14 ಮೇ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರದ ಬಾರಾಮತಿ ಸಮೀಪ ಬುಧವಾರ ನಡೆದ ರೆಡ್ಬರ್ಡ್ ಏವಿಯೇಷನ್ ತರಬೇತಿ ವಿಮಾನದ ಅಪಘಾತ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆ ಆರಂಭಿಸಿದೆ.
ಡಿಜಿಸಿಎ ಬುಧವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಮೆಸರ್ಸ್ ರೆಡ್ಬರ್ಡ್ ಏವಿಯೇಷನ್ನ ಟೆಕ್ನಾಮ್ 2008JC ಮಾದರಿಯ ವಿಮಾನ ಏಕಾಂಗ ಹಾರಾಟ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮವಾಗಿ ತರಬೇತಿ ಪೈಲಟ್, ಬಾರಾಮತಿ ವಿಮಾನ ನಿಲ್ದಾಣದ ಸಮೀಪದ ಗೋಜುಬೋವಿ ಗ್ರಾಮದ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.
ಅಪಘಾತದಲ್ಲಿ ವಿಮಾನಕ್ಕೆ ಹಾನಿಯಾಗಿದ್ದರೂ, ತರಬೇತಿ ಪೈಲಟ್ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಡಿಜಿಸಿಎ ತಿಳಿಸಿದೆ.
ಪ್ರಾಥಮಿಕ ತನಿಖೆ ಪ್ರಕಾರ, ವಿಮಾನದ ಮೊದಲ ಸರ್ಕ್ಯೂಟ್ ಹಾಗೂ ಲ್ಯಾಂಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಆದರೆ ಎರಡನೇ ಸರ್ಕ್ಯೂಟ್ ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಪೈಲಟ್ ತಕ್ಷಣದ ನಿರ್ಧಾರ ತೆಗೆದುಕೊಂಡು ತೆರೆದ ಮೈದಾನದಲ್ಲಿ ತುರ್ತು ಲ್ಯಾಂಡಿಂಗ್ ನಡೆಸಿದರು. ಈ ಘಟನೆಯ ಕುರಿತು ಡಿಜಿಸಿಎ ಸವಿಸ್ತಾರ ತನಿಖೆ ಕೈಗೊಂಡಿದೆ.
ಇದೇ ವೇಳೆ, 2021ರಿಂದ ರೆಡ್ಬರ್ಡ್ ಏವಿಯೇಷನ್ ಸಂಸ್ಥೆಗೆ ಸಂಬಂಧಿಸಿದಂತೆ ಇದು ಏಳನೇ ಪ್ರಮುಖ ವಿಮಾನ ಅಪಘಾತವಾಗಿರುವುದು ಗಮನಾರ್ಹವಾಗಿದೆ. ನಿರಂತರವಾಗಿ ಸಂಭವಿಸುತ್ತಿರುವ ಘಟನೆಗಳು ಸಂಸ್ಥೆಯ ಸುರಕ್ಷತಾ ಮಾನದಂಡಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.