
ಹೈದರಾಬಾದ್, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೆ. ಕವಿತಾ ಅವರು ಶನಿವಾರ ಹೊಸ ರಾಜಕೀಯ ಪಕ್ಷ ‘ತೆಲಂಗಾಣ ರಾಷ್ಟ್ರ ಸೇನೆ’ ಸ್ಥಾಪನೆಯನ್ನು ಘೋಷಿಸಿ, ತೆಲಂಗಾಣ ರಾಜಕೀಯದಲ್ಲಿ ಗಮನಾರ್ಹ ಬೆಳವಣಿಗೆಗೆ ಕಾರಣರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ, ಈ ಹಿಂದೆ ಭಾರತ ರಾಷ್ಟ್ರ ಸಮಿತಿಯ ಪ್ರಮುಖ ನಾಯಕಿಯಾಗಿದ್ದರು. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಹಿನ್ನೆಲೆದಲ್ಲಿ 2025ರ ಜೂನ್ನಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ ಅವರು ಎಂಎಲ್ಸಿ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು.
ಬಿ ಆರ್ ಎಸ್ ನಿಂದ ಬೇರ್ಪಟ್ಟ ಏಳು ತಿಂಗಳ ಬಳಿಕ ಹೊಸ ಪಕ್ಷ ಘೋಷಿಸಿರುವ ಕವಿತಾ, ‘ತೆಲಂಗಾಣ ರಾಷ್ಟ್ರ ಸೇನೆ’ ಎಂಬ ಹೆಸರನ್ನು ಆಯ್ಕೆ ಮಾಡಿರುವುದು ರಾಜಕೀಯವಾಗಿ ಸಂಕೇತಾತ್ಮಕ ಮಹತ್ವ ಹೊಂದಿದೆ. ಇದೇ ಹೆಸರಿನಿಂದ ಅವರ ತಂದೆ ತೆಲಂಗಾಣ ರಾಜ್ಯ ಚಳವಳಿಯನ್ನು ಆರಂಭಿಸಿದ್ದರು.
ಇದೇ ವೇಳೆ ಹೊಸ ಪಕ್ಷದ ಧ್ಯೇಯಗಳ ಬಗ್ಗೆ ಮಾತನಾಡಿದ ಕವಿತಾ, ತೆಲಂಗಾಣದ ಪ್ರಾದೇಶಿಕ ಸಮಸ್ಯೆಗಳು, ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳಿಗೆ 50% ಮೀಸಲಾತಿ ಒದಗಿಸುವುದು ಪ್ರಮುಖ ಗುರಿ ಎಂದು ತಿಳಿಸಿದರು. “ರಾಜ್ಯದ ಮೂಲ ಚೈತನ್ಯವನ್ನು ಮರಳಿ ತರುವುದೇ ನಮ್ಮ ಆದ್ಯತೆ,” ಎಂದು ಹೇಳಿದರು.
ಪಕ್ಷದ ಉದ್ಘಾಟನೆಗೂ ಮೊದಲು, ಹೈದರಾಬಾದ್ನ ಗನ್ ಪಾರ್ಕ್ನಲ್ಲಿ 1969ರ ತೆಲಂಗಾಣ ಚಳವಳಿಯ ಹುತಾತ್ಮರಿಗೆ ಗೌರವ ಸಲ್ಲಿಸಿದ ಕವಿತಾ, ಬಳಿಕ ಮುನಿರಾಬಾದ್ನಲ್ಲಿ ನಡೆದ ಸಮಾರಂಭದಲ್ಲಿ “ಹೊಸ ಕ್ರಾಂತಿ” ತರಲು ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದರು. ತಾವು ಜನರ “ಅಮ್ಮ” ಆಗಲು ಬಯಸುತ್ತೇನೆ ಎಂದು ಹೇಳಿ, ತಮ್ಮನ್ನು ಜೆ. ಜಯಲಲಿತಾ ಅವರ ನಾಯಕತ್ವ ಶೈಲಿಗೆ ಹೋಲಿಸಿಕೊಂಡರು.
ತಮ್ಮ ಭಾಷಣದಲ್ಲಿ ಆತ್ಮಾವಲೋಕನ ಮಾಡಿದ ಕವಿತಾ, ಬಿಆರ್ಎಸ್ ಆಡಳಿತದ ಕೆಲವು ನಿರ್ಧಾರಗಳ ಬಗ್ಗೆ ನಾಚಿಕೆ ವ್ಯಕ್ತಪಡಿಸಿದರು. “ಆಡಳಿತ ಕುಟುಂಬದ ಭಾಗವಾಗಿದ್ದರೂ, ಕೆಲವು ವಿಷಯಗಳಲ್ಲಿ ತಪ್ಪುಗಳಾಗಿವೆ,” ಎಂದು ಒಪ್ಪಿಕೊಂಡರು. ಆದಾಗ್ಯೂ, ತೆಲಂಗಾಣ ರಾಜ್ಯ ಸಾಧನೆಗೆ ತಮ್ಮ ಕೊಡುಗೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
“ತೆಲಂಗಾಣ ಚಳವಳಿಯ ಮೂಲ ದಿಕ್ಕು ತಪ್ಪಿದೆ. ಸಾಮಾಜಿಕ ರಥವು ತುಂಡಾಗಿ ಹೋಗಿದೆ. ಅದನ್ನು ಮತ್ತೆ ಜನರ ನಿರೀಕ್ಷೆಗಳ ದಾರಿಗೆ ತರುವುದೇ ನಮ್ಮ ಉದ್ದೇಶ,” ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa