
ಕತ್ರಾ, 25 ಮಾರ್ಚ್ (ಹಿ.ಸ.):
ಆ್ಯಂಕರ್:
ಚೈತ್ರ ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ಜಮ್ಮು-ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ದೇವಾಲಯದಲ್ಲಿ ಭಕ್ತರ ಮಹಾ ಪ್ರವಾಹ ಕಂಡುಬಂದಿದೆ. ನವರಾತ್ರಿಯ ಆರಂಭಿಕ ದಿನಗಳಲ್ಲೇ 2.4 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ದೇವಿಗೆ ಪೂಜೆ ಸಲ್ಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕತ್ರಾದಿಂದ ಭವನದವರೆಗೆ ಸಾಗುವ ಯಾತ್ರಾಮಾರ್ಗ ಭಕ್ತರಿಂದ ಕಿಕ್ಕಿರಿದು ತುಂಬಿದ್ದು, “ಜೈ ಮಾತಾ ದಿ” ಎಂಬ ಘೋಷಣೆಗಳು ತ್ರಿಕೂಟ ಬೆಟ್ಟಗಳ ಪ್ರದೇಶದಲ್ಲಿ ಮೊಳಗುತ್ತಿವೆ. ಭಕ್ತರ ಭಕ್ತಿ ಮತ್ತು ನಂಬಿಕೆಯ ಪ್ರತೀಕವಾಗಿ ತೀರ್ಥಯಾತ್ರೆ ಭರದಿಂದ ಸಾಗುತ್ತಿದೆ.
ಜನಸಂದಣಿಯನ್ನು ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ತಾತ್ಕಾಲಿಕವಾಗಿ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರು. ನಂತರ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ, ಮಾರ್ಚ್ 22ರಂದು ಬೆಳಿಗ್ಗೆ 4 ಗಂಟೆಯಿಂದ ನೋಂದಣಿಯನ್ನು ಮರುಪ್ರಾರಂಭಿಸಲಾಗಿದೆ.
ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಭದ್ರತಾ ಸಿಬ್ಬಂದಿ, ವೈದ್ಯಕೀಯ ತಂಡಗಳು ಮತ್ತು ಸಹಾಯಕ ಸಿಬ್ಬಂದಿಯನ್ನು ಸಮರ್ಪಕವಾಗಿ ನಿಯೋಜಿಸಲಾಗಿದೆ. ಭಕ್ತರು ಅಧಿಕೃತ ನೋಂದಣಿಯ ನಂತರವೇ ಯಾತ್ರೆ ಕೈಗೊಳ್ಳಬೇಕು ಮತ್ತು ಆಡಳಿತದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ನವರಾತ್ರಿ ಶುಭಕಾಲವಾಗಿರುವುದರಿಂದ ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಮಾತಾ ವೈಷ್ಣೋದೇವಿಯವರ ಆಶೀರ್ವಾದ ಪಡೆಯಲು ಆಗಮಿಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa