
ಬೆಂಗಳೂರು, 16 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜ್ಯ ಸರ್ಕಾರವೇ ಅಂಬ್ಯುಲೆನ್ಸಗಳ ಕೇಂದ್ರಿಕೃತ ನಿರ್ವಹಣಾ ವ್ಯವಸ್ಥೆಯನ್ನು `112' ಅಡಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದ್ದು, 3 ತಿಂಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎನ್. ಜವರಾಯಿಗೌಡ ಅವರು ಅಂಬ್ಯುಲೆನ್ಸ್ ವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂಬ್ಯುಲೆನ್ಸ್ಗಳನ್ನು ತ್ವರಿತ ಹಾಗೂ ಪರಿಣಾಮಕಾರಿ ಸೇವೆ ಒದಗಿಸುವ ನಿಟ್ಟಿನಲ್ಲಿ `112' ಎಂಬ ಕೇಂದ್ರಿಕೃತ ನಿರ್ವಹಣಾ ವ್ಯವಸ್ಥೆಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ, ಈ ನೂತನ ವ್ಯವಸ್ಥೆ 3 ತಿಂಗಳಲ್ಲಿ ಅನುಷ್ಠಾನವಾಗುವ ಸಾಧ್ಯತೆ ಇದ್ದು ತಾಂತ್ರಿಕತೆಯ ಅಳವಡಿಕೆಯ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಅದೇ ರೀತಿ ಅಂಬ್ಯುಲೆನ್ಸ್ ಪೂರಕ ಸಿಬ್ಬಂದಿಗಳ ನೇಮಕಾತಿಯನ್ನೂ ಸಹ ಸರ್ಕಾರ ಶೀಘ್ರದಲ್ಲಿಯೇ ಕೈಗೊಳ್ಳಲಿದೆ, ಅಂಬ್ಯುಲೆನ್ಸ್ಗಳ ಕೊರತೆ ರಾಜ್ಯದಲ್ಲಿ ಇಲ್ಲ, ಆರೋಗ್ಯ ಕವಚ ವ್ಯಾಪ್ತಿಯಲ್ಲಿ 715 ಹಾಗೂ ರಾಜ್ಯದ 1 ಸಾವಿರ ಒಟ್ಟಾರೆಯಾಗಿ 1715 ಅಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ 262 ಅಂಬ್ಯುಲೆನ್ಸ್ ಖರೀದಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಪಾಟೀಲ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa