
ನವದೆಹಲಿ, 12 ಮಾರ್ಚ್ (ಹಿ.ಸ.):
ಆ್ಯಂಕರ್:ದೇಶದಲ್ಲಿ ಇಂಧನದ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆಯೂ ಭಾರತದಲ್ಲಿ ಸಾಕಷ್ಟು ಕಚ್ಚಾ ತೈಲ ಮತ್ತು ಅನಿಲ ಸಂಗ್ರಹವಿದೆ ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ಎಲ್ಪಿಜಿ ಬಿಕ್ಕಟ್ಟು ಕುರಿತ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಅವರು, ದೇಶವು ಪ್ರಸ್ತುತ ಸುಮಾರು 40 ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಇಂಧನ ಪೂರೈಕೆ ಹಲವು ಮಾರ್ಗಗಳ ಮೂಲಕ ನಿರಂತರವಾಗಿ ನಡೆಯುತ್ತಿದ್ದು, ಯಾವುದಾದರೂ ಒಂದು ಪ್ರದೇಶದ ಮೇಲೆ ಮಾತ್ರ ಭಾರತ ಅವಲಂಬಿತವಾಗಿಲ್ಲ ಎಂದು ತಿಳಿಸಿದರು.
ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿ ಪ್ರದೇಶದ ಪರಿಸ್ಥಿತಿ ಕುರಿತು ಆತಂಕ ವ್ಯಕ್ತವಾಗುತ್ತಿದ್ದರೂ, ದೇಶದ ಇಂಧನ ಪೂರೈಕೆ ಸುರಕ್ಷಿತವಾಗಿದೆ ಎಂದು ಪುರಿ ಹೇಳಿದರು. ಹಾರ್ಮುಜ್ ಜಲಸಂಧಿಯಿಂದ ದೊರೆಯುವ ಪೂರೈಕೆಗೆ ಮೀರಿದ ಮಟ್ಟದಲ್ಲಿ ಭಾರತದಲ್ಲಿ ತೈಲ ಲಭ್ಯತೆ ಇದೆ ಎಂದು ಅವರು ವಿವರಿಸಿದರು.
ದೇಶೀಯವಾಗಿ ಎಲ್ಪಿಜಿ ಪೂರೈಕೆ ಸಹ ಸ್ಥಿರವಾಗಿದ್ದು, ಗೃಹಬಳಕೆದಾರರಿಗೆ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಅವರು ಹೇಳಿದರು. ಜೊತೆಗೆ ಸಂಕುಚಿತ ನೈಸರ್ಗಿಕ ಅನಿಲ ಮತ್ತು ಪೈಪ್ಡ್ ನೈಸರ್ಗಿಕ ಅನಿಲ ಪೂರೈಕೆಯೂ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
ವದಂತಿಗಳು ಮತ್ತು ತಪ್ಪು ಮಾಹಿತಿಯನ್ನು ಹರಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಪುರಿ, ದೇಶಾದ್ಯಂತ ಮನೆಗಳಿಗೆ ಕೈಗೆಟುಕುವ ಹಾಗೂ ನಿರಂತರ ಇಂಧನ ಪೂರೈಕೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa