

ಕೊಪ್ಪಳ, 11 ಮಾರ್ಚ್ (ಹಿ.ಸ.)
ಆ್ಯಂಕರ್ : ನಮ್ಮದು ಭರತಖಂಡ, ಇಲ್ಲಿ ನೂರಾರು ಧರ್ಮ, ಸಾವಿರಾರು ಜಾತಿಗಳ ಜನರು ಅತ್ಯಂತ ನೆಮ್ಮದಿಯಿಂದ ವಾಸವಾಗಿದ್ದಾರೆ, ಇಲ್ಲಿ ಸದಾ ಕಾಲ ನೆಮ್ಮದಿ ನೆಲೆಸಿರಬಹುದಾದ ಪರಿಸರವಿದೆ, ಮುಸ್ಲಿಂ ಧರ್ಮ ಪಾಲಿಸುವ ಸಹೋದರ ಸಹೋದರಿಯರು ರಮ್ಜಾನ್ ಮಾಸಾಚರಣೆ ವೇಳೆ ಮಾಡುವ ಉಪವಾಸ ಒಂದು ವೃತ, ಅಲ್ಲಿ ಧರ್ಮ ಮತ್ತು ವಿಜ್ಞಾನ ಸೇರಿಕೊಂಡು ಈ ಮಾಸವಾಗಿದೆ ಎನ್ನಬಹುದು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಅವರು ಹೇಳಿದ್ದಾರೆ.
ಅವರು ನಗರದ ಕಲಂ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕ ಮೂಲಕ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಇಫ್ತಾರ್ ಕೂಟದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆ ಹೋಗಬೇಕಾದ ಸಂದರ್ಭದಲ್ಲಿ ಹೆಚ್ಚಾಗುತ್ತಿರುವದು ದುರಂತ, ಮಹಿಳಾ ದಿನಾಚರಣೆ ಮಾಡುವ ಈ ಮಾಸದಲ್ಲಿಯೇ ಹಿಂದೂಗಳ ಹೊಸ ವರ್ಷ ಯುಗಾದಿ ಬರುತ್ತಿದೆ, ಮಹಿಳೆಯರ ದಿನಾಚರಣೆ ಇದೆ ಹಾಗೂ ರಮ್ಜಾನ್ ಸಹ ಇದೆ, ಭಾರತೀಯರೆಲ್ಲರೂ ಒಂದೇ, ಇಲ್ಲಿ ಭಾರತೀಯ ಮುಸ್ಲಿಂ, ಭಾರತೀಯ ಹಿಂದೂ, ಭರತೀಯ ಕ್ರಿಸ್ತರಾಗಿದ್ದೇವೆ, ಸಹಬಾಳ್ವೆ, ಸಹಜೀವನ ಬಹಳ ಮುಖ್ಯ, ಹೇಗಿದ್ದರೂ ಸರಿ ನಾವು ಮನುಷ್ಯರಾಗಿ, ಪರೋಪಕಾರಿಗಳಾಗಿ ಬಾಳಬೇಕು, ಖುರಾನ್, ಭಗವತ್ಗೀತೆ, ಬೈಬಲ್ ಎಲ್ಲವೂ ಪ್ರೀತಿಸುವದನ್ನು, ದಾನ ಮಾಡುವದನ್ನು ಕಲಿಸುತ್ತವೆ ಎಂದರು.
ಅಥಿತಿಗಳಾಗಿ ಮುಖಂಡರುಗಳಾದ ಸರೋಜಾ ಬಾಕಳೆ. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಮಧು ಶೆಟ್ಟರ್, ಡಾ. ರಾಧಾ ಕುಲಕರ್ಣಿ, ಹೇಮಾ ಬಳ್ಳಾರಿ, ಮೊಹಮ್ಮದಿ ಅಸ್ರಾ, ರಿಝ್ವಾನಾ ಬೇಗ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬುಶ್ರಾ ದಡದ ಶಾಹೀನ್ ಖುರಾನ್ ಪಠಣ ಮಾಡಿದರು, ಪ್ರಾಸ್ತಾವಿಕವಾಗಿ ಉಮ್ಮೆ ಸಲ್ಮಾ ಮಾತನಾಡಿದರು, ಸಲ್ಮಾ ಜಹಾನ್ ನಿರೂಪಿಸಿ, ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್