

ಕೊಪ್ಪಳ , 11 ಮಾರ್ಚ್ (ಹಿ.ಸ.)
ಆ್ಯಂಕರ್ : ನಗರಸಭೆ ಮುಂದುಗಡೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಹಮ್ಮಿಕೊಂಡಿರುವ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ 132ನೇ ದಿನದ ಧರಣಿ ಯಶಸ್ವಿಯಾಗಿ ನಡೆಯಿತು.
ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ, ಕಾರ್ಖಾನೆ ಬಾಧಿತ ಹಳ್ಳಿ ಕಡೆ ಹೋಗಲು ಕರೆ ನೀಡಿದರು. ಬೈಕ್, ಕಾರುಗಳಲ್ಲಿ ಸಂಘಟಕರು, ಹೋರಾಟದ ಬೆಂಬಲಿಗರು, ಹಿತೈಷಿಗಳು, ಯುವಕರು ಬಾಧಿತ ಹಳ್ಳಿಗಳಿಗೆ ಹೋಗಿ ಜಾಗೃತಿ ಮೂಡಿಸೋಣ ಎಂದರು. ಸಂಘಟಿತ ಬಲದಿಂದ ನಮ್ಮ ಸಮಸ್ಯೆಯನ್ನು ಸರ್ಕಾರಕ್ಕೆ ತಲುಪಿಸೋಣ. ಬಾಧಿತರು ಜೀವ, ಆರೋಗ್ಯ ಉಳಿಸಿಕೊಳ್ಳಲು ಹೋರಾಡುತ್ತಿರುವಾಗ ಅವರಿಗೆ ನೈತಿಕ ಬಲ ತುಂಬಲು ಪ್ರತಿಯೊಬ್ಬ ಕಾಳಜಿ ಉಳ್ಳವರು ಮುಂದೆ ಬರಬೇಕು ಎಂದರು.
ಸಂಚಾಲಕರಾದ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಈ ಹಿಂದೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಮಾತು ಕೊಟ್ಟಂತೆ ಶುಕ್ರವಾರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು, ಶಾಸಕರಾದ ಪಿ. ಎಂ. ನರೇಂದ್ರಸ್ವಾಮಿ ಅವರು ಕಾರ್ಖಾನೆ ಬಾಧಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ, ಈ ಬದಲಾವಣೆ ಅನಿರ್ಧಿಷ್ಟಾವಧಿ ಹೋರಾಟದ ಶಕ್ತಿ, ಕೆಲವೇ ದಿನಗಳಲ್ಲಿ ನಿಶ್ಚಿತವಾಗಿ ಹೋರಾಟ ಗೆಲ್ಲುತ್ತದೆ, ಆದರೆ ಜನ ಮೈಚಳಿ ಬಿಟ್ಟು ಹೋರಾಟಕ್ಕೆ ಬರಬೇಕು, ಜಿಲ್ಲೆಯ ಇತಿಹಾಸದಲ್ಲಿಯೇ ಇಷ್ಟೊಂದು ಸುಧೀರ್ಘ ಹೋರಾಟ ನಡೆಯುತ್ತಿದೆ, ಈಗಲೂ ಕಾದು ನೋಡುವ ತಂತ್ರ ಸರಿಯಲ್ಲ, ಜನ ಚಳುವಳಿ ಮುಂದೆ ಎಂತಹ ಹಣ ಬಂದರೂ ನಿಲ್ಲುವದಿಲ್ಲ ಎಂದರು.
ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ಶುಕ್ರವಾರ ಮಾಲಿನ್ಯ ನಿಯಂತ್ರಣ ಮಂಡಳಿಯ ಚೇರ್ಮನ್ ನರೇಂದ್ರಸ್ವಾಮಿ ಬಾಧಿತ ಹಳ್ಳಿಗೆ ಬರುವುದನ್ನು ವೇದಿಕೆ ಸ್ವಾಗತಿಸುತ್ತದೆ. ಅವರು ಬಂದು ಬಾಧಿತ ಹಳ್ಳಿಗಳ ಜನರ ಆರೋಗ್ಯ ಹಾನಿ, ಪರಿಸರ ಹಾನಿ, ಜಲಾಶಯ ಮಾಲಿನ್ಯವಾಗಿದ್ದರ ಕುರಿತು ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ಇಲ್ಲಿನ ಜನರಿಗೆ ಬದುಕುವ ವಾತಾವರಣ ಕಲ್ಪಿಸಬೇಕು. ಈ ಭೇಟಿ ಯಾವುದೇ ಕಾರಣಕ್ಕೂ ಶಿಷ್ಟಾಚಾರದ ಭೇಟಿಯಾಗಬಾರದು ಎಂದರು.
ಧರಣಿಯಲಿ ಶರಣು ಶೆಟ್ಟರ್ , ಸುಭಾನ್ ಸಾಬ್ ನೀರಲಗಿ, ಡಾ.ಬಸವರಾಜ ಪೂಜಾರ, ಜಿ. ಬಿ. ಪಾಟೀಲ್, ಪ್ರಕಾಶಕ ಡಿ.ಎಂ. ಬಡಿಗೇರ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಬಿ.ಜಿ. ಕರಿಗಾರ, ಗಂಗಾಧರ ಖಾನಾಪೂರ, ರಾಜಶೇಖರ ಏಳುಬಾವಿ, ಲಕ್ಷ್ಮಣ ಕಲ್ಮಂಗಿ, ಶಂಭುಲಿಂಗಪ್ಪ ಹರಗೇರಿ, ಮಹಾಂತೇಶ ಕೊತಬಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ಬಸವರಾಜಪ್ಪ ಶೆಟ್ಟರ್, ಮಹಾದೇವಪ್ಪ ಮಾವಿನಮಾಡು, ನಾಗರಾಜ ಕುಷ್ಟಗಿ, ವಿಜಯಮಹಾಂತೇಶ ಹಟ್ಟಿ, ರೇವಣಸಿದ್ದಯ್ಯ ಚಿತ್ರಗಾರ, ಸಿ. ಕೊಟ್ರೇಶಪ್ಪ, ಮಲ್ಲಪ್ಪ ದಟ್ಟಿ, ಉಮೇಶ ಹೂಗಾರ್, ಗವಿಸಿದ್ದಪ್ಪ ಹಲಿಗಿ, ಗವಿಸಿದ್ದಪ್ಪ ಚಿಕೇನಕೊಪ್ಪ, ರಾಮಲಿಂಗಯ್ಯ ಶಾಸ್ತ್ರಿ ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್