
ಕೋಲಾರ, ೧೦ ಮಾರ್ಚ್ (ಹಿ.ಸ)
ಆಂಕರ್ : ಜಿಲ್ಲೆಯಾದ್ಯಂತ ಮಾ.೧೮ ರಿಂದ ಆರಂಭಗೊಳ್ಳುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು, ಮಾರ್ಗಾಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ಪರೀಕ್ಷಾ ಪಾವಿತ್ರö್ಯತೆಗೆ ಧಕ್ಕೆಯಾಗದಂತೆ ಮತ್ತು ಗೊಂದಲಗಳಿಗೆ ಅವಕಾಶ ನೀಡದೇ ಸುಗಮ ಪರೀಕ್ಷೆ ನಡೆಸಿಕೊಡಿ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಕರೆ ನೀಡಿದರು.
ಮಂಗಳವಾರ ನಗರದ ಸ್ಕೌಟ್ಸ್ ಭವನದಲ್ಲಿ ನಡೆದ ಜಿಲ್ಲೆಯ ಎಲ್ಲಾ ೬೫ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಪ್ರಶ್ನೆಪತ್ರಿಕೆ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಿಸಿ ಕ್ಯಾಮರಾ ಸುಸ್ಥಿತಿಯಲ್ಲಿರಲಿ, ವೆಬ್ ಕಾಸ್ಟಿಂಗ್ ಇರುವುದರಿಂದ ಗಮನಹರಿಸಿ ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯದಲ್ಲಿ ಯಾವುದೇ ಅಚಾತುರ್ಯಗಳು ನಡೆಯದಂತೆ ಎಚ್ಚರವಹಿಸಿಬೇಕಾದ ಹೊಣೆ ಮುಖ್ಯ ಅಧೀಕ್ಷಕರದ್ದಾಗಿದೆ, ಜಿಲ್ಲೆಯ ಬಗ್ಗೆ ರಾಜ್ಯದ ಮಟ್ಟದಲ್ಲಿ ಒಳ್ಳೆಯ ಹೆಸರಿದೆ, ಜಿಲ್ಲೆಯ ಘನತೆಗೆ ಕುತ್ತು ತಾರದಿರಿ ಎಂದು ಕೋರಿ, ಪರೀಕ್ಷಾ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಿ, ಕೇಂದ್ರಕ್ಕೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶ ನೀಡದಿರಿ, ಮುಖ್ಯ ಅಧೀಕ್ಷರು ಹೊರತುಪಡಿಸಿ ಉಳಿದ ಸಿಬ್ಬಂದಿ ಮೊಬೈಲ್ ತರಬಾರದು, ನೀವು ಕೇಂದ್ರಕ್ಕೆ ನಿಗಧಿತ ಸಮಯಕ್ಕೆ ಹಾಜರಿದ್ದು, ಮಾರ್ಗಾಧಿಕಾರಿಗಳಿಂದ ಪ್ರಶ್ನೆಪತ್ರಿಕೆ ಸ್ವೀಕರಿಸಿ ಎಂದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಮಕ್ಕಳಿಗೆ ತೊಂದರೆಯಾಗದ0ತೆ ಕ್ರಮವಹಿಸಿ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಗಾಳಿ ಬೆಳಕು ಸಮರ್ಪಕವಾಗಿರುವ ಕುರಿತು ಕೇಂದ್ರಗಳಿಗೆ ಮೊದಲೇ ಭೇಟಿ ನೀಡಿ ಗಮನಿಸಿಕೊಳ್ಳಿ, ಏನಾದರೂ ಸಮಸ್ಯೆ ಇದ್ದರೆ ಮುಖ್ಯ ಅಧೀಕ್ಷಕರಿಗಾಗಿ ಮಾಡಿರುವ ವಾಟ್ಸಫ್ ಗ್ರೂಪ್ನಲ್ಲಿ ಮಾಹಿತಿ ಹಾಕಿ ಕೂಡಲೇ ಸ್ಪಂದಿಸುವುದಾಗಿ ತಿಳಿಸಿದರು.
ಪ್ರತಿ ಕೊಠಡಿಯಲ್ಲೂ ಉತ್ತಮ ಬೆಳಕು, ವಿದ್ಯುತ್ ಬಲ್ಪ್ಗಳ ಅಳವಡಿಕೆಯಾಗಿದೆಯೇ ಗಮನಿಸಿ,, ಯಾವೊಬ್ಬ ವಿದ್ಯಾರ್ಥಿಯೂ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತಿಲ್ಲ, ಅಗತ್ಯ ಪ್ರಮಾಣದಲ್ಲಿ ಡೆಸ್ಕ್ ಇರಲೇಬೇಕು ಮತ್ತು ಸುಸ್ಥಿತಿಯಲ್ಲಿರಬೇಕು ಈ ಕುರಿತು ಇಂದೇ ಕೇಂದ್ರಗಳಿಗೆ ಭೇಟಿ ನೀಡಿ ಗಮನಹರಿಸಿ, ಮಕ್ಕಳು ಪರೀಕ್ಷೆ ಬರೆಯಲು ಅಡ್ಡಿಪಡಿಸುವ ಯಾವುದೇ ಕೆಲಸ ಬೇಡ ಎಂದರು.
ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಶಂಕರೇಗೌಡ ಮಾತನಾಡಿ, ಪರೀಕ್ಷಾ ವಿಧಾನ, ದಾಖಲೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿ, ಪರೀಕ್ಷಾ ಕೇಂದ್ರದಲ್ಲಿ ಕೊಠಡಿವಾರು ೨೪ ವಿದ್ಯಾರ್ಥಿಗಳ ಹಂಚಿಕೆ ವಹಿ,ಸಿಬ್ಬಂದಿ ವಹಿ,ಕೇಂದ್ರ ನಾಮಯಾದಿ ಪಟ್ಟಿ, ಹಾಜರಾತಿ ಪುಸ್ತಕ, ಅಧೀಕ್ಷಕರ,ಕೊಠಡಿ ಮೇಲ್ವಿಚಾರಕರ ಸಭಾ ನಡವಳಿ, ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆ ವಿತರಣಾ ವಹಿ,ಗೈರುಹಾಜರಿ ತಃಖ್ತೆ,ಪ್ರಶ್ನೆಪತ್ರಿಕೆ ಬಂಡಲ್,ಉತ್ತರ ಪತ್ರಿಕೆ ಬಂಡಲ್ಗಳ ಸ್ವೀಕೃತಿ ಹಾಗೂ ರವಾನೆ ವಹಿ, ಸಂದರ್ಶಕರ ವಹಿ, ಪರೀಕ್ಷಾ ಅವ್ಯವಹಾರಗಳ ವಹಿ ಹೀಗೆ ಹಲವಾರು ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಸಲಹೆ ನೀಡಿದರು.
ಈ ಬಾರಿ ಮುಖ್ಯವಾದ ಕನ್ನಡ, ಇಂಗ್ಲೀಷ್,ಗಣಿತ,ವಿಜ್ಞಾನ ಸಮಾಜ ಈ ವಿಷಯಗಳ ಉತ್ತರ ಪತ್ರಿಕೆಗಳಲ್ಲಿ ಶಾಲಾ ಸಂಕೇತ ಮತ್ತು ಕೇಂದ್ರದ ವಿಳಾಸ ಬರೆಯುವಂತಿಲ್ಲ, ಮುಖ್ಯ ಅಧೀಕ್ಷಕರ ಲಾಗಿನ್ಗೆ ಬರುವ ಕೋಡ್ಸಂಖ್ಯೆ ಬರುತ್ತದೆ, ಈ ಸಂಖ್ಯೆಯನ್ನು ಉತ್ತರ ಪತ್ರಿಕೆಗಳ ಬಂಡಲ್ಗೆ ಹಾಕಿ ಉಪನಿರ್ದೇಶಕರಿಗೆ ಕಳುಹಿಸಬೇಕು ಎಂದರು.
ಶಿಕ್ಷಣಾಧಿಕಾರಿ ಡಾ.ವೀಣಾ ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸಿಸಿ ಕ್ಯಾಮರಾ ಕಡ್ಡಾಯವಾಗಿದೆ, ಕೇಂದ್ರದ ಪ್ರವೇಶದ್ವಾರ, ಕಾರಿಡಾರ್ ಹಾಗೂ ಪ್ರಶ್ನೆಪತ್ರಿಕೆ ಬಂಡಲ್ ತೆಗೆಯುವ ಮತ್ತು ಉತ್ತರ ಪತ್ರಿಕೆ ಬಂಡಲ್ ಮಾಡುವ ಮುಖ್ಯ ಅಧೀಕ್ಷಕರ ಕಚೇರಿ,ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಇರುವ ಹಾಗೂ ಸುಸ್ಥಿತಿಯಲ್ಲಿರುವ ಕುರಿತು ದೃಢಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಿಸಿ ಕ್ಯಾಮರಾದಲ್ಲಿನ ಮಾಹಿತಿಯನ್ನು ಇಲಾಖೆ ಅಧಿಕಾರಿಗಳಿಗೆ ಹೊರತುಪಡಿಸಿ ಬರ್ಯಾರಿಗೂ ನೀಡಬಾರದು ಪರೀಕ್ಷೆಗೆ ಪೂರ್ವತಯಾರಿ ಮಾಡಿಕೊಳ್ಳಿ, ಯಾವುದೇ ಸಮಸ್ಯೆಗಳಾಗದಂತೆ ಎಚ್ಚರವಹಿಸಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಮಾತನಾಡಿ, ಕೊಠಡಿ ಮೇಲ್ವಿಚಾರಕರ ನೇಮಕಕ್ಕೆ ಬಿಇಒ ಅನುಮೋದನೆ ಕಡ್ಡಾಯ ಎಂದು ತಿಳಿಸಿ, ಪ್ರಶ್ನೆಪತ್ರಿಕೆ ಹಂಚಿಕೆ ಹೊಣೆಯರಿತು ಮಾಡಿ, ಪುನರಾವರ್ತಿತ, ಖಾಸಗಿ,ಹೊಸ ಅಭ್ಯರ್ಥಿಗಳೇ, ಯಾವ ಮಾಧ್ಯಮ ಎಂಬುದನ್ನು ಪರಿಶೀಲಿಸಿದ ನಂತರ ವಿತರಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಕೋಲಾರದ ಮಧುಮಾಲತಿ ಪಡುವಣೆ, ಕೆಜಿಎಫ್ನ ಮಂಜುನಾಥ್, ಮುಳಬಾಗಿಲಿನ ರಾಮಚಂದ್ರ,ವಿಷಯ ಪರಿವೀಕ್ಷಕ ಸಮೀವುಲ್ಲಾ, ತಾಲ್ಲೂಕು ಪರೀಕ್ಷಾ ನೋಡಲ್ ಅಧಿಕಾರಿಗಳಾದ ರಾಧಾ, ಲಕ್ಷಿö್ಮಕಾಂತ್, ಸೋಮಶೇಖರ್, ಮಮತಾ,ವೆಂಕಟಸ್ವಾಮಿ, ಲಕ್ಷ್ಮಿ ನಾರಾಯಣ, ಮುಖ್ಯಅಧೀಕ್ಷಕರಾದ ಗಾಯತ್ರಿ, ಶಶಿವಧನ, ತಾಹೇರಾನುಸ್ರತ್, ವೇಣುಗೋಪಾಲ್, ರಮೇಶ್ಗೌಡ ಸೇರಿದಂತೆ ಜಿಲ್ಲೆಯ ಎಲ್ಲಾ ೬೫ ಕೇಂದ್ರಗಳ ಮುಖ್ಯಅಧೀಕ್ಷಕರ, ಪ್ರಶ್ನೆಪತ್ರಿಕೆ ಪಾಲಕರು,ಮಾರ್ಗಾಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್