

ಕೊಪ್ಪಳ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮಾ. 2, 3, 4 ರಂದು ಜಿಲ್ಲೆಯಾದ್ಯಂತ ಆಚರಿಸುವ ಹೋಳಿ ಹಬ್ಬದಲ್ಲಿ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸಿ ಹೋಳಿ ಹಬ್ಬವನ್ನು ಆಚರಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಹೇಳಿದ್ದಾರೆ.
ಶುಕ್ರವಾರದಂದು ಜಿಲ್ಲೆಯಲ್ಲಿ ಮಾರ್ಚ್ 2, 3, 4 ರಂದು ಆಚರಿಸುವ ಹೋಳಿ ಹಬ್ಬದ ಕುರಿತಾಗಿ ವಿವಿಧ ಧರ್ಮಗಳ ಮುಖಂಡರು, ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಬ್ಬಗಳು ಸಂಭ್ರಮವನ್ನು ಹೆಚ್ಚಿಸುವ ಹಾಗೂ ಹಂಚುವ ಉದ್ದೇಶವನ್ನು ಹೊಂದಿದ್ದು, ನಮ್ಮ ಆಚರಣೆಯಿಂದ ಇನ್ನೊಬ್ಬರಿಗೆ ತೊಂದರೆ, ನೋವುಂಟಾಗಬಾರದು. ಜಿಲ್ಲೆಯಲ್ಲಿ ವಿವಿಧ ತಾಲ್ಲೂಕುಗಳಲ್ಲಿ ಮಾರ್ಚ್ 2, 3 ಹಾಗೂ 4 ರಂದು ಹೋಳಿ ಆಚರಣೆ ಮಾಡಲಾಗುತ್ತದೆ. ಈ ಸಂದರ್ಭ ಮಹಿಳೆಯರು ಹಾಗೂ ಮಕ್ಕಳ ಮೇಲೆ ಒತ್ತಾಯಪೂರ್ವಕ ಬಣ್ಣ ಎರಚಬಾರದು. ಹಾನಿಕಾರಕ ರಾಸಾಯನಿಕವುಳ್ಳ ಬಣ್ಣಗಳ ಬಳಕೆ ಮಾಡಬಾರದು.
ಫೆ.28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಅಂತರದಲ್ಲಿ ಯಾವುದೇ ಗಲಾಟೆ, ಹೋಳಿ ಆಚರಣೆ ಮಾಡಬಾರದು. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಾರದು. ಬೇರೆ ಊರುಗಳಿಂದ ಬರುವ ಬಸ್ಗಳನ್ನು ತಡೆದು ಒತ್ತಾಯಪೂರ್ವಕ ಬಣ್ಣ ಎರಚಬಾರದು. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಭಾವನೆ ಬಿತ್ತುವ ಯಾವುದೇ ಪೋಸ್ಟ್ ಮಾಡಬಾರದು.
ಜಿಲ್ಲೆಯಾದ್ಯಂತ ಆಯಾ ಪ್ರದೇಶಕ್ಕನುಗುಣವಾಗಿ ಮಾ.2, 3 ಮತ್ತು 4 ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದಾಗ್ಯೂ ಅಬಕಾರಿ ಇಲಾಖೆಯವರು ನಿರಂತರ ನಿಗಾ ವಹಿಸಿ ಅಕ್ರಮ ಮದ್ಯ ಮಾರಾಟ ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಂತಿಯುತ ಹಬ್ಬ ಆಚರಣೆಗೆ ಎಲ್ಲ ಸಾರ್ವಜನಿಕರು, ಧರ್ಮದವರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹೋಳಿ ನಂತರ ಸ್ನಾನಕ್ಕೆಂದು ಟಿ.ಬಿ.ಡ್ಯಾಂ ಹಾಗೂ ಸಾಣಾಪುರ ಕೆರೆಗೆ ಜನ ಹೋಗುವುದರಿಂದ ಈ ಸ್ಥಳಗಳಲ್ಲಿ ಅಗ್ನಿಶಾಮಕದಳ, ಎಸ್ಡಿಆರ್ಎಫ್ ತಂಡ ಹಾಗೂ ನುರಿತ ಈಜುಗಾರರನ್ನು ನಿಯೋಜಿಸಬೇಕು. ಯುವಕರು ಆವೇಷದಲ್ಲಿ ಅನಗತ್ಯ ಗಲಾಟೆ ಮಾಡಿಕೊಳ್ಳುವ ಸಂಭವವಿರುತ್ತದೆ. ಆದ್ದರಿಂದ ಹಿರಿಯರು ಈ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ, ಶಾಂತಿಯುತವಾಗಿ ಹಬ್ಬ ಆಚರಿಸಲು ಸೂಚಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಮಾತನಾಡಿ, ಹೋಳಿ ಹಬ್ಬದ ನೆಪದಲ್ಲಿ ಸಾರ್ವಜನಿಕರಿಗೆ, ಮಹಿಳೆಯರಿಗೆ ತೊಂದರೆ ಉಂಟಾಗಬಾರದು, ಮಸೀದಿಗಳಿಗೆ ಬಣ್ಣ ಎರಚಬಾರದು. ಹೋಳಿ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಟಿ.ಬಿ.ಡ್ಯಾಂ, ಸಾಣಾಪುರ ಕೆರೆಯ ಸುತ್ತ ಹಿಚ್ಚಿನ ನಿಗಾ ಇಡಲಾಗಿದೆ. ಯುವಕರ ಮಧ್ಯೆ ಗಲಾಟೆಗಳಾದಾಗ ಅಥವಾ ಏನೇ ತೊಂದರೆ ಉಂಟಾದಾಗ ಸಾರ್ವಜನಿಕರು 112, ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಕುಡಿದು ವಾಹನ ಚಾಲನೆ ಮಾಡದಂತೆ ಎಚ್ಚರಿಕೆ ವಹಿಸಿ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಅಬಕಾರಿ ಡಿವೈಎಸ್ಪಿ ಆಂಜನೇಯ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್