
ಹುಬ್ಬಳ್ಳಿ, 30 ಜನವರಿ (ಹಿ.ಸ.) :
ಆ್ಯಂಕರ್ : ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿಗಳಲ್ಲಿ ಉತ್ತಪ್ಪಕ್ಕೂ ವಿಶೇಷ ಸ್ಥಾನವಿದೆ. ಕರಾವಳಿ ಭಾಗಗಳಲ್ಲಿ ಮುಂಜಾನೆ ಉಪಹಾರಕ್ಕೆ ಹೆಚ್ಚಾಗಿ ತಯಾರಿಸಲಾಗುವ ಉತ್ತಪ್ಪ ದೋಸೆ ಅಥವಾ ಇಡ್ಲಿ ಹಿಟ್ಟಿನಿಂದ ಮಾಡಲಾಗುತ್ತದೆ.
ಆರೋಗ್ಯಕರವಾಗಿರುವ ಈ ತಿಂಡಿ ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಉಪಹಾರವಾಗಿದೆ.
ಬೇಕಾಗುವ ಸಾಮಗ್ರಿಗಳು:
ದೋಸೆ ಅಕ್ಕಿ – 2 ಕಪ್, ಉದ್ದಿನ ಬೇಳೆ – ಅರ್ಧ ಕಪ್, ಮೆಂತ್ಯ – 1 ಚಮಚ, ಅವಲಕ್ಕಿ – 2 ಮುಷ್ಟಿ, ಉಪ್ಪು – 2 ಚಮಚ, ಸಣ್ಣದಾಗಿ ಹೆಚ್ಚಿದ ಈರುಳ್ಳಿ – 2, ಹಸಿಮೆಣಸಿನಕಾಯಿ – 2 ರಿಂದ 3, ಕರಿಬೇವಿನ ಎಲೆ – ಸ್ವಲ್ಪ.
ಮಾಡುವ ವಿಧಾನ:
ಮೊದಲು ದೋಸೆ ಅಕ್ಕಿ, ಉದ್ದಿನ ಬೇಳೆ ಹಾಗೂ ಮೆಂತ್ಯವನ್ನು 3–4 ಗಂಟೆಗಳ ಕಾಲ ನೆನೆಸಿಡಬೇಕು. ರುಬ್ಬುವ ಮೊದಲು ಅವಲಕ್ಕಿ ನೆನೆಸಿ, ಎಲ್ಲಾ ಪದಾರ್ಥಗಳನ್ನು ನುಣ್ಣಗೆ ರುಬ್ಬಿ ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಡಬೇಕು. ಮರುದಿನ ಹಿಟ್ಟಿಗೆ ಉಪ್ಪು ಸೇರಿಸಿ ಮಿಶ್ರಣ ಮಾಡಬೇಕು. ಬಿಸಿಯಾದ ತವಾವಿನ ಮೇಲೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ಸುರಿದು ದಪ್ಪವಾಗಿ ಬೇಯಿಸಬೇಕು. ಮೇಲಿಂದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಂಡರೆ ಸವಿಯಾದ ಈರುಳ್ಳಿ ಉತ್ತಪ್ಪ ಸಿದ್ಧವಾಗುತ್ತದೆ.
ಸೇವಿಸುವ ವಿಧಾನ:
ಈರುಳ್ಳಿ ಉತ್ತಪ್ಪಕ್ಕೆ ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಉತ್ತಮ ಹೊಂದಾಣಿಕೆಯಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa