
ದಾವೋಸ್, 19 ಜನವರಿ (ಹಿ.ಸ.) :
ಆ್ಯಂಕರ್ : ಹೊಸ ವರ್ಷದ ಹೊಸತರಲ್ಲಿ ದಾವೋಸ್ನಲ್ಲಿ ಐದು ದಿನಗಳ ಕಾಲ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ ಮಹತ್ವದ ಸಭೆಯಲ್ಲಿ ಭಾರತ ಸರ್ಕಾರದ ಪ್ರಮುಖ ಪ್ರತಿನಿಧಿಯಾಗಿ ಕೇಂದ್ರದ ಹಿರಿಯ ಸಚಿವ ಪ್ರಲ್ಹಾದ ಜೋಶಿ ಪ್ರತಿನಿಧಿಸುತ್ತಿದ್ದಾರೆ.
ವಿಶ್ವ ಮಟ್ಟದಲ್ಲಿ ಮಹತ್ವ ಪಡೆದಂತಹ ಈ WEF ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರವಾಗಿ ಕೇಂದ್ರದ ವಿಶೇಷ ಪ್ರತಿನಿಧಿಯಾಗಿ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರನ್ನು ಕಳುಹಿಸಿದ್ದಾರೆ.
ರಾಜ್ಯದ ಮೊದಲ ಸಚಿವ:
ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದಿರುವ ವಿಶ್ವ ಆರ್ಥಿಕ ವೇದಿಕೆ ಸಭೆಗೆ ಭಾರತ ಸರ್ಕಾರದಿಂದ ಪ್ರತಿನಿಧಿಸುತ್ತಿರುವ ಕರ್ನಾಟಕದ ಮೊದಲ ಕೇಂದ್ರ ಸಚಿವರಾಗಿದ್ದಾರೆ ಪ್ರಲ್ಹಾದ ಜೋಶಿ. ಈವರೆಗೆ ರಾಜ್ಯದಿಂದ ಅನೇಕ ಮುಖ್ಯಮಂತ್ರಿಗಳು ಮಾತ್ರ WEF ಪ್ರತಿನಿಧಿಸುತ್ತಿದ್ದರು. ಆದರೆ, ಈ ಬಾರಿ ಕರ್ನಾಟಕದ ಸಂಸದರಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗಿಯಾಗುತ್ತಿರುವುದು ಇದೇ ಮೊದಲು ಎನ್ನುವುದೇ ಒಂದು ವಿಶೇಷ.
ಸಚಿವ ಪ್ರಲ್ಹಾದ ಜೋಶಿ ಅವರು ಮೊದಲು ಕೆನಡಾದ ಚಾರ್ಲ್ಸ್ ಎಮಂಡ್ ಮತ್ತು ಲಾ ಕೈಸ್ಸೆ ಅವರೊಂದಿಗೆ ಖಾಸಗಿ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಬಳಿಕ ಸ್ಪೇನ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೇ, ಒಮನ್ ನ ಸೈದ್ ಮೊಹಮ್ಮದ್ ಅಹ್ಮದ್ ಅಲ್-ಸಕ್ರಿ ಅವರೊಂದಿಗೆ ಚರ್ಚೆ ನಡೆಸಿದ್ದು, ಭಾರತದ ನವೀಕರಿಸಬಹುದಾದ ಇಂಧನ ವಲಯ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ ಹೂಡಿಕೆಗೆ ಆಕರ್ಷಿಸುವ ವಿಶೇಷ ಪ್ರಯತ್ನ ನಡೆಸಿದ್ದಾರೆ.
ಕಳೆದ ಬಾರಿ ನಡೆದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧಿವೇಶನದಲ್ಲಿ ಭಾರತದ ಸೌರ ಸಾಧನೆ ಪ್ರಚುರಪಡಿಸಿ ಯುರೋಪಿಯನ್ ಒಕ್ಕೂಟವನ್ನು ಸೆಳೆದಿದ್ದ ಜೋಶಿ, ಇದೀಗ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಸಹ ಅಂತರಾಷ್ಟ್ರೀಯವಾಗಿ ಭಾರತದ ನಾಯಕತ್ವವನ್ನು ಪ್ರತಿಪಾದಿಸುವಲ್ಲಿ ಮುಂದಾಗಿದ್ದಾರೆ.
ಪ್ರಧಾನಿ ಮೋದಿ ಅವರ ಸೂಚನೆಯಂತೆ WEF ನ 2026ರ ಈ ವಾರ್ಷಿಕ ಸಭೆಯಲ್ಲಿ ಭಾರತದಿಂದ ಮೂವರು ಕೇಂದ್ರ ಸಚಿವರು ಪಾಲ್ಗೊಳ್ಳುತ್ತಿದ್ದಾರೆ. ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರೂ ಆಗಿರುವ ಜೋಶಿ ಅವರೊಂದಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ದು ಅವರೂ ದಾವೋಸ್ ಗೆ ತೆರಳಿದ್ದಾರೆ.
ಭಾನುವಾರ ಸಂಜೆ ದಾವೋಸ್ ನ ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ಭಾರತದ ಈ ಸಚಿವದ್ವಯರ ತಂಡವನ್ನು ರಾಯಭಾರಿ ಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು. ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಕುರಿತಂತೆ ಚರ್ಚೆ ನಡೆಸಿದರು. ಈ ವೇಳೆ ನವೀಕರಿಸಬಹುದಾದ ಇಂಧನದಲ್ಲಿ ಭಾರತದ ಮಹತ್ತರ ಹೆಜ್ಜೆ ಕುರಿತು ಅಚ್ಚರಿ ವ್ಯಕ್ತಪಡಿಸಿದರು.
ಭಾರತದಲ್ಲಿನ ಆಹಾರ ವ್ಯವಸ್ಥೆ, ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಮ್ಮ ಕ್ರಾಂತಿ, ಆಡಳಿತ ಸುಧಾರಣೆ ಹಾಗೂ ಕಾರ್ಯವೈಖರಿಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂಬುದರ ಸಂಕೇತ ಇದಾಗಿದೆ. ಅಲ್ಲದೇ, ಹೆಚ್ಚಿನ ಹೂಡಿಕೆಎನ್ನು ಸೆಳೆಯಲು ಅವಕಾಶವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa