ವಾರಣಾಸಿ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಾರಾಣಾಸಿಯಲ್ಲಿ ನಡೆದ ಭಾರತ-ಮಾರಿಷಸ್ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಮಾರಿಷಸ್ ಕೇವಲ ಪಾಲುದಾರರಲ್ಲ, ಬದಲಾಗಿ ಕುಟುಂಬ ಎಂದು ಹೇಳಿದ್ದಾರೆ.
ಮಾರಿಷಸ್ ಪ್ರಧಾನಿ ಡಾ. ನವೀನಚಂದ್ರ ರಾಮಗೂಲಂ ಅವರೊಂದಿಗೆ ನಡೆದ ಮಾತುಕತೆಯ ನಂತರ ಉಭಯ ರಾಷ್ಟ್ರಗಳ ನಡುವೆ ಏಳು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ, ಸಿಎಸ್ಐಆರ್ ಮತ್ತು ಮಾರಿಷಸ್ ಸಾಗರಶಾಸ್ತ್ರ ಸಂಸ್ಥೆ ನಡುವಿನ ಒಪ್ಪಂದ, ಕರ್ಮಯೋಗಿ ಭಾರತ್ ಕಾರ್ಯಕ್ರಮ ಹಾಗೂ ಮಾರಿಷಸ್ ಸಾರ್ವಜನಿಕ ಸೇವಾ ಸಚಿವಾಲಯದ ಪಾಲುದಾರಿಕೆ, ವಿದ್ಯುತ್ ವಲಯದಲ್ಲಿ ಸಹಕಾರ, ಸಣ್ಣ ಅಭಿವೃದ್ಧಿ ಯೋಜನೆಗಳಿಗೆ ಭಾರತೀಯ ಅನುದಾನ ನೆರವು, ಹೈಡ್ರೋಗ್ರಫಿ ಒಪ್ಪಂದದ ನವೀಕರಣ, ಬಾಹ್ಯಾಕಾಶ ಸಂಶೋಧನೆ ಮತ್ತು ಉಪಗ್ರಹ ಟ್ರ್ಯಾಕಿಂಗ್ ಕೇಂದ್ರಗಳ ಸ್ಥಾಪನೆ ಸೇರಿವೆ.
ಇದೇ ಸಂದರ್ಭದಲ್ಲಿ, ಐಐಟಿ ಮದ್ರಾಸ್ ಹಾಗೂ ಮಾರಿಷಸ್ ವಿಶ್ವವಿದ್ಯಾಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್ಮೆಂಟ್ ಹಾಗೂ ಮಾರಿಷಸ್ ವಿಶ್ವವಿದ್ಯಾಲಯಗಳ ನಡುವೆ ಎರಡು ಶೈಕ್ಷಣಿಕ ಒಪ್ಪಂದಗಳಿಗೂ ಸಹಿ ಮಾಡಲಾಯಿತು. ಎನ್ಟಿಪಿಸಿ ಮತ್ತು ಮಾರಿಷಸ್ ವಿದ್ಯುತ್ ಘಟಕ ನಡುವೆ 17.5 ಮೆಗಾವ್ಯಾಟ್ ತೇಲುವ ಸೌರ ಯೋಜನೆಗೂ ಒಪ್ಪಂದ ಜರುಗಿತು.
ಮೋದಿ ಅವರು, “ಕಾಶಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ. ಇದೇ ಆತ್ಮವು ಶತಮಾನಗಳ ಹಿಂದೆ ಮಾರಿಷಸ್ನಲ್ಲಿ ಬೇರೂರಿದೆ” ಎಂದು ಹೇಳಿದರು. ಕಳೆದ ವರ್ಷ ಯುಪಿಐ ಮತ್ತು ರೂಪೇ ಕಾರ್ಡ್ ಪರಿಚಯವಾದ ಬಳಿಕ, ಈಗ ಎರಡೂ ದೇಶಗಳು ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರ ಪ್ರಾರಂಭಿಸುವತ್ತ ಹೆಜ್ಜೆ ಇಡುತ್ತಿವೆ ಎಂದರು.
ಮಾರಿಷಸ್ ಸಾರ್ವಭೌಮತ್ವದ ಹೋರಾಟಕ್ಕೆ ಭಾರತ ಬೆಂಬಲ ನೀಡಿದೆ ಎಂದು ನೆನಪಿಸಿದ ಮೋದಿ, “ಹಿಂದೂ ಮಹಾಸಾಗರ ಪ್ರದೇಶದ ಭದ್ರತೆ ಹಾಗೂ ಮಾರಿಷಸ್ ಸಾಮರ್ಥ್ಯ ವೃದ್ಧಿಗೆ ಭಾರತ ಬದ್ಧವಾಗಿದೆ. ಭಾರತ ಸದಾ ಮೊದಲ ಪ್ರತಿಕ್ರಿಯೆ ನೀಡುವ ರಾಷ್ಟ್ರವಾಗಿಯೂ, ನಿವ್ವಳ ಭದ್ರತಾ ಪೂರೈಕೆದಾರನಾಗಿಯೂ ಕಾರ್ಯನಿರ್ವಹಿಸಿದೆ” ಎಂದು ಹೇಳಿದರು.
ಮಾರಿಷಸ್ ಪ್ರಧಾನಿ ರಾಮಗೂಲಂ, “ಆರೋಗ್ಯ, ಶಿಕ್ಷಣ, ನವೀಕರಿಸಬಹುದಾದ ಇಂಧನ, ಮೂಲಸೌಕರ್ಯ ಹಾಗೂ ಕಡಲ ಭದ್ರತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತ ನಮ್ಮೊಂದಿಗೆ ನಿಂತಿದೆ. ವಿಶೇಷ ಆರ್ಥಿಕ ಪ್ಯಾಕೇಜ್ ಹೊಸ ಅವಕಾಶಗಳನ್ನು ತೆರೆದಿಡಲಿದೆ. ಆಯುರ್ವೇದ ಕೇಂದ್ರವು ಭಾರತದ ಸಹಕಾರದೊಂದಿಗೆ ವಿಶಿಷ್ಟ ಯೋಜನೆಯಾಗಲಿದೆ” ಎಂದು ಪ್ರತಿಕ್ರಿಯಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa