ಕೊಪ್ಪಳ , 26 ಜೂನ್ (ಹಿ.ಸ.)
ಆ್ಯಂಕರ್: 2024-25ನೇ ಸಾಲಿನ ನ್ಯಾಷನಲ್ ಮಿನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 162 ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿರುತ್ತಾರೆ.
ಕೊಪ್ಪಳ ತಾಲ್ಲೂಕಿನ 73, ಗಂಗಾವತಿ ತಾಲ್ಲೂಕಿನ 42, ಕುಷ್ಟಗಿ ತಾಲ್ಲೂಕಿನ 28 ಹಾಗೂ ಯಲಬುರ್ಗಾ ತಾಲ್ಲೂಕಿನ 19 ಸೇರಿಂದತೆ ಜಿಲ್ಲೆಯ ಒಟ್ಟು 162 ವಿದ್ಯಾರ್ಥಿಗಳು ಅರ್ಹತೆ ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ.1000/-ರಂತೆ 4 ವರ್ಷಗಳ ಕಾಲ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಪ್ರತಿವರ್ಷ ಆಯ್ಕೆಯಾದ ವಿದ್ಯಾರ್ಥಿಗಳು ಎನ್ಎಸ್ಪಿ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೊಸದಾಗಿ ಆಯ್ಕೆಯಾದವರು ಹೊಸ ಆರ್ಜಿಗಳನ್ನು ಸಲ್ಲಿಸಬೇಕು. ಹಿಂದಿನ ವರ್ಷಗಳಲ್ಲಿ ಆಯ್ಕಯಾಗಿರುವ 10, 11, 12ನೇ ತರಗತಿ ವಿದ್ಯಾರ್ಥಿಗಳು ನವೀಕರಣಕ್ಕೆ ಅರ್ಜಿಯನ್ನು ಓಟಿಆರ್ ನಂಬರ್ ಮೂಲಕ ನವೀಕರಣ ವಿಭಾಗದಲ್ಲಿ ಅರ್ಜಿ ಸಲ್ಲಿಸಬೇಕು.
ಆಯ್ಕೆಯಾದ ವಿದ್ಯಾರ್ಥಿಗಳ ಹೆಸರಿನಲ್ಲಿ ಎಸ್.ಬಿ.ಐ ಅಥವಾ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಖಾತೆ ತೆರೆದು ಕಡ್ಡಾಯವಾಗಿ ಆಧಾರ್ ಸೀಡಿಂಗ್ ಮಾಡಿಸಿ ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿದ ಬಳಿಕ ವಿದ್ಯಾರ್ಥಿ ವೇತನ ಮಂಜೂರಾಗುತ್ತದೆ. ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಇಲ್ಲವೇ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮುಂದುವರೆಸಬೇಕಾಗುತ್ತದೆ ಹಾಗೂ ನಿಗದಿ ಪಡಿಸಿದ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕಾಗುತ್ತದೆ.
ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದರೆ, ಅನುತ್ತೀರ್ಣರಾದರೆ, ವ್ಯಾಸಂಗ ಮುಂದುವರೆಸದೇ ಇದ್ದರೆ ಆ ವರ್ಷದಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುವುದಿಲ್ಲ. ಈ ವಿದ್ಯಾರ್ಥಿಗಳು ಎನ್ಎಸ್ಪಿ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಾಲ್ಕು ತಾಲ್ಲೂಕಿನ ಎನ್ಎಂಎಂಎಸ್ ಅಧಿಕಾರಿಗಳು ಮತ್ತು ಆಯಾ ಶಾಲೆಯ ಮುಖ್ಯಗುರುಗಳು ಡಿ.ಎಸ್.ಇ.ಆರ್.ಟಿ ಯ ನಿರ್ದೇಶಕರ ಜ್ಞಾಪನ ಪತ್ರದಂತೆ ವಿದ್ಯಾರ್ಥಿ ವೇತನದ ಮಾರ್ಗಸೂಚಿ, ಷರತ್ತು ಹಾಗೂ ನಿಬಂಧನೆಗೊಳಪಟ್ಟು ಅರ್ಹ ಎಲ್ಲಾ ಫಲಾನುಭವಿಗಳು ಪ್ರತಿಶತ 100 ಅರ್ಜಿ ಸಲ್ಲಿಕೆಗೆ ಪೂರ್ವಸಿದ್ದತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು(ಅಭಿವೃದ್ಧಿ) ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್