ಕೋಲಾರ, ೨೬ ಜೂನ್ (ಹಿ.ಸ) :
ಆ್ಯಂಕರ್ : ಸ್ವರ್ಧಾತ್ಮಕ ಪ್ರಪಂಚದಲ್ಲಿ ಉತ್ತಮ ಕೌಶಲ್ಯ ಹೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಸಾಧನೆ ಅಥವಾ ಉದ್ಯೋಗ ಪಡೆಯುವುದು ಸುಲಭ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕೆ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಗುರುವಾರ ಭಾರತೀಯ ಪ್ರಖ್ಯಾತ ಜವಳಿ ಉದ್ಯಮ ರೇಮಂಡ್ ಕಂಪನಿಯ ಶತಮಾನೋತ್ಸವ ಅಂಗವಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಕೋಲಾರ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಕೋಲಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಕೋಲಾರ, ಸಿಲ್ವರ್ ಸ್ಪಾರ್ಕ್ ಅಪೇರಲ್ ಲಿಮಿಟಿಡ್, ಹೊಸಕೋಟೆ ರವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ನಡೆದ ಮಿನಿ ಉದ್ಯೋಗ ಮೇಳಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಬಟ್ಟೆಗೆ ಸದಾ ಕಾಲ ಬೇಡಿಕೆ ಇರುವುದಾಗಿ ತಿಳಿಸಿ, ಜವಳಿ ಕ್ಷೇತ್ರದಲ್ಲಿ ತಾವು ಉದ್ಯೋಗವನ್ನು ಆಯ್ಕೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಸಿಗಲಿದೆ ಎಂದರು.
ಸರ್ಕಾರ ಯೋಜನೆಗಳ ಲಾಭ ಪಡೆದು ಮಹಿಳೆಯರು ಸಹ ಈ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡೆಗಿಸಿಕೊಂಡು ದೇಶವು ಆರ್ಥಿಕ ಶಕ್ತಿಯಾಗಿ ಬೆಳೆಯಲು ಕಾರಣರಾಗಬೇಕೆಂದು ಕೋರಿ, ಕೌಶಲ್ಯ ಪಡೆಯಲು ಮುಂದೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಮಹಿಳೆಯರಿಗೆ ಇರುವ ಹಲವು ಉದ್ಯೋಗ ಅವಕಾಶಗಳ ಬಗ್ಗೆ ಹಾಗೂ ಅವುಗಳ ಬಗ್ಗೆ ಇರುವ ಕೌಶಲ್ಯ ತರಬೇತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ತಿಳಿಸಿದರು. ಕೋಲಾರವು ಕೈಗಾರಿಕಾ ಪ್ರಧಾನ ಜಿಲ್ಲೆಯಾಗಿ ಬೆಳವಣಿಗೆ ಹೊಂದಿದ್ದು ಇದಕ್ಕೆ ಅಗತ್ಯವಾದ ಕೌಶಲ್ಯ ತರಬೇತಿ ಹೊಂದಿದ್ದರೆ ಉದ್ಯೋಗ ಅವಕಾಶ ದೊರೆಯಲು ಸುಲಭವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರೇಮಂಡ್ ಸಂಸ್ಥೆ ಆಡಳಿತಾಧಿಕಾರಿ ಬಿ.ಎನ್.ನರಸಪ್ಪ,ರೇಮಂಡ್ ಸಂಸ್ಥೆಯು ಜವಳಿ ಉದ್ಯಮದಲ್ಲಿ ಪ್ರಖ್ಯಾತವಾದ ಸಂಸ್ಥೆಯಾಗಿದ್ದು, ಸಂಸ್ಥೆಯು ೧೦೦ ವರ್ಷ ಪೂರೈಸಿರುವ ಸುಸಂದರ್ಭದಲ್ಲಿ ಸಂಸ್ಥೆಗೆ ಅಗತ್ಯವಿರುವ ಸುಮಾರು ೫೦೦ ಉದ್ಯೋಗ ಅವಕಾಶಗಳು ಭರ್ತಿಗೆ ಈ ಉದ್ಯೋಗ ಮೇಳವನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಕೋಲಾರ ಜಿಲ್ಲೆಯ ಮಹಿಳಾ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉದ್ಯೋಗ ಅವಕಾಶ ಪಡೆಯುವಂತೆ ಕೋರಿದರು. ರೇಮಂಡ್ ಸಂಸ್ಥೆಯ ವಿವಿಧ ಘಟಕಗಳ ಬಗ್ಗೆ ಹಾಗೂ ಇವರ ಉತ್ಪನ್ನಗಳು ಬೇರೆ ದೇಶಗಳಿಗೆ ರಫ್ತು ಆಗುವುದರ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುವ ಸಿಬ್ಬಂದಿಗಳಿಗೆ ದೊರೆಯುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಸಂಸ್ಥೆಯ ಉತ್ಪಾದನ ಘಟಕವನ್ನು ತೆರೆಯುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಆರ್. ವರಲಕ್ಷಿ ಮಾತನಾಡಿ, ಮಹಿಳೆಯರು ಸಬಲೀಕರಣರಾಗಲು ಎಲ್ಲಾ ರೀತಿಯ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಯಲ್ಲೇಶ್ ಮಾತನಾಡಿ ಭಾರತ ದೇಶದ ಜನಸಂಖ್ಯೆ ೧೫೦ಕೋಟಿ ತಲುಪಿರುವುದರಿಂದ ಎಲ್ಲರಿಗೂ ಸರ್ಕಾರಿ ಕೆಲಸ ದೊರೆಯವುದು ಮರೀಚಿಕೆಯಾಗಿದ್ದು ಪ್ರತಿಯೊಬ್ಬರು ಕೌಶಲ್ಯ ಬಳಸಿಕೊಂಡು ಖಾಸಗಿ ಕ್ಷೇತ್ರ ಹಾಗೂ ಸ್ವಯಂ ಉದ್ಯೋಗದತ್ತ ಗಮನಹರಿಸಲು ಕೋರಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಮಾತನಾಡಿ, ನಾವು ಉದ್ಯೋಗ ಅರಸುತ್ತಿದ್ದ ಕಾ¯ದಲ್ಲಿ ಉದ್ಯೋಗಕ್ಕಾಗಿ ನಾವೇ ಸಂಸ್ಥೆಯನ್ನು ಹುಡುಕಿಕೊಂಡು ಹೋಗಬೇಕಾಗಿತ್ತು. ಆದರೆ ಈಗ ಸಂಸ್ಥೆಯವರೇ ನಮ್ಮನ್ನು ಹುಡುಕಿಕೊಂಡು ಬಂದು ಉದ್ಯೋಗ ನೀಡುವ ಸೌಲಭ್ಯ ಉಂಟಾಗಿದೆ ಎಂದು ತಿಳಿಸಿ ಉದ್ಯೋಗಕಾಂಕ್ಷಿಗಳು ಇದರ ಲಾಭ ಪಡೆಯಲು ಕೋರಿದರು.
ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ, ಕೋಲಾರದ ನಿರ್ದೇಶಕ ಎಂ.ವಿ. ನಾರಾಯಣಸ್ವಾಮಿ, ತಮ್ಮ ಸಂಸ್ಥೆಯಿAದ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿ ೨ ದಿನಗಳ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುನಿಕೃಷ್ಣಪ್ಪ, ಉದ್ಯೋಗ ವಿನಿಮಯ ಕಛೇರಿಯ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಯೋಗ ವಿನಿಮಯ ಕಛೇರಿಯ ಸಿಬ್ಬಂದಿ ಮನೋಜ್, ತಿಮ್ಮರಾಜು, ಶ್ವೇತಾ, ಭಾನುಮತಿ, ಈಶ್ವರ, ಶಶಿಕುಮಾರ್, ಎಚ್.ಆರ್.ಡಿ.ಸಿ ಹಾಗೂ ಸಿಲ್ವರ್ ಸ್ಪಾರ್ಕ್ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಚಿತ್ರ ; ರೇಮಂಡ್ ಕಂಪನಿಯ ಶತಮಾನೋತ್ಸವ ಅಂಗವಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಸಂಸ್ಥೆ ನಡೆಸಿದ ಮಿನಿ ಉದ್ಯೋಗ ಮೇಳಕ್ಕೆ ರೇಮಂಡ್ ಆಡಳಿತಾಧಿಕಾರಿ ಬಿಎನ್.ನರಸಪ್ಪ ಚಾಲನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್