ಹೊಸಪೇಟೆ , 26 ಜೂನ್ (ಹಿ.ಸ.)
ಆ್ಯಂಕರ್:
2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯನ್ನು ಜಿಲ್ಲೆಯಲ್ಲಿ ಆಯ್ಕೆ ಮಾಡಲಾಗಿದ್ದು, ತೋಟಗಾರಿಕೆ ಬೆಳೆಗಾರರು ತಮ್ಮ ಬೆಳೆಗಳಿಗೆ ವಿಮೆ ನೊಂದಾಯಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ಪಿ.ಜಿ.ಚಿದಾನಂದ ತಿಳಿಸಿದ್ದಾರೆ.
ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿ ತಾಲೂಕಿನ ದಾಳಿಂಬೆ ಹಾಗೂ ಹಸಿಮೆಣಸಿನಕಾಯಿ ಬೆಳೆಗಳಿಗೆ ಹಾಗೂ ಹರಪನಹಳ್ಳಿ ತಾಲೂಕಿನ ದಾಳಿಂಬೆ ಹಾಗೂ ಅಡಿಕೆ ಬೆಳೆಗಳಿಗೆ ಜುಲೈ 31 ರೊಳಗಾಗಿ ಬೆಳೆ ವಿಮೆ ನೊಂದಾಯಿಸಬೇಕು.
ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ : ಆರ್ಡಬ್ಲೂಬಿಸಿಐಎಸ್ ಯೋಜನೆಯಡಿ ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ್ಗೆ ದಾಳಿಂಬೆ ಬೆಳೆಗೆ ವಿಮಾ ಮೊತ್ತ ರೂ.1,27000 ರೈತರ ವಿಮಾ ಕಂತು ಶೇ.5 ರಂತೆ ರೂ.6350, ಹಸಿ ಮೆಣಸಿನಕಾಯಿ ಬೆಳೆಗೆ ವಿಮಾ ಮೊತ್ತ ರೂ.71,000 ರೈತರ ವಿಮಾ ಕಂತು ರೂ.3550, ಅಡಿಕೆ ಬೆಳೆಗೆ ವಿಮಾ ಮೊತ್ತ ರೂ.1,28,000 ರೈತರ ವಿಮಾ ಕಂತು ರೂ.6,400 ಆಗಿದೆ. ಬೆಳೆ ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಬೆಳೆ ವಿಮಾ ಮೊತ್ತವನ್ನು ಪಾವರಿಸಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳಲ್ಲಿ ಸಹಕಾರಿ ಸಂಘಗಳನ್ನು ಮತ್ತು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಅಗತ್ಯ ದಾಖಲಾತಿ ವಿವರ : ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಸಂಖ್ಯೆ ಹಾಗೂ ಸ್ವಯಂ ಘೋಷಿತ ಬೆಳೆ ವಿವರಗಳನ್ನು ನೀಡತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಹೋಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್