ಕೊಪ್ಪಳ, 26 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಧಿಕಾರಿಗಳ ಕಛೇರಿ, ತಾಲೂಕಾ ಆರೊಗ್ಯಾಧಿಕಾರಿಗಳ ಕಚೇರಿ, ಕೊಪ್ಪಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಚಂದ್ರಮುಖಿ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜ್, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ, ಕಾಲೇಜಿನ ಸಭಾಭವನದಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಮಾನಸಿಕ ರೋಗ ತಜ್ಞರಾದ ಡಾ.. ಲಕ್ಷ್ಮೀದೇವಿ ಪಾಟೀಲ್ ಇವರು ಕಾರ್ಯಕ್ರಮ ಕುರಿತು ಮಾತನಾಡಿ, ಮನುಷ್ಯನ ಆರೋಗ್ಯ ಬಹಳ ಮುಖ್ಯ. ಅದರಲ್ಲಿ ವಿಶೇಷವಾಗಿ ಇಂದು ಯುವಜನತೆ ದುಷ್ಟ ಚಟಗಳ ದಾಸರಾಗಿದ್ದಾರೆ. ಮಾದಕ ವಸ್ತುಗಳಾದ ಗಾಂಜಾ, ಅಫೀಮ್, ಕುಡಿತ, ಡ್ರಗ್ಸ್ಸೇವನೆ, ಬೀಡಿ, ಸಿಗರೇಟ್, ತಂಬಾಕು ಸೇವನೆ ಮಾಡುವವರ ಸಂಖ್ಯೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ತಡೆಗಟ್ಟುವ ಮತ್ತು ಯುವಜನತೆಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 26 ರಂದು ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಭಾರತವನ್ನು ನಶೆಮುಕ್ತ ಮಾಡಲು ಪ್ರತಿಯೊಬ್ಬರು ತಿಳಿದುಕೊಂಡು ತಮ್ಮ ತಮ್ಮ ಗ್ರಾಮ ಮತ್ತು ವಾರ್ಡ್ಗಳಲ್ಲಿ ಅರಿವು ಮೂಡಿಸುವಂತೆ ತಿಳಿಸಿದರು.
ಈ ಮಾದಕ ವಸ್ತುಗಳಿಗೆ ಹೆಚ್ಚಾಗಿ ಹದಿ-ಹರೆಯದವರು, ವಿದ್ಯಾರ್ಥಿಗಳು, ಕಾರ್ಮಿಕರು, ಶ್ರಮಜೀವಿಗಳು, ನಿರುದ್ಯೋಗಿಗಳು, ಒಂಟಿಯಾಗಿ ಜೀವಿಸುವವರು, ಪದೇ ಪದೇ ನೋವು ನಿರಾಸೆಗೆ ಒಳಗಾದವರು ತುತ್ತಾಗುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಜಠರ ಸಮಸ್ಯೆ, ವಿಟಮಿನ್ ಕೊರತೆ, ಲಿವರ್ ಖಾಯಿಲೆ, ಹೃದಯರೋಗ, ಮೆದುಳು ಮತ್ತು ಮೂತ್ರ ಜನಕಾಂಗಗಳಿಗೆ ಸಂಬಂಧಿಸಿದ ಖಾಯಿಲೆ, ಅಪಘಾತ, ಸಾವು ನೋವು ಹೆಚ್ಚಳ ಉಂಟಾಗುತ್ತವೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಇದರ ಬಗ್ಗೆ ತಿಳಿದುಕೊಂಡು ಪ್ರತಿಯೊಬ್ಬ ನಾಗರಿಕರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಇವರು ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು, ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಮಾದಕ ವಸ್ತುಗಳ ಸೇವನೆಗೆ ತುತ್ತಾದವರನ್ನ ಚಿಕಿತ್ಸೆ ಬಗ್ಗೆ ಮೊದನೇ ಹಂತದಲ್ಲಿ ಖಾಯಿಲೆ ಗುರುತಿಸಿ ಆಸ್ಪತ್ರೆಗೆ ಕಳುಹಿಸಬೇಕು. ಮಾನಸಿಕ ತಜ್ಞರನ್ನು ಭೇಟಿ ಮಾಡಬೇಕು. ವ್ಯಸನಮುಕ್ತ ಕೇಂದ್ರ ಹಾಗೂ ಟಿ.ಸಿ.ಸಿ ಕೇಂದ್ರಗಳಲ್ಲಿ ನೀಡುವ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಬೇಕು. ಆಪ್ತ ಸಮಾಲೋಚನೆಗೆ ಒಳಪಡಿಸಬೇಕು ಮತ್ತು ತಾವು ವಾಸಿಸುವ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವ್ಯಸನಕ್ಕೆ ಬಲಿಯಾದವರನ್ನ ಮೇಲ್ಕಾಣಿಸಿದ ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಮತ್ತು ವ್ಯಸನಮುಕ್ತ ಕೊಪ್ಪಳ ಜಿಲ್ಲೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.. ಮಹೇಶ ಉಮಚಗಿ, ಇವರು ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ ಕುರಿತು ವಿವರವಾಗಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳ ಬಗ್ಗೆ, ಕುಟುಂಬ ಕಲ್ಯಾಣ ಕಾರ್ಯಕ್ರಮ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಮನಶಾಸ್ತ್ರಜ್ಞರಾದ ಪುಷ್ಪಾ ತೆರೇಸಾ, ಕಾಲೇಜಿನ ಆಡಳಿತಾಧಿಕಾರಿಗಳಾದ ರಕ್ಷಿತ್ ವಸ್ತ್ರದ್, ಪ್ರಾಂಶುಪಾಲರಾದ ಆನಂದ ಹಳ್ಳಿಗುಡಿ, ಸಿಬ್ಬಂದಿಗಳಾದ ಉದಯ, ಪರಶುರಾಮ, ಶ್ರೀನಿವಾಸ, ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್