
ನವದೆಹಲಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜವಳಿ ಮತ್ತು ಉಡುಪು ರಫ್ತುಗಳು ಭಾರತದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಆಧಾರಸ್ತಂಭವಾಗಿದ್ದು, ‘ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತ’ ಗುರಿ ಸಾಧನೆಗೆ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದ್ದಾರೆ.
ಈ ವಲಯವು 45 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಹಾಗೂ 100 ದಶಲಕ್ಷಕ್ಕೂ ಹೆಚ್ಚು ಜನರಿಗೆ ಪರೋಕ್ಷ ಜೀವನೋಪಾಯ ಒದಗಿಸುತ್ತಿದ್ದು, ಜಿಡಿಪಿಗೆ ಸುಮಾರು 2% ಮತ್ತು ಉತ್ಪಾದನಾ ಕ್ಷೇತ್ರದ ಜಿವಿಎಗೆ 11% ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.
ಉಡುಪು ರಫ್ತು ಉತ್ತೇಜನ ಮಂಡಳಿ (AEPC)ಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ, ಪಿಎಂ ಮಿತ್ರ ಪಾರ್ಕ್, ಸಮರ್ಥ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಂತಹ ಸರ್ಕಾರದ ದೂರದೃಷ್ಟಿಯ ನೀತಿಗಳು ವಲಯದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಿವೆ ಎಂದು ಹೇಳಿದರು. ವಿಷನ್–2030 ಅಡಿಯಲ್ಲಿ ಜವಳಿ ವಲಯವನ್ನು ಜಾಗತಿಕ ಶಕ್ತಿ ಕೇಂದ್ರವನ್ನಾಗಿ ಮಾಡುವ ಗುರಿ ಇದೆ ಎಂದು ಉಲ್ಲೇಖಿಸಿದರು.
ಹೊಸ ಮಾರುಕಟ್ಟೆಗಳ ಅನ್ವೇಷಣೆ, ಮೌಲ್ಯವರ್ಧನೆ, ರಫ್ತು ಬುಟ್ಟಿಯ ವೈವಿಧ್ಯೀಕರಣ, ಆಮದು ಅವಲಂಬನೆ ಕಡಿತ, ನಾವೀನ್ಯತೆ, ಸಂಶೋಧನೆ–ಅಭಿವೃದ್ಧಿ ಹಾಗೂ ಸುಸ್ಥಿರ, ಪರಿಸರ ಸ್ನೇಹಿ ರಫ್ತುಗಳತ್ತ ಗಮನ ಹರಿಸಲು ಉದ್ಯಮಕ್ಕೆ ಕರೆ ನೀಡಿದರು. ಕಾರ್ಮಿಕರ ಕಲ್ಯಾಣಕ್ಕೆ ಆದ್ಯತೆ ನೀಡಬೇಕೆಂದೂ ಹೇಳಿದರು. ಮುಂಬರುವ ವರ್ಷಗಳಲ್ಲಿ ಜವಳಿ ರಫ್ತು ದ್ವಿಗುಣಗೊಳ್ಳುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಈ ವೇಳೆ ಎಇಪಿಸಿಯ “ಥ್ರೆಡ್ಸ್ ಆಫ್ ಟೈಮ್: ಸ್ಟೋರಿ ಆಫ್ ಇಂಡಿಯಾಸ್ ಟೆಕ್ಸ್ಟೈಲ್ಸ್” ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa