ಸಂಶೋಧನೆಗಳು ಸತ್ಯದಿಂದ ಕಡೆಗೆ ಹೋಗಬೇಕು : ಡಾ. ಶರತಚಂದ್ರ ಸ್ವಾಮಿಗಳು
ವಿಜಯಪುರ, 15 ನವೆಂಬರ್ (ಹಿ.ಸ.) : ಆ್ಯಂಕರ್ : ಸಂಶೋಧನೆಗಳು ಸತ್ಯದಿಂದ ಕಡೆಗೆ ಹೋಗಬೇಕು ಎಂಬ ತತ್ವದಡಿ ಡಾ. ಎಂ. ಎಂ. ಕಲಬುರ್ಗಿ ಅವರು ಸಂಶೋಧನೆ ನಡೆಸುತ್ತಿದ್ದರು ಎಂದು ಮೈಸೂರಿನ ಕುಂದೂರು ಮಠದ ಡಾ. ಶರತಚಂದ್ರ ಸ್ವಾಮಿಗಳು ಹೇಳಿದ್ದಾರೆ. ಇಂದು ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ
ಸಂಶೋಧನೆ


ವಿಜಯಪುರ, 15 ನವೆಂಬರ್ (ಹಿ.ಸ.) :

ಆ್ಯಂಕರ್ : ಸಂಶೋಧನೆಗಳು ಸತ್ಯದಿಂದ ಕಡೆಗೆ ಹೋಗಬೇಕು ಎಂಬ ತತ್ವದಡಿ ಡಾ. ಎಂ. ಎಂ. ಕಲಬುರ್ಗಿ ಅವರು ಸಂಶೋಧನೆ ನಡೆಸುತ್ತಿದ್ದರು ಎಂದು ಮೈಸೂರಿನ ಕುಂದೂರು ಮಠದ ಡಾ. ಶರತಚಂದ್ರ ಸ್ವಾಮಿಗಳು ಹೇಳಿದ್ದಾರೆ.

ಇಂದು ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಗ್ರಂಥಾಲಯ ಸಭಾಂಗಣದಲ್ಲಿ ಡಾ. ಎಂ. ಎಂ. ಕಲಬುರ್ಗಿ ಸಮಗ್ರಹ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಅನುಭಾವದ ಸಂಶೋಧನೆ ಮತ್ತು ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಲೇಖನಿಗೆ ದೊಡ್ಡ ಶಕ್ತಿಯಿದೆ. ಸತ್ಯ ಸಂಶೋಧನೆ ಸಮಾಜಕ್ಕೆ ಪೂರಕವಾಗದರೆ, ಪೀತ ಸಂಶೋಧನೆ ಮಾರಕವಾಗಿದೆ. ನಂಬಿಕೆಗಿಂತ ಸತ್ಯವನ್ನು ಸಂಶೋಧಿಸುವ ಗುಣ ಬೆಳೆಸಿಕೊಳ್ಳಬೇಕು. ಸಂಶೋಧನೆಯಂದೆ ಭೂಮಿಯಿಂದ ಚಿನ್ನ ತೆಗೆದಂತೆ. ಕಾಲ ಗರ್ಭದಲ್ಲಿರುವ ಸತ್ಯ ಸಂಗತಿಗಳನ್ನು ಹೆಕ್ಕಿ ತೆಗೆದು ಸಂಸ್ಕೃತಿಯನ್ನು ಕಟ್ಟುವ ಜವಾಬ್ದಾರಿಯುತ ಕೆಲಸ ಇದಾಗಿದೆ. ಸಂಶೋಧಕರ ಪಾತ್ರ ಇದರಲ್ಲಿ ಮುಖ್ಯವಾಗಿದ್ದು, ಸಂಶೋಧನೆ ಹೇಗಿರಬೇಕು ಎಂಬುದರ ಕುರಿತು ಕಲಬುರ್ಗಿ ಅವರು ರಚಿಸಿರುವ ಗ್ರಂಥ ಎಲ್ಲರಿಗೂ ಸದಾ ಮಾದರಿಯಾಗಿದೆ. ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಕಲಬುರ್ಗಿಯವರ 40 ಸಂಪುಟಗಳನ್ನು ಲೋಕಾರ್ಪಣೆ ಮಾಡುತ್ತಿರುವುದನ್ನು ಕಂಡು ಅತೀವ ಸಂತೋಷವಾಗಿದೆ. ಕಲಬುರ್ಗಿ ಅವರ ವಚನ ಸಾಹಿತ್ಯ ಸಂಗ್ರಹವನ್ನು ಹೆಚ್ಚೆಚ್ಚು ಪ್ರಚಾರ ಮಾಡುವ ಎಲ್ಲರಿಂದ ಆಗಬೇಕು ಎಂದು ಅವರು ಹೇಳಿದರು.

ಕಲಬುರ್ಗಿ ಅವರ ವಚನ ಸಾಹಿತ್ಯದ ಕುರಿತು ಮಾತನಾಡಿದ ಹಿರಿಯ ಸಂಶೋಧಕ ಮತ್ತು 40 ಸಂಪುಟಗಳ ಸಂಪಾದಕ ಡಾ. ವೀರಣ್ಣ ರಾಜೂರ, ಬೇರೆಯವರು 10 ಜನ್ಮಗಳಲ್ಲಿ ಮಾಡುವ ಸಂಶೋಧನೆ ಕೆಲಸವನ್ನು ಕಲಬುರ್ಗಿ ಅವರು ಒಂದೇ ಜನ್ಮದಲ್ಲಿ ಮಾಡಿದ್ದಾರೆ. ಅವರ ಜೀವನದ ಕೆಲಸಕಾರ್ಯಗಳ ಸಂಪುಟವನ್ನು ನಾವು ಸಂಪುಟ ಮಾಡಿರುವುದು ನಮ್ಮ ಪುಣ್ಯ. ಪಾಂಡಿತ್ಯ ಪರಂಪರೆಯನ್ನು ಅಳವಡಿಸಿಕೊಂಡು ಸೃಜನೇತರ ಸಾಹಿತ್ಯಕ್ಕೆ ಅರ್ಪಿಸಿಕೊಂಡಿದ್ ಅವರು ಅಪ್ರಕಟಿದ ವಚನದ ಆಕರ ಸಾಮಗ್ರಿಗಳನ್ನು ಸಂಗ್ರಹಿಸಿ ಪ್ರಕಟ ಮಾಡುವ ಮೂಲಕ ಇತಿಹಾಸದಲ್ಲಿ ಎಲೆಮರೆಯ ಕಾಯಿಯಂತಿದ್ದ ಬಸವಾದಿ ಶರಣರ ಮತ್ತು ಕನ್ನಡ ಸಾಹಿತ್ಯವನ್ನು ಬೆಳಕಿಗೆ ತಂದಿದ್ದಾರೆ ಎಂದು ಹೇಳಿದರು.

ಕಲಬುರ್ಗಿಯವರ ಸಾಹಿತ್ಯದ ಕುರಿತು ಸಂಶೋಧಕ ಡಾ. ಎಸ್. ಕೆ. ಕೊಪ್ಪ ಮಾತನಾಡಿ, ಕಲಬುರ್ಗಿಯವರ ಆಸಕ್ತಿ ಕ್ಷೇತ್ರಗಳ ಹರಿವು ದೊಡ್ಡದಿದೆ. ಸೃಜನ ಮತ್ತು ಸೃಜನೇತರ ಎರಡೂ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ್ದಾರೆ. ಸಂಶೋಧನೆ ಅವರ ಆತ್ಮವಾಗಿತ್ತು. ಸಂಶೋಧನೆಯ ಹರವು ಅನಂತಮುಖವಾಗಿದೆ. ಅವರ ಸಂಶೋಧನೆ ಇಡೀಯಾದ ಗ್ರಂಥಗಳ ರೂಪ ಮತ್ತು ಬಿಡಿಬಿಡಿಯಾದ ಸಂಶೋಧನ ಪ್ರಬಂಧಗಳಲ್ಲಿದೆ. ಕಳೆದು ಹೊದ ಚರಿತ್ರೆಯನ್ನು ಕಟ್ಟಿ ಕೊಟ್ಟಿದ್ದಾರೆ. ಕನ್ನಡ ಅಧ್ಯಯನ ವಿಭಾಗದಲ್ಲಿ ಶಾಸನಶಾಸ್ತ್ರ ಅಧ್ಯಯನ ಪತ್ರಿಕೆ ಪ್ರಾರಂಭಿಸಿದ್ದರು. ಕನ್ನಡದ 30000 ಶಾಸನಗಳನ್ನು ಸಂಶೋಧಿಸಿದರು. ಆಕರಗಳಲ್ಲಿರುವ ಸಾಹಿತ್ಯವನ್ನು ವಿಶ್ಲೇಷಿಸಿ ವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದರು.

ಸಂಶೋದಕ ಡಾ. ಗುರುಪಾದ ಮರಿಗುದ್ದಿ ಅವರು ಕಲಬುರ್ಗಿಯವರ ಸೃಜನ ಸಾಹಿತ್ಯ ಕುರಿತು ಮಾತನಾಡಿ, ಸ್ವಚಿಂತನೆ ಕವಿತೆಗಳು, ವ್ಯಕ್ತಿ ಚಿತ್ರಣ, ಸಾಂಸ್ಕೃತಿಕ, ಕನ್ನಡ, ವಚನಗಳ ಬಗ್ಗೆ ಕಲಬುರ್ಗಿ ಅವರು ಬರೆದಿದ್ದಾರೆ. ನಾಟಕ, ಗದ್ಯ ಮತ್ತು ಲೇಖನ ಸಾಹಿತ್ಯ ಚಾರಿತ್ರ್ಯದ ವಿಷಯವನ್ನು ವಿಶ್ಲೇಷಿಸಿದ್ದಾರೆ. ಅವರ ನಾಟಕಗಳು ಸಾಂಕೇತಿಕ ಅರ್ಥದಲ್ಲಿ ಪ್ರಾರಂಭವಾಗಿ ಬಸವಣ್ಣನವರ ತಾತ್ವಿಕತೆಯನ್ನು ಬಿಂಬಿಸುತ್ತವೆ. ಸಾಮಾಜಿಕ, ಧಾರ್ಮಿಕ ಪ್ರತಿಕ್ರಿಯೆಗಳ ಬಗ್ಗೆ ಪ್ರಸ್ತಾಪ ಹೊಂದಿವೆ. ಬರವಣಿಗೆ ಅಕ್ಷರವನ್ನು ಅಶುದ್ಧವಾಗಿಡಬೇಡಿ. ಸತ್ಯಕ್ಕಾಗಿ ಲೇಖನಿ ಬಳಸಬೇಕು ಎಂಬುದನ್ನು ಪಾಲಿಸುತ್ತ ಚರಿತ್ರೆಯನ್ನು ನಾಟಕಗಳ ರೂಪದಲ್ಲಿ ಪ್ರಕಟಿಸಿದ್ದಾರೆ. ಚರಿತ್ರೆಯನ್ನು ದುರ್ಬಳಕೆ ಮಾಡಿರುವ ಬಗ್ಗೆಯೂ ಸತ್ಯಾನ್ವೇಷಣೆ ಮಾಡಿದ್ದಾರೆ ಎಂದು ಹೇಳಿದರು.

ಸಂಶೋಧಕ ಡಾ. ಕೆ. ರವೀಂದ್ರನಾಥ ಅವರು ಕಲಬುರ್ಗಿ ಅವರ ಸಂಪಾದನ ಸಾಹಿತ್ಯದ ವ್ಯಾಪ್ತಿಯ ಕುರಿತು ಮಾತನಾಡಿದರು. ಕಲಬುರ್ಗಿ ಅವರು ಸಂಶೋಧನ ಮಾರ್ಗ ರೂಪಿಸಿದ್ದಾರೆ. ಕನ್ನಡ ಗ್ರಂಥ ಸಂಶೋಧನ, ಕವಿಕಾವ್ಯ ಚರಿತ್ರೆಗಳ ಬಗ್ಗೆ ಕೃತಿಶಾಸ್ತ್ರದ ಬಗ್ಗೆ, ಕಾಲದ ದೃಷ್ಠಿಯಿಂದ ಪ್ರಾಚೀನ, ಶುದ್ಧ ಅಸ್ಮಿತೆಯನ್ನು ಇಟ್ಟುಕೊಂಡು ದೇಶಿ ಸಂಸ್ಕೃತಿಯ ಸಿದ್ಧಾಂತ, ಪರಿಷ್ಕರಣೆ ಸಿದ್ಧಾಂತ ಬಗ್ಗೆ ಬರೆದಿದ್ದಾರೆ. ಪಠ್ಯದ ಕೆಳಗೆ ಇರುವ ಪಾಠಗಳು ಮತ್ತು ಪಠ್ಯಗಳಲ್ಲಿರುವ ಪಾಠಗಳು ಕಾಲಕ್ಕೆ ತಕ್ಕಂತೆ ಅದಲು ಬದಲಾಗಬಹುದು ಎಂಬುದನ್ನು ಆಧಾರ ಸಮೇತ ತೋರಿಸಿದ್ದಾರೆ. ಸುಖಿ- ಸುಚಿ ಪರಿಸರ ಅಧ್ಯಯನ ಮಾಡಿದ್ದಾರೆ. ಸಂಶೋಧನೆಯ ಹೊಸ ಸಿದ್ಧಾಂತವನ್ನು ತೋರಿಸಿದ್ದಾರೆ. ಅವರ ಎಲ್ಲ ಪುಸ್ತಕಗಳಲ್ಲಿರುವ ಪ್ರಸ್ತಾವನೆಗಳು ಓದಿಸಿಕೊಂಡು ಹೋಗುತ್ತವೆ. ದಾಖಲು ಸಾಹಿತ್ಯ ಕೈಪಿಯತ್, ಕಾಗದ ಸಾಹಿತ್ಯ, ಚಾರಿತ್ರಿಕ ಸಾಹಿತ್ಯವನ್ನು ಸಂಗ್ರಹಿಸಿದ್ದಾರೆ. ಕಠಿಣ ಹಳೆಗನ್ನಡವನ್ನು ಕಾವ್ಯದ ರೂಪದಲ್ಲಿ ಸರಳವಾಗಿ ಓದಿ, ವಿದ್ಯಾರ್ಥಿಗಳಿಗೆ ಸರಳ ಪಠ್ಯವಾಗಿ ನೀಡಿದ್ದಾರೆ, ಕಲಬುರ್ಗಿಯವರು ಭುವನದ ಭಾಗ್ಯವಿದ್ದಂತೆ. ಅವರು ಬದುಕಿದ್ದರೆ ಇನ್ನೂ 100 ಯೋಜನೆಗಳು ತಲೆ ಎತ್ತುತ್ತಿದ್ದವು ಎಂದು ಹೇಳಿದರು.

ಮತ್ತೋರ್ವ ಸಂಶೋಧಕ ಡಾ ಎಫ್. ಟಿ. ಹಳ್ಳಿಕೇರಿ ಅವರು ಕಲಬುರಗಿಯವರು ಅನುಷ್ಠಾನಕ್ಕೆ ತಂದ ಯೋಜನೆಗಳ ಕುರಿತು ಮಾತನಾಡಿದರು. ಕಲಬುರಗಿಯವರು ಎಲ್ಲರನ್ನು ಕೂಡಿಸಿಕೊಂಡು ಕೆಲಸ ಮಾಡುತ್ತಿದ್ದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ನಿಯತಕಾಲಿಕ ಪ್ರಾರಂಭಿಸಿದ್ದರು. ಅವರು ವ್ಯಕ್ತಿಯಾಗಿ ಅಲ್ಲ, ಶಕ್ತಿಯಾಗಿ ಸಂಶೋಧನೆ ಮಾಡಿದ್ದಾರೆ. ಹಣೆತುಂಬ ಯೋಜನೆಗಳನ್ನು ಹೊಂದಿ ಕೈತುಂಬ ಅವರು ಕೆಲಸ ಮಾಡಿದ್ದಾರೆ. ಅವರ ಸಂಶೋಧನ ಮಹಾಮಾರ್ಗರ್ಶಕರಾಗಿ ಮಾಡಿರುವ ಕೆಲಸಕಾರ್ಯಗಳು ಚಿರವಾಗಿರಲಿವೆ. ತಾವು ಬೆಳೆಯುವುದರ ಜೊತೆಗೆ ತಾವು ಜವಾಬ್ದಾರಿ ವಹಿಸಿಕೊಂಡ ಸಂಘ, ಸಂಸ್ಛೆಗಳನ್ನು ಬೆಳೆಸಿದರು. ವಿಚಾರ ಸಂಕಿರಣ, ಚರ್ಚಾ ಗೋಷ್ಠಿ ಕನ್ಮಡ ಅಧ್ಯಾಪಕರ ಪರಿಷತ್ತು ಪ್ರಾರಂಭಿಸಿದರು. ಜೀವಮಾನದುದ್ದಕ್ಕೂ ಕಾಯಕನಿರತರಾಗಿ ಬಸವಾದಿ ಶರಣರ ಸಾಹಿತ್ಯ ಸಂಶೋಧನೆ, ಸಂಗ್ರಹ, ಪ್ರಕಟಣೆ, ವಚನ ಸಾಹಿತ್ಯ ಸಂಗ್ರಹ ಮೂಲಕ ಮುಂದಿನ ಪೀಳಿಗೆಗೂ ನೆರವಾಗುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಸಂಶೋಧಕಿ ಡಾ. ಹನುಮಾಕ್ಷಿ ಗೋಗಿ ಅವರು ಕಲಬುರ್ಗಿಯವರ ಆಡಳಿತ ಆಲೋಚನೆಗಳ ಕುರಿತು ಮಾತನಾಡಿದರು. ಕಲಬುರ್ಗಿಯವರು ಸಂಶೋಧಕರಾಗಿ, ಸಮರ್ಥ ಆಡಳಿತಗಾರರಾಗಿದ್ದರು. ಶರಣರಂತೆ ನುಡಿದಂತೆ ನಡೆದರು. ಸಂಶೋಧನೆ ಅವರ ಉಸಿರು ಮತ್ತು ಬದುಕಾಗಿತ್ತು. ಕನ್ನಡ, ಬಸವಣ್ಣನವರ ಅಧ್ಯಯನಕ್ಕೆ ಜೀವನ ಮುಡುಪಾಗಿಟ್ಟಿದ್ದರು. ನಿವೃತ್ತಿಯಾಗುವವರೆಗೂ ಸಂಶೋಧನೆ, ವಿಶ್ಲೇಷಣೆ, ಪ್ರಕಟಣೆಯಲ್ಲಿ ಸಮರ್ಥವಾಗಿ ಮಾದರಿಯ ಆಡಳಿತ ನಡೆಸಿದರು. ಸಮಯ, ಬದ್ಧತೆ, ವೈಜ್ಞಾನಿಕ. ಯೋಜನೆ ರೂಪಿಸಿ ಜಾರಿಗೊಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ನಾನಾ ಅಧ್ಯಯನ ಪೀಠಗಳಿಗೆ ಅನುದಾನ ತಂದು ಕನ್ನಡ ಸಾಹಿತ್ಯ ಪ್ರಕಟಣೆ ಮಾಡಿಸಿದ್ದಾರೆ ಎಂದು ಹೇಳಿದರು.

ಡಾ. ಎಂ. ಎಸ್. ಮದಭಾವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಭಾಸ ಕನ್ನೂರ ಮತ್ತು ಉಷಾದೇವಿ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande