ಕೋಲಾರ, 0೯ ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ರವರ ಮೇಲಿನ ಘಟನೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಡೆದಿರುವ ಅವಮಾನವಾಗಿದೆ ಸಾಮಾಜಿಕ ನ್ಯಾಯ ಮತ್ತು ಜ್ಯಾತ್ಯಾತೀತ ನಿಲುವು ಹೊಂದಿರುವ ನ್ಯಾಯಾಧೀಶರ ಮೇಲಿನ ಘಟನೆಯು ಖಂಡನೀಯವಾಗಿದ್ದು ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸರ್ಕಾರ ಎಚ್ಚರವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕದಸಂಸ) ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಕಳಸಿ ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ವಿ ನಾರಾಯಣಸ್ವಾಮಿ ಮಾತನಾಡಿ ಭಾರತ ಸಂವಿಧಾನದ ಅತ್ಯುನ್ನತ ಅಂಗವಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯ ಪೀಠದ ಮೇಲೆ ನಡೆದ ಶೂ ಎಸೆತದ ದಾಳಿಯನ್ನು ಪ್ರತಿಯೊಬ್ಬ ನಾಗರೀಕರು ಖಂಡಿಸಬೇಕಾಗಿದೆ ನ ಭಾರತದ ರಾಷ್ಟ್ರಪತಿಗಳು ತಕ್ಷಣ ಮಧ್ಯ ಪ್ರವೇಶ ಮಾಡಿ ಈ ಕೃತ್ಯ ಎಸಗಿರುವ ಆರೋಪಿ ರಾಕೇಶ ಕಿಶೋರ್ ಅವರನ್ನು ಕೂಡಲೇ ಬಂಧಿಸಿ ಉನ್ನತ ನ್ಯಾಯಾಂಗ ತನಿಖೆ ನಡೆಸಿ, ಈತನ ಕುಟುಂಬಕ್ಕೆ ಸಂಬಂಧಪಟ್ಟ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಹಾಗೂ ಘಟನೆಯ ಹಿಂದೆ ವ್ಯವಸ್ಥಿತ ಪಿತೂರಿ ಮಾಡಿರುವ ಪ್ರಚೋದಕರನ್ನು ಪತ್ತೆ ಹಚ್ಚಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ವೇಮಗಲ್ ಸುಧಾಕರ್ ಮಾತನಾಡಿ ಸಂವಿಧಾನದ ಅಂಗವಾದ ನ್ಯಾಯಾಂಗದ ಹುದ್ದೆಯನ್ನು ಒಬ್ಬ ಪರಿಶಿಷ್ಟ ಜಾತಿಯವರಿಗೆ ಈ ಹುದ್ದೆ ಸಿಕ್ಕಿರುವುದನ್ನು ಸಹಿಸದ ಮನುವಾದಿ ಜಾತಿವಾದಿ ಕೋಮುವಾದಿಗಳ ಕುತಂತ್ರದಿಂದ ಈ ಘಟನೆ ನಡೆಸಿರುವುದನ್ನು ಕದಸಂಸ ಖಂಡಿಸುತ್ತದೆ ಈ ಅಹಿತಕರ ಘಟನೆಯ ಹೊಣೆಯನ್ನು ಭಾರತದ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರವರನ್ನು ಹೊಣೆಗಾರರನ್ನಾಗಿ ಮಾಡಬೇಕು ತಪ್ಪು ಮಾಡಿರುವ ಜಾತಿವಾದಿ ರಾಕೇಶ್ ಕಿಶೋರ್ ವಿರುದ್ದ ತನಿಖೆ ನಡೆಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಟಿ.ಜಯರಾಮ್, ಜಿಲ್ಲಾ ಸಂಘಟನಾ ಸಂಚಾಲಕರಾದ ಕೆಂಬೋಡಿ ರವೀಂದ್ರ ಕುಮಾರ್, ವಡಗೇರಿ ಮುನಿಯಪ್ಪ ಗುರುಮೂರ್ತಿ, ಮಗದುಮ್ ಷರೀಫ್, ಮಹಿಳಾ ಸಂಚಾಲಕಿ ಸೊಣ್ಣೇನಹಳ್ಳಿ ಮಂಜುಳಾ, ಮುಖಂಡರಾದ ಜನಪನಹಳ್ಳಿ ಸಿ.ಎನ್ ಚಂದ್ರಶೇಖರ್, ಹನುಮಂತು, ಮಂಜುನಾಥ್, ಶೇಷಾದ್ರಿ, ರಮೇಶ್, ಬೈರೇಗೌಡ, ಅಮರಾವತಿ, ಸುಹೇಲ್ ಅಹಮದ್, ಅಮರಾವತಿ, ವರಲಕ್ಷ್ಮೀ, ರಾಧಮ್ಮ, ಶಶಿಕಲಾ ಭಾಗವಹಿಸಿದ್ದರು.
ಚಿತ್ರ : ನ್ಯಾಯಾಧೀಶರ ಮೇಲೆ ಶೂ ಎಸೆತ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕದಸಂಸ) ನೇತೃತ್ವದಲ್ಲಿ ಕೋಲಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ನೀಡಲಾಯಿತು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್