ರಿಂಗ್ ರಸ್ತೆ ನಿರ್ಮಾಣಕ್ಕೆ ರೂಪುರೇಷೆ ಚರ್ಚೆ
ರಿಂಗ್ ರಸ್ತೆ ನಿರ್ಮಾಣಕ್ಕೆ ರೂಪುರೇಷೆ ಚರ್ಚೆ
ಚಿತ್ರ : ಕೋಲಾರ ನಗರದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ರಿಂಗ್ ರೋಡ್ ವ್ಯಾಪ್ತಿ, ಭೂಸ್ವಾಧೀನ, ಅಡೆತಡೆಗಳ ಬಗ್ಗೆ ಮಾಹಿತಿ ನೀಡಿದರು.


ಕೋಲಾರ, 0೯ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೋಲಾರ ನಗರದ ಹೊರವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣ ಸಂಬಂಧ ರೂಪುರೇಷೆ ಕುರಿತು ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಗುರುವಾರ ಚರ್ಚೆ ನಡೆಯಿತು.

ಕೋಲಾರ ನಗರದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ರಿಂಗ್ ರೋಡ್ ವ್ಯಾಪ್ತಿ, ಭೂಸ್ವಾಧೀನ, ಅಡೆತಡೆಗಳ ಬಗ್ಗೆ ಮಾಹಿತಿ ನೀಡಿದರು.

ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ೨.೮ ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿರುವುದಾಗಿ ತಿಳಿಸಿದರು. ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಮುಂದಿನ ೨೫ ವರ್ಷಗಳ ದೃಷ್ಟಿಕೋನ ಗಮನದಲ್ಲಿಟ್ಟುಕೊಂಡು ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ಇವತ್ತಿನ ಸಂಚಾರ ದಟ್ಟಣೆ, ಮುಂದೆ ಉಂಟಾಗ ಬಹುದಾದ ದಟ್ಟಣೆ ಗಮನದಲ್ಲಿ ಇಟ್ಟುಕೊಳ್ಳ ಬೇಕು. ನಾಲ್ಕು ಪಥ ರಸ್ತೆ ಮಾಡಬೇಕು. ಮತ್ತೆ ನಾಲ್ಕು ಪಥ ವಿಸ್ತರಣೆಗೆ ಜಾಗ ಇರಬೇಕು ಎಂದರು.

ರಿಂಗ್ ರಸ್ತೆ ನಿರ್ಮಾಣ ಸಂಬಂಧ ಮೊದಲು ಸ್ಯಾಟಿಲೈಟ್ ಮ್ಯಾಪ್ ಮಾಡಿ ಬಳಿಕ ಚರ್ಚಿಸೋಣ. ಆಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸೋಣ ಎಂದು ತಿಳಿಸಿದರು. ಚೆನ್ನೈ-ಬೆಂಗಳೂರು ಕಾರಿಡಾರ್, ರಾಷ್ಟ್ರೀಯ ಹೆದ್ದಾರಿ, ದೇವನಹಳ್ಳಿ ಹೆದ್ದಾರಿಗೆ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರದಿಂದ ಭೂಸ್ವಾಧೀನಕ್ಕೆ ಹಣ ಕೊಡಿಸುವ ಜವಾಬ್ದಾರಿ ನಮ್ಮದು. ಈ ಸಂಬಂಧ ರೈತರ ಜೊತೆ ಸಭೆ ಕೂಡ ನಡೆಸೋಣ ಎಂದರು.

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ನಗರ ಬೆಳೆಯುತ್ತಿರುವ ವಿಚಾರ, ಅಭಿವೃದ್ಧಿ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ರಿಂಗ್ ರಸ್ತೆ ನಿರ್ಮಾಣ ಮಾಡಬೇಕು. ಕೋಲಾರ ಭಾಗಕ್ಕೆ ಕೈಗಾರಿಕೆಗಳು ಹೆಚ್ಚು ಬರುತ್ತಿವೆ, ಬಿಲ್ಡರ್ಸ್ ಬರುತ್ತಿದ್ದಾರೆ. ಚೆನ್ನೈ-ಬೆಂಗಳೂರು ಕಾರಿಡಾರ್ ಉದ್ಘಾಟನೆ ಆದರೆ ಇನ್ನೂ ಹೆಚ್ಚು ವಾಹನ ಹಾಗೂ ಜನರು ಬರುತ್ತಾರೆ ಎಂದು ಹೇಳಿದರು.

೨೦೫೦ರಲ್ಲಿನ ದೃಷ್ಟಿಕೋನ ಇಟ್ಟುಕೊಂಡು ನಿರ್ಮಾಣ ಮಾಡಬೇಕು. ವೇಮಗಲ್ ಕೈಗಾರಿಕೆ ಪ್ರದೇಶದವರೆಗೆ ರಿಂಗ್ ರಸ್ತೆ ಸಂಪರ್ಕ ಇರಬೇಕು. ಈ ಕಡೆ ವಡಗೂರುವರೆಗೆ ವಿಸ್ತರಿಸಬೇಕು. ಮುಂದಿನ ವರ್ಷಗಳಲ್ಲಿ ಈ ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಆಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ರಿಂಗ್ ರಸ್ತೆ ವ್ಯಾಪ್ತಿಯ ರೇಡಿಯಸ್ ೬೦ ಕಿ.ಮೀ ಇರಲಿದೆ. ಇನ್ನೂ ಹೆಚ್ಚು ವಿಸ್ತರಣೆ ಕಷ್ಟ. ಈ ಸಂಬಂಧ ಇನ್ನಷ್ಟು ಚರ್ಚೆ ಆಗಬೇಕಿದೆ ಎಂದು ಹೇಳಿದರು.

ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಕರೆಯಲು ಸರ್ಕಾರ ? ೨.೮ ಕೋಟಿ ನೀಡಲಿದೆ ಎಂದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತನಾಡಿ, ಮುಂಬರುವ ವರ್ಷಗಳ ಸಂಚಾರ ದಟ್ಟಣೆ ಗಮನದಲ್ಲಿ ಇಟ್ಟು ಕೊಂಡೇ ರಿಂಗ್ ರಸ್ತೆ ನಿರ್ಮಾಣ ಮಾಡುತ್ತೇವೆ. ಬೇಗನೇ ಆದರೆ ಕಡಿಮೆ ವೆಚ್ಚ ತಗಲುತ್ತದೆ. ತಡವಾದರೆ ವೆಚ್ಚ ಹೆಚ್ಚಳವಾಗುತ್ತದೆ ಎಂದು ಹೇಳಿದರು.

ಕೋಮುಲ್ ನಿರ್ದೇಶಕ ಚಂಜಿಮಲೆ ಜೆ.ರಮೇಶ್, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಉರಟಾಗ್ರಹಾರ ಚೌಡರೆಡ್ಡಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಲೋಕೋಪ ಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರಾಮಮೂರ್ತಿ, ನಿವೃತ್ತ ಅಧಿಕಾರಿ ಮಂಜುನಾಥ್ ಇದ್ದರು.

ಚಿತ್ರ : ಕೋಲಾರ ನಗರದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ರಿಂಗ್ ರೋಡ್ ವ್ಯಾಪ್ತಿ, ಭೂಸ್ವಾಧೀನ, ಅಡೆತಡೆಗಳ ಬಗ್ಗೆ ಮಾಹಿತಿ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande