ಬಳ್ಳಾರಿ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಸೂರ್ಯಕಾಂತಿ ಮತ್ತು ಶೇಂಗಾ ಉತ್ಪನ್ನ ಖರೀದಿಸಲಾಗುವುದು ಎಂದು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
*ಸೂರ್ಯಕಾಂತಿ:*
ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಕೇಂದ್ರ ಸರ್ಕಾರ ನಿಗಧಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ ರೂ.7,721 ರಂತೆ ರೈತರಿಂದ ಖರೀದಿಸಲಾಗುವುದು.
ನಗರದ ಎಪಿಎಂಸಿ ಯಾರ್ಡ್ ನ ಎಪಿಎಂಸಿ ಆಡಳಿತ ಕಚೇರಿಯಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಕರ್ನಾಟಕ ಸಹಕಾರ ಎಣ್ಣೇ ಬೀಜ ಬೆಳೆಗಾರರ ಮಾರಾಟ ಮಹಾ ಮಂಡಳಿ ನಿಯಮಿತ ಬಳ್ಳಾರಿ ಶಾಖೆಯು ಖರೀದಿ ಏಜೆನ್ಸಿಯಾಗಿದೆ.
*ಶೇಂಗಾ:*
ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ ಉತ್ಪನ್ನವನ್ನು ಕೇಂದ್ರ ಸರ್ಕಾರ ನಿಗಧಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ ರೂ.7,263 ರಂತೆ ರೈತರಿಂದ ಖರೀದಿಸಲಾಗುವುದು.
ನಗರದ ಎಪಿಎಂಸಿ ಯಾರ್ಡ್ ನ ಎಪಿಎಂಸಿ ಆಡಳಿತ ಕಚೇರಿ ಮತ್ತು ಸಂಡೂರು ಪಟ್ಟಣದ ವಿಜಯ ವೃತ್ತದ ರೈತರ ಸೇವಾ ಸಹಕಾರ ಬ್ಯಾಂಕ್ ಇಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಕರ್ನಾಟಕ ಸಹಕಾರ ಎಣ್ಣೇ ಬೀಜ ಬೆಳೆಗಾರರ ಮಾರಾಟ ಮಹಾ ಮಂಡಳಿ ನಿಯಮಿತ ಬಳ್ಳಾರಿ ಶಾಖೆಯು ಖರೀದಿ ಏಜೆನ್ಸಿಯಾಗಿದೆ.
ಮಾಹಿತಿಗಾಗಿ ಶಿವಮೂರ್ತಿ ಡಿ.ಹೆಚ್-ಮೊ.8722047273 ಗೆ ಸಂಪರ್ಕಿಸಬಹುದು.
*ಬೇಕಾದ ದಾಖಲೆ:*
2025-26ನೇ ಸಾಲಿನ ಪಹಣಿ ಪತ್ರ. ರೈತರು ತಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರಬೇಕು ಹಾಗೂ ಎಫ್ಐಡಿ ಪಡೆಯುವುದು ಕಡ್ಡಾಯ. ರೈತರಲ್ಲಿ ಫ್ರೂಟ್ಸ್ ಐಡಿ ಇಲ್ಲದೇ ಇದ್ದಲ್ಲಿ ಅಥವಾ ಫ್ರೂಟ್ಸ್ ನಲ್ಲಿ ಯಾವುದಾದರು ತಾಂತ್ರಿಕ ದೋಷವಿದ್ದಲ್ಲಿ ರೈತರು ಕೃಷಿ ಇಲಾಖೆ ಕಚೇರಿಗೆ ಸಂಪರ್ಕಿಸಿ ಅವಶ್ಯಕ ಮಾಹಿತಿ ಪಡೆದು ಸಲ್ಲಿಸಬೇಕು.
ಆಧಾರ್ ಕಾರ್ಡ್ (ಮೂಲ ಪ್ರತಿ). ಬ್ಯಾಂಕ್ ಖಾತೆ (ಆಧಾರ್ ಕಾರ್ಡ್ ನೊಂದಿಗೆ ಜೋಡಣೆಗೊಂಡ) ಪುಸ್ತಕದ ನಕಲು ಪ್ರತಿ. ಒಣಗಿದ ಹಾಗೂ ಸ್ವಚ್ಛ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಮತ್ತು ಶೇಂಗಾ ಉತ್ಪನ್ನವನ್ನು ಮಾರಾಟಕ್ಕಾಗಿ ಕೇಂದ್ರಕ್ಕೆ ತರುವುದು. ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರುಗಳನ್ನು 80 ದಿನಗಳೊಳಗಾಗಿ ನೋಂದಾಯಿಸಿಕೊಳ್ಳಬೇಕು.
ನಿಗಧಿತ ಅವಧಿಯೊಳಗೆ ನೋಂದಣಿಗೊಂಡ ರೈತರಿಂದ ಪ್ರತಿ ಎಕರೆಗೆ 04 ಕ್ವಿಂಟಾಲ್ ಸೂರ್ಯಕಾಂತಿ ಉತ್ಪನ್ನವನ್ನು ಗರಿಷ್ಠ 20 ಕ್ವಿಂಟಾಲ್ ವರೆಗೆ ಖರೀದಿಸಲಾಗುವುದು ಮತ್ತು ಪ್ರತಿ ಎಕರೆಗೆ 03 ಕ್ವಿಂಟಾಲ್ ಶೇಂಗಾ ಉತ್ಪನ್ನವನ್ನು ಗರಿಷ್ಠ 15 ಕ್ವಿಂಟಾಲ್ ವರೆಗೆ ಮಾತ್ರ 90 ದಿನಗಳವರೆಗೆ ಖರೀದಿಸಲಾಗುವುದು.
ಕಚೇರಿ ಕೆಲಸದ ವೇಳೆಯಲ್ಲಿ ಮಾತ್ರ ಖರೀದಿಸಲಾಗುವುದು. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖರೀದಿಸಲಾಗುವುದು.
ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ರೈತರೇ ನೇರವಾಗಿ ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್