
ಬಳ್ಳಾರಿ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಂಗಾರ ಕಳುವು ಪ್ರಕರಣದಲ್ಲಿ ತನಿಖೆಯು ಬಳ್ಳಾರಿ ನಗರಕ್ಕೆ ತಲುಪಿದ್ದು ಬಳ್ಳಾರಿಯ ವ್ಯಾಪಾರಿಯನ್ನು ಕೇರಳ ಎಸ್ಐಟಿ ತಂಡವು ವಿಚಾರಣೆಗೆ ಒಳಪಡಿಸಿ 500 ಗ್ರಾಂ ಬಂಗಾರವನ್ನು ವಶಕ್ಕೆ ಪಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳನ್ನು ಆಧರಿಸಿ, ಬಳ್ಳಾರಿ ನಗರದ ರೊದ್ದಂ ಜ್ಯುಯಲರ್ಸ್ನ ಮಾಲೀಕ ಗೋವರ್ಧನ್ ಅವರು ವಿವಾದದ ಕೇಂದ್ರ ಬಿಂದುವಾಗಿ ಕೇರಳ ಪೊಲೀಸರ ಬಂಧನದಲ್ಲಿರುವ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯಿಂದ ಬಂಗಾರವನ್ನು ಖರೀದಿ ಮಾಡಿದ್ದರು. ಉನ್ನಿಕೃಷ್ಣನ್ ಅವರು ಬಂಗಾರದ ವ್ಯಾಪಾರಿ ಆಗಿದ್ದು, ನಾವು ಖರೀದಿ ಮಾಡಿರುವ ಬಂಗಾರವು ದೇವಸ್ಥಾನದ್ದು ಎನ್ನುವ ಮಾಹಿತಿ ನಮಗಿಲ್ಲ ಎಂದು ಎಸ್ಐಟಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಎಸ್ಐಟಿಯ ವಿಚಾರಣೆಯಲ್ಲಿ ಗೋವರ್ಧನ್ ಅವರು, ಉನ್ನಿಕೃಷ್ಣನ್ ಪೊಟ್ಟಿ ಅವರು ಬಂಗಾರದ ವ್ಯಾಪಾರಿಗಳು. ನಾವು ಅವರಿಂದ ಕೆಲ ವರ್ಷಗಳಿಂದ ಬಂಗಾರವನ್ನು ಖರೀದಿ ಮಾಡುತ್ತಿದ್ದೇವೆ. ಈ ಬಾರಿ ಖರೀದಿ ಮಾಡಿರುವ ಬಂಗಾರವು ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನದಕ್ಕೆ ಸಂಬಂಧಪಟ್ಟಿದ್ದು ಎನ್ನುವುದು ಗೊತ್ತಿಲ್ಲ. ಸಹಜವಾಗಿಯೇ ನಾವು, ಬಂಗಾರವನ್ನು ಖರೀದಿಸಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೇರಳ ಪೊಲೀಸರ ಎಸ್ಐಟಿ ತಂಡವು ಗೋವರ್ಧನ ಅವರಿಂದ 500 ಗ್ರಾಂ ಪ್ರಮಾಣದ ಬಂಗಾರದ ಬಾರ್ಗಳನ್ನು ವಶಕ್ಕೆ ಪಡೆದಿದೆ. ಎಸ್ಐಟಿ ವಿಚಾರಣೆ ಮುಂದುವರೆದಿದ್ದು, ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ನೋಟೀಸ್ ನೀಡಿದೆ ಎಂದು ಹೇಳಲಾಗಿದೆ.
ಕೇರಳ ಎಸ್ಐಟಿ ತಂಡದ ಎಸ್ಪಿ ಎಸ್. ಶಶಿಧರನ್ ನೇತೃತ್ವದತಂಡವು ಬಳ್ಳಾರಿಗೆ ಆಗಮಿಸಿತ್ತು ಎಂದು ಹೇಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್