ಕೋಲಾರ, ೧೯ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ದೀಪಾವಳಿ ಕೊಡುಗೆ ಕೊಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ ಖಾತಾ ನೆಪದಲ್ಲಿ ೧೫,೦೦೦ ಕೋಟಿ ಸುಲಿಗೆ ಮಾಡಿ ಬೆಂಗಳೂರು ಗುಂಡಿಗಳನ್ನು ಮುಚ್ಚಲು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಕೋಲಾರದ ಮುಳಬಾಗಿಲು ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಜೆಡಿಎಸ್ ಪಕ್ಷ ವತಿಯಿಂದ ದೀಪಾವಳಿ ಬಂಪರ್ ಆಫರ್ ನ್ನು ರಾಜ್ಯದ ಜನತೆ ಮುಂದೆ ಗುರುವಾರ ಬಿಡುಗಡೆ ಮಾಡುತ್ತೇವೆ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ಅರ್ಜಿಗೆ ೫೦೦ ರೂಪಾಯಿ ಶುಲ್ಕ . ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಈ ರಾಜ್ಯ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ೩೦/೪೦ ನಿವೇಶನಕ್ಕೆ ೪ರಿಂದ ೮ ಲಕ್ಷ ರೂಪಾಯಿವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು ೧೦ರಿಂದ ೧೩ ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿತ್ತು ಈಗ ಎ ಖಾತಾ ಮೂಲಕ ೧೫,೦೦೦ ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಹೇಳಿದರು.
ಸ್ಥಳೀಯ ಚುನಾವಣೆಯಲ್ಲಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಮೈತ್ರಿ ಗಟ್ಟಿಯಾಗಿದೆ ಮುಂದುವರೆಯುತ್ತೆ ಈಗಾಗಲೇ ಸನ್ಮಾನ್ಯ ದೇವೇಗೌಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗೌಡರು ಗಟ್ಟಿಯ ನಿಲುವಿಂದ ಮೈತ್ರಿಗೆ ಒಪ್ಪಿಗೆ ನೀಡಿದ್ದಾರೆ. ಮೈತ್ರಿಯಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ವಾತಾವರಣ ಸೃಷ್ಟಿಯಾಗುವುದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ನಮ್ಮ ಮೈತ್ರಿ ಗಟ್ಟಿಯಾಗಿ ಮುಂದುವರೆಯುತ್ತೆ ಇದರಲ್ಲಿ ಯಾವುದೇ ಸಂಶಯ ಬೇಡ ಅಂತ ಹೇಳಿದರು.
ರಾಜ್ಯದಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ರು. ಜೆಡಿಎಸ್, ಬಿಜೆಪಿಗೆ ಅನುದಾನ ನೀಡಿಲ್ಲ, ಈ ಬಗ್ಗೆ ಹೋರಾಟ ಮಾಡ್ತೇವೆ. ಸದನದಲ್ಲಿ ಕುಮಾರಣ್ಣ ಅಂತಹ ನಾಯಕರ ಕೊರತೆ ಕಾಡುತ್ತಿದೆ. ರಾಜ್ಯ ಸಚಿವ ಸಂಪುಟ ವಿಚಾರ ಅದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ, ಸಚಿವ ಸಂಪುಟ ಪುನರ್ ರಚನೆಯಿಂದ ರಾಜ್ಯದ ಅಭಿವೃದ್ಧಿ ಆಗಲ್ಲ. ಈಗಿರುವ ಸಚಿವ ಸಂಪುಟದಲ್ಲಿ ಇರುವವರನ್ನು ಕೈಬಿಟ್ಟು ಹೊಸ ಮುಖಗಳಿಗೆ ನೀಡಿದ್ರು ಕೂಡ, ರಾಜ್ಯದಲ್ಲಿ ಅಭಿವೃದ್ದಿ ಶೂನ್ಯ. ಸಂಪೂರ್ಣವಾಗಿ ಕುಂಠಿತವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶ ಕಟ್ಟುವ ಕೆಲಸ ಆರ್ಎಸ್ಎಸ್ ಮಾಡಿಕೊಂಡು ಬಂದಿದೆ. ನೂರು ವರ್ಷ ಪೂರೈಸಿರುವ ಸಂಘವಾಗಿದೆ. ಆರ್ಎಸ್ಎಸ್ ನಿಂದ ದೇಶಕ್ಕೆ ಸಮಸ್ಯೆ ಉಂಟಾಗಿಲ್ಲ. ಶಿಸ್ತು ಬದ್ದವಾಗಿ ಸಮಾಜ ಕಟ್ಟುವ ಕೆಲಸ ಮತ್ತು ಚಿಂತನೆ ಮಾಡಿದೆ. ಕಾಂಗ್ರೆಸ್ ನ ಕೆಲ ವ್ಯಕ್ತಿಗಳು ವಿಚಾರವನ್ನು ಡರ್ಷನ್ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದವರು.
ಗೂಗಲ್ ಹಬ್ ಬೆಂಗಳೂರಿನಿ0ದ ಆಂಧ್ರಕ್ಕೆ ಹೋಗಿದೆ. ಇದರಿಂದ ರಾಜ್ಯಕ್ಕೆ ನಷ್ಟವಾಗಿದೆ. ಬೆಂಗಳೂರಿಗೆ ಐಟಿ ಸೆಕ್ಟರ್ ಗಳನ್ನು ತಂದವರು ದೇವೇಗೌಡರು. ಇದರ ಬಗ್ಗೆ ಚರ್ಚೆ ಮಾಡದೆ ಆರ್ಎಸ್ಎಸ್ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದೆ. ಕುಮಾರಣ್ಣ ಕೇಂದ್ರದಲ್ಲಿ ಸಚಿವರಾಗಿರುವ ಕಾರಣ ರಾಜ್ಯದಲ್ಲಿ ಜೆಡಿಎಸ್ ಮಂಕಾಗಿಲ್ಲ. ರಾಜ್ಯದ ವಿಚಾರಗಳ ಬಗ್ಗೆ ಕುಮಾರಣ್ಣ ಸ್ಪಂದಿಸುತ್ತಾ, ಪ್ರತಿ ವಿಚಾರದ ಬಗ್ಗೆಯೂ ಚರ್ಚೆ ಮಾಡ್ತಿದ್ದಾರೆ. ರಾಜ್ಯದಲ್ಲಿ ಕುಮಾರಸ್ವಾಮಿ ಅವರಂಥ ನಾಯಕರ ಕೊರತೆ ಕಾಣ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು, ಶಾಸಕರಾದ ಸಮೃದ್ಧಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ತುಪಲ್ಲಿ ಚೌಡರೆಡ್ಡಿ, ಜೆ.ಕೆ ಕೃಷ್ಣಾರೆಡ್ಡಿ, ಸಿಎಂಆರ್ ಶ್ರೀನಾಥ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಚಿತ್ರ : ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್